ಬೂದಿಕೋಟೆ: 2021&22ನೇ ಸಾಲಿನಲ್ಲಿ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಿದ ಹಿನ್ನೆಲೆಯಲ್ಲಿ ಬೂದಿಕೋಟೆಯ ಗುಲ್ಲಹಳ್ಳಿ ಗ್ರಾಪಂ ಪಿಡಿಒ ಶಿರೀನ್ ತಾಜ್ ಅವರಿಗೆ ರಾಜ್ಯಮಟ್ಟದ ಪ್ರಶಸ್ತಿ ಲಭಿಸಿದೆ.
ಜಿಲ್ಲೆಯಲ್ಲಿ ಪಿಡಿಒ ಅವರ ಕಾರ್ಯವೈಖರಿ ಮತ್ತು ಸೇವೆ ಪರಿಗಣಿಸಿದ ರಾಜ್ಯ ಸರ್ಕಾರ ಪ್ರಶಸ್ತಿಗೆ ಆಯ್ಕೆ ಮಾಡಿದ್ದು, ಮಾ.14ರಂದು ಬೆಂಗಳೂರಿನ ಬ್ಯಾಂಕ್ವೆಟ್ ಹಾಲ್ನಲ್ಲಿ ನಡೆಯುವ ರಾಜ್ಯಮಟ್ಟದ ನರೇಗಾ ಹಬ್ಬ ಕಾರ್ಯಕ್ರಮದಲ್ಲಿ ಪ್ರದಾನ ಮಾಡಲಾಗುತ್ತದೆ.
ಯೋಜನೆಯನ್ನು ಕೃಷಿ, ತೋಟಗಾರಿಕೆ, ರೇಷ್ಮೆ ಇಲಾಖೆ ಸೇರಿ ವಿವಿಧ ಇಲಾಖೆಗಳ ಸಹಯೋಗದಲ್ಲಿ ಮಾನವ ದಿನಗಳ ಗುರಿಯನ್ನು ಶೇ.100 ಕಾರ್ಯಗತಗೊಳಿಸುವ ಮೂಲಕ ಗುಲ್ಲಹಳ್ಳಿ ಗ್ರಾಪಂ ದಾಖಲೆ ಬರೆದಿದೆ. ಪಂಚಾಯಿತಿಯಲ್ಲಿ ಇದುವರೆಗೂ ಸುಮಾರು ಒಂದು ಕೋಟಿ ರೂ.ನಷ್ಟು ಅನುದಾನವನ್ನು ಯೋಜನೆ ಮೂಲಕ ಬಳಕೆ ಮಾಡಲಾಗಿದ್ದು, ಶೇ 49.77 ಮಹಿಳೆಯರು ಭಾಗವಹಿಸಿದ್ದಾರೆ. ಇವರಲ್ಲಿ ಶೇ.18.29 ಎಸ್ಸಿ ಸಮುದಾಯ, ಶೇ. 5.32 ಎಸ್ಟಿ ಸಮುದಾಯದ ಮಹಿಳೆಯರು ಭಾಗವಹಿಸಿದ್ದಾರೆ. ಸಮಯಕ್ಕೆ ಸರಿಯಾಗಿ ಯೋಜನೆಯ ಫಲಾನುಭವಿಗಳಿಗೆ ಹಣ ಜಮೆ ಮಾಡಿದ್ದಾರೆ.
ಆರೋಗ್ಯ, ಶಿಕ್ಷಣ ಮತ್ತು ಜಲ ಸಂರಕ್ಷಣೆ ಮಾಡುವ ಯೋಜನೆ ಕೈಗೆತ್ತಿಕೊಂಡು ರಾಜ್ಯಮಟ್ಟದಲ್ಲಿ ಗಮನ ಸೆಳೆದಿದ್ದಾರೆ. ಪಂಚಾಯಿತಿ ವ್ಯಾಪ್ತಿಯಲ್ಲಿ ಈಗಾಗಲೇ ಮಳೆನೀರು ಸಂರಕ್ಷಣೆಗಾಗಿ ಕೆರೆ&ಕುಂಟೆ, ಕಾಲುವೆ, ಕಲ್ಯಾಣಿಗಳನ್ನು ಪುನಶ್ಚೇತನಗೊಳಿಸಿದ್ದಾರೆ. ಬಹುಕಮಾನ್ ಚೆಕ್ ಡ್ಯಾಂ ನಿರ್ಮಿಸಿ ಮಳೆ ನೀರು ಇಂಗುವಂತೆ ಮಾಡಿ ಯಶಸ್ವಿಯಾಗಿದ್ದಾರೆ. ಗ್ರಾಮೀಣ ಪ್ರದೇಶದಲ್ಲಿ ಮೂಲಸೌಲಭ್ಯ ಮೇಲ್ದರ್ಜೆಗೇರಿಸಲು ಕ್ರಮ ಕೈಗೊಂಡಿದ್ದು ಶಾಲೆಗಳಿಗೆ ಆಟದ ಮೈದಾನ, ವಿದ್ಯಾರ್ಥಿಗಳ ಭದ್ರತೆಗಾಗಿ ಶಾಲೆಗಳಲ್ಲಿ ಕಾಂಪೌಂಡ್ ನಿರ್ಮಾಣ ಹಾಗೂ ಮಳೆ ನೀರು ಕೊಯ್ಲು ಪದ್ಧತಿ ಅನುಷ್ಠಾನಗೊಳಿಸಿದ್ದಾರೆ.
ಜಿಪಂ ಸಿಇಒ, ತಾಪಂ ಇಒ ಮಾರ್ಗದರ್ಶನದಲ್ಲಿ ನರೇಗಾ ಯೋಜನೆ ಮೂಲಕ ಪಂಚಾಯಿತಿ ವ್ಯಾಪ್ತಿಯಲ್ಲಿ ವಿವಿಧ ಅಭಿವೃದ್ಧಿ ಮಾಡಲಾಗಿದೆ. ಸರ್ಕಾರ ಗುರುತಿಸಿ ಪ್ರಶಸ್ತಿ ನೀಡುವ ಮೂಲಕ ಉತ್ತೇಜನ ನೀಡುತ್ತಿರುವುದರಿಂದ ಸಂತೋಷವಾಗಿದ್ದು, ಪ್ರಶಸ್ತಿಯಿಂದ ಜವಾಬ್ದಾರಿ ಹೆಚ್ಚಾಗಿದೆ.
ಶಿರೀನ್ ತಾಜ್, ಪಿಡಿಒ ಗುಲ್ಲಹಳ್ಳಿನರೇಗಾ ಯೋಜನೆಯಲ್ಲಿ ಗುಲ್ಲಹಳ್ಳಿ ಪಿಡಿಒ ಸರ್ಕಾರದ ಮಾರ್ಗದರ್ಶನ ಹಾಗೂ ಮಾನದಂಡ ಅನುಸರಿಸಿ ಉತ್ತಮ ಸಾಧನೆ ಮಾಡುತ್ತಿರುವ ಕಾರಣ ಸರ್ಕಾರ ರಾಜ್ಯಮಟ್ಟದ ಪ್ರಶಸ್ತಿಗೆ ಆಯ್ಕೆ ಮಾಡಿದೆ.
ವೆಂಕಟೇಶಪ್ಪ, ಇಒ, ತಾಪಂ