ಗದಗ: ಗದಗ-ಬೆಟಗೇರಿ ಅವಳಿ ನಗರದಲ್ಲಿ ಕ್ರೀಡಾಕೂಟದ ಅಬ್ಬರ ಜೋರಾಗಿದೆ. ನಗರದಲ್ಲಿ ಮೊಟ್ಟಮೊದಲ ಬಾರಿಗೆ ಆಯೋಜಿಸಿರುವ ಕೆ.ಎಚ್. ಪಾಟೀಲ ಫುಟ್ಬಾಲ್ ಲೀಗ್ ಪಂದ್ಯಾವಳಿಗಳಿಗೆ ವ್ಯಾಪಕ ಬೆಂಬಲ ವ್ಯಕ್ತವಾಗಿದ್ದು, ಕ್ರೀಡಾಭಿಮಾನಿಗಳಲ್ಲಿ ಹಬ್ಬದ ಸಂಭ್ರಮ ಮೂಡಿಸಿದೆ.
ಪಂದ್ಯಾವಳಿಯಲ್ಲಿ ಬರೋಬ್ಬರಿ 12 ತಂಡಗಳು ಪಾಲ್ಗೊಂಡಿವೆ. ಐಪಿಲ್ ಮಾದರಿಯಲ್ಲಿ ತಂಡಕ್ಕೊಂದು ವಿಭಿನ್ನ ಹೆಸರಿಟ್ಟು ಟೂರ್ನಾಮೆಂಟ್ ಆಯೋಜಿಸಲಾಗಿದೆ. ಮುಳಗುಂದ ರಸ್ತೆಯಲ್ಲಿರುವ ಫುಟ್ಬಾಲ್ ಮೈದಾನದಲ್ಲಿ ಶನಿವಾರದಿಂದ ಆರಂಭವಾಗಿರುವ ಕ್ರೀಡಾ ಹಬ್ಬ ಜುಲೈ 31ರ ವರೆಗೆ ನಡೆಯಲಿದ್ದು ಕ್ರೀಡಾಭಿಮಾನಿಗಳಿಗೆ ರಸದೌತಣ ಉಣಬಡಿಸಲಿದೆ.
ಯೂನಿಯನ್ ಆಫ್ ಯೂರೋಪ್ ಫುಟ್ಬಾಲ್ ಚಾಂಪಿಯನ್ಸ್ ಲೀಗ್ನವರು ಸಹ ಈ ಪಂದ್ಯಾವಳಿಗೆ ಮೆಚ್ಚುಗೆ ವ್ಯಕ್ತಪಡಿಸಿರುವುದು ವಿಶೇಷವಾಗಿದೆ. ಸೋಮವಾರ ಒಟ್ಟು 6 ಪಂದ್ಯಗಳು ಜರುಗಿದ್ದು, ಆಟಗಾರರು ತಮ್ಮ ವಿಶಿಷ್ಟ ಕೌಶಲ ಮೂಲಕ ಪ್ರೇಕ್ಷಕರಿಗೆ ರಸದೌತಣ ನೀಡಿದರು.
ವಾರಿಯರ್ಸ್ ಹಾಗೂ ಅನ್ ಬೀಟೇಬಲ್ ಮಧ್ಯೆ ನಡೆದ ತೀವ್ರ ಹಣಾಹಣಿಯಲ್ಲಿ ವಾರಿಯರ್ಸ್ ತಂಡದ ನಾಯಕ ರಾಮಚಂದ್ರ ಮುಂಡರಗಿ ಫಸ್ಟ್ ಗೋಲ್ ಹೊಡೆದಾಗ ಕ್ರೀಡಾಂಗಣದಲ್ಲಿ ಹರ್ಷದ ಅಲೆ ಎದ್ದಿತು. ವಿವೇಕಾನಂದ ಮತ್ತು ರಾಮಚಂದ್ರ ಮುಂಡರಗಿ ಎರಡು ಮತ್ತು ಮೂರನೇ ಗೋಲು ಹೊಡೆದಾಗಲಂತೂ ಕ್ರೀಡಾಂಗಣದಲ್ಲಿ ಶಿಳ್ಳೆ-ಚಪಾಳೆಗಳ ಸುರಿಮಳೆಗರೆಯಿತು. ಅನ್ ಬೀಟೇಬಲ್ ತಂಡದ ಸುದರ್ಶನ್ ಲೋಕೂರ್ ಒಂದು ಗೋಲು ಹೊಡೆದರು. ಜಿದ್ದಾಜಿದ್ದಿಯ ಪೈಪೋಟಿಯಲ್ಲಿ ವಾರಿಯರ್ಸ್ ತಂಡ ಗೆಲುವಿನ ನಗೆ ಬೀರಿತು. ಆಕಾಶ ಪಂದ್ಯ ಶ್ರೇಷ್ಠ ಪ್ರಶಸ್ತಿ ಪಡೆದರು.
ಸ್ಟ್ರೈಕರ್ಸ್ ಮತ್ತು ಕಾರ್ನರ್ಸ್ ನಡುವಿನ ಎರಡನೇ ಪಂದ್ಯದಲ್ಲಿ ಯಾವುದೇ ಗೋಲುಗಳಿಲ್ಲಿದೆ ಡ್ರಾದಲ್ಲಿ ಮುಕ್ತಾಯಗೊಂಡಿತು. ಸಮೀರ್ ನದಾಫ್ ಪಂದ್ಯ ಶ್ರೇಷ್ಠ ಪ್ರಶಸ್ತಿ ಪಡೆದರು. ಟರ್ವಿುನೇಟರ್ಸ್ ಮತ್ತು ಕಿಕ್ಕರ್ಸ್ ಮಧ್ಯ ಮೂರನೇ ಪಂದ್ಯದಲ್ಲಿ ಟರ್ವಿುನೇಟರ್ಸ್ ತಂಡದ ಸಮೀವುಲ್ಲಾ ಶೇಖ್ ಮೂರು ಗೋಲು ದಾಖಲಿಸಿ ತಂಡಕ್ಕೆ ಜಯ ತಂದುಕೊಟ್ಟರು. ವಿಕಾಸ ಪಂದ್ಯ ಶ್ರೇಷ್ಠ ಪ್ರಶಸ್ತಿ ಪಡೆದುಕೊಂಡರು. ಹಸ್ಟಲರ್ಸ್ ಮತ್ತು ಡಿಫೆಂಡರ್ ಮಧ್ಯದ ನಾಲ್ಕನೇ ಪಂದ್ಯದಲ್ಲಿ ಎರಡು ತಂಡದಿಂದ ಒಂದೊಂದು ಗೋಲು ದಾಖಲಾಗಿದ್ದರಿಂದ ಪಂದ್ಯ ಡ್ರಾದಲ್ಲಿ ಮುಕ್ತಾಯಗೊಂಡಿತು. ಮಂಜು ಪೂಜಾರ ಪಂದ್ಯ ಶ್ರೇಷ್ಠ ಪ್ರಶಸ್ತಿ ಪಡೆದರು. ಅವೆಂಜರ್ಸ್-ಚಾಲೆಂಜರ್ಸ್ ಪಂದ್ಯದಲ್ಲಿ ಅವೆಂಜರ್ಸ್ ತಂಡದ ರವಿ ಬಾಕಳೆ ಎರಡು ಗೋಲು, ಶ್ರೀನಿವಾಸ ಪಡಿಕಲ್ ಒಂದು ಗೋಲು ಹೊಡೆದರು. ಚಾಲೆಂಜರ್ಸ್ ತಂಡದ ಪರವಾಗಿ ದೀಪಕ ಒಂದು ಗೋಲು ಹೊಡೆದರು. ಇದರಲ್ಲಿ ಅವೆಂಜರ್ಸ್ ತಂಡ ಗೆಲುವು ಸಾಧಿಸಿತು. ಶ್ರೀನಿವಾಸ ಪಡಿಕಲ್ ಪಂದ್ಯ ಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು. ಸ್ಕೈಲೈನ್ ಮತ್ತು ಸ್ಕ್ಯಾಂಡ್ರನ್ ನಡುವಿನ ಪಂದ್ಯದಲ್ಲಿ ಸ್ಕ್ಯಾಂಡ್ರನ್ ತಂಡದ ಅರ್ಜುನ ಮೂರು ಗೋಲು ಹೊಡೆದು ತಂಡಕ್ಕೆ ಜಯ ತಂದುಕೊಟ್ಟರು. ಈ ಎಲ್ಲ ಪಂದ್ಯಗಳನ್ನು ಗದಗ ಬೆಟಗೇರಿ ಅವಳಿ ನಗರದ ಸುಮಾರು ನಾಲ್ಕು ಸಾವಿರ ಜನ ವೀಕ್ಷಣೆ ಮಾಡಿದ್ದು ವಿಶೇಷವಾಗಿತ್ತು.