ನಂಜನಗೂಡು: ನಗರದಲ್ಲಿರುವ ತಾಲೂಕು ಕ್ರೀಡಾಂಗಣದಲ್ಲಿ ಬುಧವಾರ ಆಯೋಜಿಸಿದ್ದ ತಾಲೂಕು ಮಟ್ಟದ ದಸರಾ ಕ್ರೀಡಾಕೂಟದಲ್ಲಿ ಗ್ರಾಮೀಣ ಜನರು ಹಾಗೂ ಅಂಗವಿಕಲರು ವಿವಿಧ ಸ್ಪರ್ಧೆಗಳಲ್ಲಿ ಭಾಗವಹಿಸಿ ಗೆಲುವಿಗಾಗಿ ಸೆಣಸಾಡಿದರು.
ಕ್ರೀಡಾಕೂಟಕ್ಕೆ ತಹಸೀಲ್ದಾರ್ ಎಂ.ಶಿವಮೂರ್ತಿ ಚಾಲನೆ ನೀಡುವ ಮೂಲಕ ಹೋಬಳಿ ಮಟ್ಟದಲ್ಲಿ ಜಯಶೀಲರಾದವರಿಗೆ ತಾಲೂಕು ಮಟ್ಟದ ಕ್ರೀಡಾಕೂಟದಲ್ಲಿ ಅವಕಾಶ ನೀಡಲಾಯಿತು.
50 ಕೆ.ಜಿ. ಗೊಬ್ಬರ ಮೂಟೆ ಎತ್ತಿಕೊಂಡು ಓಡುವ ಸ್ಪರ್ಧೆ, ಮೂರು ಕಾಲಿನ ಓಟದ ಸ್ಪರ್ಧೆ, ನಿಧಾನಗತಿಯಲ್ಲಿ ಸೈಕಲ್ ಓಡಿಸುವ ಸ್ಪರ್ಧೆ, ಹಗ್ಗ ಜಗ್ಗಾಟ, ಗೋಣಿಚೀಲದಲ್ಲಿ ಕಾಲಿಟ್ಟು ಓಡುವ ಸ್ಪರ್ಧೆ, ಗುಂಡು ಎತ್ತುವ ಸ್ಪರ್ಧೆಯಲ್ಲಿ ಪುರುಷರು ತಮ್ಮ ಗೆಲುವಿಗಾಗಿ ಪರಾಕ್ರಮ ತೋರಿದರೆ, ಮಹಿಳೆಯರು ನೀರಿನ ಬಿಂದಿಗೆ ಹೊತ್ತು ಓಡುವ ಸ್ಪರ್ಧೆ, ಮ್ಯೂಸಿಕಲ್ ಚೇರ್ ಸ್ಪರ್ಧೆ, ಗೋಣಿಚೀಲದಲ್ಲಿ ಕಾಲಿಟ್ಟು ಓಡುವ ಸ್ಪರ್ಧೆ, ಒಂಟಿ ಕಾಲಿನ ಓಟದ ಸ್ಪರ್ಧೆ, ಹಗ್ಗ ಜಗ್ಗಾಟ, ರಂಗೋಲಿ ಸ್ಪರ್ಧೆಯಲ್ಲಿ ಮಿಂದೆದ್ದರು.
ಹಗ್ಗ ಜಗ್ಗಾಟ ಸ್ಪರ್ಧೆಯಲ್ಲಿ ಕಂದಾಯ ಹಾಗೂ ಪಂಚಾಯತ್ರಾಜ್ ಇಲಾಖೆಯ ಅಧಿಕಾರಿಗಳ ನಡುವೆ ಸ್ಪರ್ಧೆ ನಡೆಯಿತು. ತಹಸೀಲ್ದಾರ್ ಎಂ.ಶಿವಮೂರ್ತಿ, ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಶ್ರೀನಿವಾಸ್ ಸ್ಪರ್ಧೆಯಲ್ಲಿ ಭಾಗವಹಿಸುವ ಮೂಲಕ ಅಧಿಕಾರಿಗಳನ್ನು ಉತ್ತೇಜಿಸಿದರು. ಇನ್ನು ಅಂಗವಿಕಲರಿಗಾಗಿ ಗುಂಡು ಎಸೆತ ಹಾಗೂ ಬೌಲಿಂಗ್ ಬಕೆಟ್ ಸ್ಪರ್ಧೆಯನ್ನು ಏರ್ಪಡಿಸಲಾಗಿತ್ತು. ಸುಮಾರು 30ಕ್ಕೂ ಹೆಚ್ಚು ಅಂಗವಿಕಲ ಸ್ಪರ್ಧಿಗಳು ಪಾಲ್ಗೊಂಡು ಗಮನ ಸೆಳೆದರು. ಹಂಡುವಿನಹಳ್ಳಿ ಗ್ರಾಮದಲ್ಲಿ ಮಹಿಳೆಯರು ಹಾಗೂ ಪುರುಷರಿಗಾಗಿ ಪ್ರತ್ಯೇಕವಾಗಿ ಕೆಸರುಗದ್ದೆ ಓಟ ಸ್ಪರ್ಧೆ ನಡೆಯಿತು.
ವಿಜೇತರಾದ ಸ್ಪರ್ಧಿಗಳಿಗೆ ಪ್ರಮಾಣ ಪತ್ರವನ್ನು ಗುರುವಾರ ನಡೆಯುವ ಗ್ರಾಮೀಣ ದಸರಾ ಕಾರ್ಯಕ್ರಮದಲ್ಲಿ ಶಾಸಕ ಬಿ.ಹರ್ಷವರ್ಧನ್ ವಿತರಣೆ ಮಾಡಲಿದ್ದಾರೆ. ಅ.1ರಂದು ಮೈಸೂರಿನಲ್ಲಿ ನಡೆಯುವ ಜಿಲ್ಲಾ ಮಟ್ಟದ ಕ್ರೀಡಾಕೂಟದಲ್ಲಿ ಭಾಗವಹಿಸಲು ಅವಕಾಶವಿದೆ ಎಂದು ತಹಸೀಲ್ದಾರ್ ಎಂ.ಶಿವಮೂರ್ತಿ ತಿಳಿಸಿದರು.