ಮುಂಡಗೋಡ: ತಾಲೂಕಿನಲ್ಲಿ ಪ್ರಸಕ್ತ ಮುಂಗಾರು ಹಂಗಾಮಿನಲ್ಲಿ ಕೆಲ ಗ್ರಾಮಗಳಲ್ಲಿ ಗೋವಿನಜೋಳದ ಬೆಳೆಗೆ ಲದ್ದಿಹುಳು ಬಾಧೆ ಕಂಡು ಬಂದ ಹಿನ್ನೆಲೆಯಲ್ಲಿ ಕೃಷಿ ಅಧಿಕಾರಿಗಳು ಜಮೀನುಗಳಿಗೆ ಭೇಟಿ ನೀಡಿ ರೈತರಿಗೆ ಮಾಹಿತಿ ನೀಡಿದರು.
ತಾಲೂಕಿನ ಹುನಗುಂದ, ವಡಗಟ್ಟಾ, ಇಂದೂರ, ಅರಶಿಣಗೇರಿ ಮತ್ತಿತರೆಡೆ ಲದ್ದಿ ಹುಳು ಬಾಧೆ ಕಂಡು ಬಂದಿದೆ. ಹೆಣ್ಣು ಹುಳು ಗುಂಪಾಗಿ ಎಲೆಯ ಮೇಲ್ಭಾಗ ಅಥವಾ ಕೆಳಭಾಗ ಇಲ್ಲವೆ ಸುಳಿಯಲ್ಲಿ ಸಾವಿರಾರು ಮೊಟ್ಟೆಗಳನ್ನು ಇಡುತ್ತದೆ. ಮೊಟ್ಟೆಯಿಂದ 2-3 ದಿನಗಳ ನಂತರ ಮರಿ ಹುಳುಗಳು ಹೊರಗಡೆ ಬಂದು ಗೋವಿನಜೋಳದ ಸುಳಿಯೊಳಗೆ ಹೋಗಿ ಎಲೆಗಳನ್ನು ತಿನ್ನುತ್ತವೆ.
ಬಾಧೆಯಿಂದ ತೊಂದರೆಗೀಡಾದ ಹುನಗುಂದ ಗ್ರಾಮದ ಜಮೀನುಗಳಲ್ಲಿನ ಬೆಳೆಯನ್ನು ಕ್ಕೆ ಕೃಷಿ ವಿಜ್ಞಾನ ಕೇಂದ್ರದ ಕೀಟ ತಜ್ಞೆ ಡಾ.ರೂಪಾ ಪಾಟೀಲ, ಸಹಾಯಕ ಕೃಷಿ ನಿರ್ದೇಶಕ ಎಂ.ಎಸ್. ಕುಲಕರ್ಣಿ, ಮಲ್ಲಿಕಾರ್ಜುನ ಬಣಕಾರ ಹಾಗೂ ಆತ್ಮಾ ಸಿಬ್ಬಂದಿ ಪರಿಶೀಲಿಸಿದರು. ಬೆಳೆಯಲ್ಲಿ ಪ್ರತಿ ಎಕರೆಗೆ 10 ಕೀಟ ಭಕ್ಷಕ ಪಕ್ಷಿಗಳಿಗೆ ಆಶ್ರಯ ತಾಣ ಒದಗಿಸಬೇಕು. ಬೆಳೆಯು 10-15ದಿನಗಳಿರುವಾಗ ಪ್ರತಿ ಎಕರೆಗೆ 15 ಫೆರೇಮೋನ್ ಬಲೆಗಳನ್ನು ಅಳವಡಿಸಬೇಕು ಎಂದು ರೈತರಿಗೆ ಸಲಹೆ ನೀಡಿದರು.
ಎಂ.ಎಸ್. ಕುಲಕರ್ಣಿ ಮಾತನಾಡಿ, ಲದ್ದಿಹುಳು ಬಾಧೆಯನ್ನು ರೈತರು ಆದಷ್ಟು ಆರಂಭದ ಹಂತದಲ್ಲಿಯೇ ನಿಯಂತ್ರಿಸಬೇಕು. ಇಲಾಖೆಯಲ್ಲಿ ಸಸ್ಯ ಸಂರಕ್ಷಣೆ ಔಷಧ ರಿಯಾಯಿತಿ ದರದಲ್ಲಿ ಲಭ್ಯವಿದ್ದು ರೈತರು ಸದುಪಯೋಗ ಪಡೆಯಬೇಕು ಎಂದರು.