ಬೆಳಗಾವಿ: ಸೋಯಾಬೀನ್ ಉತ್ಪಾದನೆ ಮತ್ತು ಉತ್ಪಾದಕತೆ ಹೆಚ್ಚಿಸಿ, ರೈತರ ಆದಾಯ ದ್ವಿಗುಣಗೊಳಿಸುವಲ್ಲಿ ಗುಣಮಟ್ಟದ ಬೀಜ ಪೂರೈಕೆ ಅವಶ್ಯವಾಗಿದೆ ಎಂದು ಕೆಎಲ್ಇ ಕಾರ್ಯಾಧ್ಯಕ್ಷ ಡಾ.ಪ್ರಭಾಕರ ಕೋರೆ ಅಭಿಪ್ರಾಯಪಟ್ಟರು.
ನಗರದ ಕೆಎಲ್ಇ ಸಂಸ್ಥೆಯಲ್ಲಿ ಸೋಮವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಕೇಂದ್ರ ಸರ್ಕಾರದೊಂದಿಗೆ ಹೊಸ ತಳಿಗಳ ಗುಣಮಟ್ಟದ ಸೋಯಾಬೀನ್ ಬೀಜೋತ್ಪಾದನೆ ಕುರಿತು ಒಡಂಬಡಿಕೆಗೆ ಸಹಿ ಹಾಕಿದ ಬಳಿಕ ಅವರು ಮಾತನಾಡಿದರು.
ರಾಜ್ಯವೂ ಸೇರಿದಂತೆ ಸೋಯಾಬೀನ್ ಬೆಳೆಯುವ ಇತರ ರಾಜ್ಯಗಳಲ್ಲಿ ಅಧಿಕ ಇಳುವರಿ ನೀಡುವ ಹೊಸ ತಳಿಗಳ ಗುಣಮಟ್ಟದ ಬೀಜಗಳ ಕೊರತೆಯಿದೆ. ಇದರಿಂದ ರೈತರಿಗೆ ಸಮಸ್ಯೆಯಾಗುತ್ತಿದೆ. ಈ ಸಮಸ್ಯೆ ಮನದಲ್ಲಿಟ್ಟುಕೊಂಡು ಐಸಿಎಆರ್-ಕೆಎಲ್ಇ ಕೃಷಿ ವಿಜ್ಞಾನ ಕೇಂದ್ರದ ಮೂಲಕ ಹೊಸ ತಳಿಗಳ ಉತ್ಪಾದನೆ ಮಾಡಿ, ರಾಜ್ಯದ ರೈತರಿಗೆ ಪೂರೈಕೆ ಮಾಡಲು ಕೇಂದ್ರ ಸರ್ಕಾರದೊಂದಿಗೆ ಒಡಂಬಡಿಕೆ ಮಾಡಿಕೊಳ್ಳಲಾಗಿದೆ ಎಂದು ತಿಳಿಸಿದರು.
ಈ ಒಡಂಬಡಿಕೆಯಿಂದ ಸೋಯಾಬೀನ್ ಬೆಳೆಯುವ ಜಿಲ್ಲೆಯ ರೈತರರಿಗೆ ನೆರವಾಗಲಿದೆ. ಅಲ್ಲದೆ, ದೇಶದ ಇತರ ರಾಜ್ಯಗಳಾದ ಮಧ್ಯಪ್ರದೇಶ, ಉತ್ತರ ಪ್ರದೇಶ ಹಾಗೂ ಬಿಹಾರ ರಾಜ್ಯದ ರೈತರಿಗೂ ಕಾರ್ಯಕ್ರಮದ ಲಾಭ ದೊರೆಯಲಿದೆ ಎಂದು ಡಾ. ಕೋರೆ ಮಾಹಿತಿ ನೀಡಿದರು.
ಮತ್ತಿಕೊಪ್ಪ ವಿಜ್ಞಾನ ಕೇಂದ್ರದ ಅಧ್ಯಕ್ಷ ಬಿ.ಆರ್. ಪಾಟೀಲ ಒಡಂಬಡಿಕೆಗೆ ಸಹಿ ಹಾಕಿದರು. ಐಸಿಎಆರ್ನ ಭಾರತೀಯ ಸೋಯಾಬೀನ್ ಸಂಶೋಧನಾ ಸಂಸ್ಥೆ ನಿರ್ದೇಶಕ ಡಾ.ನೀತಾ ಖಾಂಡೇಕರ, ಡಾ. ಸಂಜಯ ಗುಪ್ತಾ, ಡಾ. ವಿ.ವೆಂಕಟಸುಬ್ರಮಣಿಯನ್, ನಿವೃತ್ತ ಕುಲಪತಿ ಡಾ. ಆರ್.ಆರ್. ಹಂಚಿನಾಳ, ಡಾ.ಶ್ರೀದೇವಿ ಅಂಗಡಿ, ಜಿ.ಬಿ. ವಿಶ್ವನಾಥ ಇದ್ದರು.