ಮುಂಡಗೋಡ: ಗದ್ದೆಗೆ ತೆರಳಿ ಮರಳಿ ಮನೆಗೆ ಬರುತ್ತಿದ್ದಾಗ ಕರಡಿಯೊಂದು ರೈತನ ಮೇಲೆ ದಾಳಿ ನಡೆಸಿ ಗಂಭಿರವಾಗಿ ಗಾಯಗೊಳಿಸಿದ ಘಟನೆ ತಾಲೂಕಿನ ಮರಗಡಿ ಗ್ರಾಮದ ಹೊರವಲಯದಲ್ಲಿ ಶನಿವಾರ ಮಧ್ಯಾಹ್ನ ಸಂಭವಿಸಿದೆ.
ಮರಗಡಿ ಗ್ರಾಮದ ಫಕೀರೇಶ ಗೊಲ್ಲರ ಎಂಬ ರೈತ ಗದ್ದೆಗೆ ಹೋಗಿ ಮರಳಿ ಮನೆಗೆ ಬರುತ್ತಿದ್ದಾಗ ಎರಡು ಮರಿಗಳೊಂದಿಗೆ ಆಗಮಿಸಿದ ಕರಡಿ ಏಕಾಏಕಿ ದಾಳಿ ನಡೆಸಿ ಗಾಯಗೊಳಿಸಿದೆ.
ಕರಡಿ ದಾಳಿಯಿಂದ ಮುಖದ ಬಲಭಾಗದ ಚರ್ಮ ಕಿತ್ತು ಹೋಗಿದೆ. ತಲೆ ಹಾಗೂ ಬಲಗಣ್ಣಿಗೆ ಗಾಯಗಳಾಗಿವೆ. ವಿಷಯ ತಿಳಿದು ಕಾತೂರ ಅರಣ್ಯ ಇಲಾಖೆ ಅಧಿಕಾರಿ ಹಾಗೂ ಸಿಬ್ಬಂದಿ ಸ್ಥಳಕ್ಕೆ ತೆರಳಿ ಗಾಯಾಳುವನ್ನು ತಮ್ಮ ಜೀಪಿನಲ್ಲಿಯೇ ಮುಂಡಗೋಡ ತಾಲೂಕು ಆಸ್ಪತ್ರೆಗೆ ದಾಖಲಿಸಿ ಪ್ರಥಮ ಚಿಕಿತ್ಸೆ ಕೊಡಿಸಿ ನಂತರ ಹೆಚ್ಚಿನ ಚಿಕಿತ್ಸೆಗೆ ಹುಬ್ಬಳ್ಳಿ ಕಿಮ್ಸ್ಗೆ ದಾಖಲಿಸಿದ್ದಾರೆ. ಈ ಕುರಿತು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.