ರಾಯಚೂರು: ಖಾಕಿ ಹಾಕಿಕೊಳ್ಳುವ ಭಾಗ್ಯ ಎಲ್ಲರಿಗೂ ಸಿಗುವುದಿಲ್ಲ. ಗೃಹ ರಕ್ಷಕರಿಗೆ ಖಾಕಿ ಹಾಕಿಕೊಳ್ಳುವ ಸೌಭಾಗ್ಯ ದೊರೆತಿದ್ದು, ಜನರಿಗೂ ಕೂಡಾ ಗೃಹ ರಕ್ಷಕರ ಮೇಲೆ ಅಪಾರ ನಂಬಿಕೆಯಿದ್ದು, ಅದನ್ನು ಉಳಿಸಿಕೊಂಡು ಹೋಗಬೇಕು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಬಿ.ನಿಖಿಲ್ ಹೇಳಿದರು.
ಸ್ಥಳೀಯ ಪಂ.ಸಿದ್ಧರಾಮ ಜಂಬಲದಿನ್ನಿ ರಂಗಮಂದಿರದಲ್ಲಿ ಅಖಿಲ ಭಾರತ ಗೃಹ ರಕ್ಷಕ ದಳದ ವಾರ್ಷಿಕ ದಿನಾಚರಣೆ ಕಾರ್ಯಕ್ರಮವನ್ನು ಭಾನುವಾರ ಉದ್ಘಾಟಿಸಿ ಮಾತನಾಡಿ, ಗೃಹ ರಕ್ಷಕರ ದಳ ಪೊಲೀಸ್ ಇಲಾಖೆಯ ಅವಿಭಾಜ್ಯ ಅಂಗವಾಗಿದೆ ಎಂದರು.
ಕೋವಿಡ್ ಸಂದರ್ಭ ಗೃಹ ರಕ್ಷಕರು ಜೀವದ ಹಂಗು ತೊರೆದು ಸೇವೆ ಸಲ್ಲಿಸಿದ್ದಾರೆ. ಯಾವುದೇ ಫಲಾಪೇಕ್ಷೆಯಿಲ್ಲದೆ ಸ್ವಯಂ ಪ್ರೇರಿತರಾಗಿ ಗೃಹ ರಕ್ಷಕರು ಕೆಲಸ ಮಾಡುತ್ತಿದ್ದಾರೆ. ಸಮಾಜ ಮತ್ತು ಜನರೊಂದಿಗೆ ಹೆಚ್ಚಿನ ಒಡನಾಟ ಹೊಂದಿರುವುದರಿಂದ ಗೃಹ ರಕ್ಷಕರ ಮೇಲೆ ಜನರಿಗೆ ಹೆಚ್ಚಿನ ವಿಶ್ವಾಸವಿದೆ ಎಂದು ತಿಳಿಸಿದರು.
ರಿಮ್ಸ್ ನಿರ್ದೇಶಕ ಬಸವರಾಜ ಪೀರಾಪುರ ಮಾತನಾಡಿ, ರಿಮ್ಸ್ ಆಸ್ಪತ್ರೆ ಆರಂಭದಿಂದ ಗೃಹ ರಕ್ಷಕರು ಕೆಲಸ ಮಾಡುತ್ತಿದ್ದು, ಕೋವಿಡ್ನಿಂದ ಮೃತಪಟ್ಟ ಸಂದರ್ಭದಲ್ಲಿ ಸಿಬ್ಬಂದಿ ಅವರ ಮನವೊಲಿಸಿ ಸೇವೆ ಮಾಡಿರುವುದು ಶ್ಲಾಘನೀಯವಾಗಿದೆ ಎಂದು ಹೇಳಿದರು.
ಹೆಲಿಕ್ಯಾಪ್ಟರ್ ದುರಂತದಲ್ಲಿ ಮೃತಪಟ್ಟ ಸೇನಾ ಮುಖ್ಯಸ್ಥ ಬಿಪಿನ್ ರಾವತ್ ಮತ್ತು ಸೈನಿಕರಿಗೆ ಈ ಸಂದರ್ಭ ಶ್ರದ್ಧಾಂಜಲಿ ಸಲ್ಲಿಸಲಾಯಿತು. ಮುಖ್ಯಮಂತ್ರಿ, ರಾಷ್ಟ್ರಪತಿ ಪದಕ ಪಡೆದ ಗೃಹ ರಕ್ಷಕರಿಗೆ ಸನ್ಮಾನಿಸಿ, ಗೌರವಿಸಲಾಯಿತು.
ಕಾರ್ಯಕ್ರಮದಲ್ಲಿ ಜಿಲ್ಲಾ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಶ್ರೀಹರಿಬಾಬು, ಗೃಹರಕ್ಷಕ ದಳದ ಜಿಲ್ಲಾ ಸಮಾದೇಷ್ಠ ಜಂಬಣ್ಣ ರಾಮಸ್ವಾಮಿ, ನಿವೃತ್ತ ಎಸ್ಪಿ ಎಸ್.ಬಿ.ಪಾಟೀಲ್, ಜಿಲ್ಲಾ ಖಜಾನೆ ಇಲಾಖೆ ಸಹಾಯಕ ನಿರ್ದೇಶಕ ಕೃಷ್ಣ ಶಾವಂತಗೇರಾ, ಮಾಜಿ ಸೈನಿಕ ವಿಜಯಾನಂದ ಉಪಸ್ಥಿತರಿದ್ದರು.