ಗುತ್ತಲ: ಕರೊನಾ ಸೋಂಕು ಹರಡುವುದನ್ನು ತಡೆಗಟ್ಟುವ ನಿಟ್ಟಿನಲ್ಲಿ ಪಟ್ಟಣದ ಜನಪ್ರತಿನಿಧಿಗಳು, ವೈದ್ಯರು ಹಾಗೂ ಅನೇಕ ಜನರ ಅಭಿಪ್ರಾಯದಂತೆ ತಹಸೀಲ್ದಾರ್ ಶಂಕರ ಜಿ.ಎಸ್. ಅವರು ಶುಕ್ರವಾರದಿಂದ ಜಾರಿಗೆ ಬರುವಂತೆ ಲಾಕ್ಡೌನ್ಗೆ ಆದೇಶಿಸಿದ್ದಾರೆ.
ಪ್ರತಿದಿನ ಮಧ್ಯಾಹ್ನ 12ರಿಂದ ಬೆಳಗ್ಗೆ 6ರವರೆಗೆ ಲಾಕ್ಡೌನ್ ಇದ್ದು, ಈ ಸಂದರ್ಭದಲ್ಲಿ ಯಾರೂ ರಸ್ತೆಯಲ್ಲಿ ಸಂಚರಿಸಬಾರದು, ವ್ಯಾಪಾರ, ವಹಿವಾಟು ಮಾಡಲು ಅಂಗಡಿಗಳನ್ನು ತೆರೆಯಬಾರದು ಎಂದು ತಿಳಿಸಲಾಗಿದೆ.
ಲಾಕ್ಡೌನ್ ಕುರಿತು ಪಟ್ಟಣ ಪಂಚಾಯಿತಿಯಿಂದ ಆಟೋದಲ್ಲಿ ಪ್ರಚಾರ ಮಾಡುತ್ತಿದ್ದಂತೆ, ಜನರು ಬೆಳಗ್ಗೆಯಿಂದಲೇ ತಮಗೆ ಬೇಕಾದ ಅಗತ್ಯದ ವಸ್ತುಗಳನ್ನು ಖರೀದಿಸಿದರು. ಪಟ್ಟಣದ ವಿವಿಧ ಕಚೇರಿಗಳಲ್ಲಿ ಸಿಬ್ಬಂದಿ ಮಾತ್ರ ಕಂಡು ಬಂದರು. 12ಗಂಟೆ ನಂತರ ಪಟ್ಟಣಕ್ಕೆ ವ್ಯಾಪಾರಕ್ಕಾಗಿ ಆಗಮಿಸಿದ್ದ ಅನೇಕರು ಅಂಗಡಿ ತೆರೆಯದಿರುವುದನ್ನು ಕಂಡು ಹಿಂದಿರುಗಿದರು. ಬಸ್ ನಿಲ್ದಾಣದಲ್ಲಿ ಹೋಟೆಲ್ ಬಂದ್ ಆಗಿದ್ದರಿಂದ ಪ್ರಯಾಣಿಕರು ತೊಂದರೆ ಅನುಭವಿಸುವಂತಾಯಿತು.
ಪಿಎಸ್ಐ ಎಂ.ಇ. ಮಣ್ಣಣ್ಣನವರ, ಪ.ಪಂ. ಮುಖ್ಯಾಧಿಕಾರಿ ಏಸು ಬೆಂಗಳೂರ ಹಾಗೂ ಸಿಬ್ಬಂದಿ ಪಟ್ಟಣದಲ್ಲಿ ಸಂಚರಿಸಿ, ಪರಿಶೀಲನೆ ಕೈಗೊಂಡರು.
ಗುತ್ತಲ ಪಟ್ಟಣದಲ್ಲಿ ಕರೊನಾ ಸೋಂಕು ಹೆಚ್ಚಾಗಬಾರದೆಂದು ಜನಪ್ರತಿನಿಧಿಗಳು, ವೈದ್ಯರು ಸೇರಿ ಅನೇಕರು ನಿತ್ಯವೂ ಲಾಕ್ಡೌನ್ ಮಾಡುವಂತೆ ತಮ್ಮಲ್ಲಿ ಬೇಡಿಕೆ ಇಟ್ಟ ಕಾರಣ ಹಾಗೂ ಪ್ರಸ್ತುತ ಪರಿಸ್ಥಿತಿಯಲ್ಲಿ ಕರೊನಾ ಹತೋಟಿ ಅನಿವಾರ್ಯವಾಗಿದ್ದರಿಂದ ಲಾಕ್ಡೌನ್ ಜಾರಿ ಮಾಡಲಾಗಿದೆ. ಇದು ಎಷ್ಟು ದಿನ ಅಂತಾ ಹೇಳಲ್ಲ. ಪರಿಸ್ಥಿತಿ ನೋಡಿಕೊಂಡು ಲಾಕ್ಡೌನ್ ಹಿಂಪಡೆಯಲಾಗುವುದು.
| ಶಂಕರ ಜಿ.ಎಸ್. ತಹಸೀಲ್ದಾರ್ ಹಾವೇರಿ