ಲಕ್ಷ್ಮೇಶ್ವರ: ಸಮೀಪದ ಒಡೆಯರ ಮಲ್ಲಾಪೂರ ಮುರಾರ್ಜಿ ದೇಸಾಯಿ ವಸತಿ ಶಾಲೆಗೆ ತಹಸೀಲ್ದಾರ್ ಭ್ರಮರಾಂಬ ಗುಬ್ಬಿಶೆಟ್ಟಿ ಬುಧವಾರ ಭೇಟಿ ನೀಡಿ ಸ್ಥಾನಿಕ ಕ್ವಾರಂಟೈನ್ನಲ್ಲಿ ಇರಿಸಲಾದ ಕೂಲಿ ಕಾರ್ವಿುಕರ ಆರೋಗ್ಯ ವಿಚಾರಿಸಿದರು.
ಗುಜರಾತ್, ಮಹಾರಾಷ್ಟ್ರ ರಾಜ್ಯಗಳಿಂದ ಬಂದಿರುವ ತಾಲೂಕಿನ ಆದರಹಳ್ಳಿ, ಪು.ಬಡ್ನಿ ಗ್ರಾಮಗಳ 12 ಜನರನ್ನು ಕ್ವಾರಂಟೈನ್ನಲ್ಲಿ ಇಡಲಾಗಿದೆ. ಅವರ ಆರೋಗ್ಯ ವಿಚಾರಿಸಿದ ಬಳಿಕ ಇಲ್ಲಿನ ವಸತಿ, ಊಟ, ಸ್ವಚ್ಛತೆ ಕುರಿತು ಪರಿಶೀಲಿಸಿದರು. ಸೂಕ್ತ ರಕ್ಷಣೆ, ವ್ಯವಸ್ಥೆ ಮತ್ತು ಶುದ್ಧವಾದ ಆಹಾರ, ನೀರು ನೀಡಬೇಕು ಎಂದು ಶಾಲೆಯ ಪ್ರಾಚಾರ್ಯ, ಮೇಲ್ವಿಚಾರಕರಿಗೆ ಮತ್ತು ಅಡುಗೆ ಸಿಬ್ಬಂದಿಗೆ ತಿಳಿಸಿದರು.
ಜಿಲ್ಲಾಡಳಿತದ ನಿರ್ದೇಶನದಂತೆ ಬೇರೆ ರಾಜ್ಯಗಳಿಂದ ಬಂದಿರುವ ಜನರ ಕ್ವಾರಂಟೈನ್ಗೆ ವ್ಯವಸ್ಥೆ ಮಾಡಲಾಗುವುದು. ಅಲ್ಲದೆ, ಅವರ ಆರೋಗ್ಯ ಪರೀಕ್ಷಿಸಿ ಗಂಟಲ ದ್ರವದ ಮಾದರಿಯನ್ನು ಪರೀಕ್ಷೆಗೆ ಕಳುಹಿಸಲಾಗುವುದು. ಮಾದರಿಗಳ ಫಲಿತಾಂಶ ಬಂದ ಮೇಲೆ ಜಿಲ್ಲಾಡಳಿತದ ನಿರ್ದೇಶನದಂತೆ ಕ್ರಮ ತೆಗೆದುಕೊಳ್ಳಲಾಗುವುದು ಎಂದು ತಹಸೀಲ್ದಾರ್ ಹೇಳಿದರು.
ಪ್ರಾಚಾರ್ಯ ಎನ್.ಕೆ. ಹತ್ತಿಕಾಳ, ಶಾಲೆಯ ವಾರ್ಡನ್ ಸುನೀಲ ತಳ್ಳಳ್ಳಿ ಮಾಹಿತಿ ನೀಡಿದರು.