ಸಾಗರ: ಇತಿಹಾಸ ಪ್ರಸಿದ್ಧ ಗಣಪತಿ ಕೆರೆ ಸರ್ವೆ ಬುಧವಾರ ನಡೆಯಲಿದೆ. ಈ ಹಿನ್ನೆಲೆಯಲ್ಲಿ ಮಾಜಿ ಸಚಿವ ಕಾಗೋಡು ತಿಮ್ಮಪ್ಪ, ರಾಜಕೀಯ ಪಕ್ಷಗಳ ಪ್ರಮುಖರು, ಸಾಹಿತಿಗಳಾದ ಡಾ. ನಾ.ಡಿಸೋಜ, ವಿಲಿಯಂ, ಡಾ. ಜಿ.ಎಸ್.ಭಟ್ ಸೇರಿ ಪರಿಸರ ಮತ್ತು ಅಭಿವೃದ್ಧಿ ಪರ ಇರುವವರ ಮನೆಗೆ ಭೇಟಿ ನೀಡಿ ಸರ್ವೆ ಸಂದರ್ಭ ಸೂಕ್ತ ಸಲಹೆ ನೀಡುವಂತೆ ಮನವಿ ಮಾಡಿದ್ದೇನೆ ಎಂದು ಶಾಸಕ ಹರತಾಳು ಹಾಲಪ್ಪ ಹೇಳಿದರು.
ಮಂಗಳವಾರ ಕಾಗೋಡು ತಿಮ್ಮಪ್ಪ ಅವರ ನಿವಾಸಕ್ಕೆ ಭೇಟಿ ನೀಡಿದ ಸಂದರ್ಭ ಮಾತನಾಡಿದ ಅವರು, ಕೆರೆ ಒತ್ತುವರಿಯಾಗಿದೆ ಎಂದು ಸಾರ್ವಜನಿಕರ ದೂರಿನ ಹಿನ್ನೆಲೆಯಲ್ಲಿ ಸರ್ಕಾರಕ್ಕೆ ಸರ್ವೆ ನಡೆಸುವಂತೆ ಇತ್ತೀಚೆಗೆ ಮನವಿ ಸಲ್ಲಿಸಲಾಗಿತ್ತು. ಹಾಗಾಗಿ ಭೂಮಾಪನ ಕಂದಾಯ ವ್ಯವಸ್ಥೆ ಮತ್ತು ಭೂ ದಾಖಲೆಗಳ ಇಲಾಖೆಯ ಹಿರಿಯ ಅಧಿಕಾರಿ ನೇತೃತ್ವದಲ್ಲಿ ಸರ್ವೆ ನಡೆಯಲಿದೆ ಎಂದರು.
ಗಣಪತಿ ಕೆರೆ ಒತ್ತುವರಿಗೆ ಸಂಬಂಧಿಸಿ ಯಾರನ್ನೂ ಉಳಿಸುವ ಪ್ರಶ್ನೆಯೇ ಇಲ್ಲ. ಸರ್ವೆ ಸಂದರ್ಭ ನಿವೃತ್ತ ಸರ್ಕಾರಿ ಮತ್ತು ಖಾಸಗಿ ಸರ್ವೆಯರ್ಗಳೂ ಪಾಲ್ಗೊಳ್ಳಬಹುದು. ಕೆರೆ ಮೇಲ್ಭಾಗದ 3 ಎಕರೆ ಜಾಗ ಕಾಗೋಡು ತಿಮ್ಮಪ್ಪ ಅವರು ಸಾರ್ವಜನಿಕ ಉದ್ದೇಶಕ್ಕಾಗಿ ಖಾಸಗಿಯವರಿಂದ ಭೂಸ್ವಾಧೀನ ಮಾಡಿಕೊಂಡಿದ್ದಾಗಿದೆ. ಕೆಲವರು ಇದನ್ನೂ ಕೆರೆ ಜಾಗ ಎಂದು ಬಿಂಬಿಸುತ್ತಿದ್ದಾರೆ. ಈ ಸರ್ವೆ ಮೂಲಕ ಒತ್ತುವರಿ ನಿಖರತೆ ಸಿಗುವ ಆಶಾಭಾವನೆ ಇದೆ ಎಂದು ತಿಳಿಸಿದರು.
ಲೇಖಕ ವಿಲಿಯಂ ಮಾತನಾಡಿ, ಬಹಳ ವರ್ಷಗಳ ನಂತರ ಕೆರೆ ಸರ್ವೆ ಅಧಿಕೃತವಾಗಿ ನಡೆಯುತ್ತಿರುವುದು ಸಂತೋಷ ತಂದಿದೆ. ಜತೆಗೆ ನಗರ ವ್ಯಾಪ್ತಿಯ ಕೆಲ ಪ್ರಮುಖ ರಸ್ತೆಗಳಲ್ಲಿ ಫುಟ್ಪಾತ್ ನಿರ್ವಿುಸಿ ಸುಗಮ ಸಂಚಾರಕ್ಕೆ ಅವಕಾಶ ಮಾಡಿಕೊಡಬೇಕು ಎಂದರು.
ಡಾ. ಜಿ.ಎಸ್.ಭಟ್, ಗಣಪತಿ ದೇವಸ್ಥಾನ ಹಿತರಕ್ಷಣಾ ಸಮಿತಿ ಸಂಚಾಲಕ ಐ.ವಿ.ಹೆಗಡೆ, ಬಿಜೆಪಿ ಜಿಲ್ಲಾಧ್ಯಕ್ಷ ಟಿ.ಡಿ.ಮೇಘರಾಜ್, ನಗರ ಅಧ್ಯಕ್ಷ ಗಣೇಶಪ್ರಸಾದ್, ತಾಪಂ ಸದಸ್ಯ ದೇವೇಂದ್ರಪ್ಪ, ಪ್ರಮುಖರಾದ ವಿನಾಯಕ ರಾವ್, ಬಿ.ಟಿ.ರವೀಂದ್ರ ಇದ್ದರು.