ಚಿತ್ರದುರ್ಗ: ಮಧ್ಯಪ್ರದೇಶ, ರಾಜಸ್ಥಾನ, ಛತ್ತೀಸ್ಗಡ ವಿಧಾನಸಭಾ ಚುನಾವಣೆಯಲ್ಲಿ ಅಲ್ಲಿನ ಮತದಾರರು ಕಾಂಗ್ರೆಸ್ ಗ್ಯಾರಂಟಿಗಳನ್ನು ತಿರಸ್ಕರಿಸಿ, ಬಿಜೆಪಿ ಬೆಂಬಲಿಸಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅವರ ಅಲೆಗೆ ಧೂಳಿಪಟವಾಗಿದ್ದಾರೆ ಎಂದು ಮಾಜಿ ಶಾಸಕ ಜಿ.ಎಚ್.ತಿಪ್ಪಾರೆಡ್ಡಿ ಹೇಳಿದರು.
ಮೂರು ರಾಜ್ಯಗಳ ಚುನಾವಣೆಯಲ್ಲಿ ಗೆಲುವು ಸಾಧಿಸಿದ ಹಿನ್ನೆಲೆಯಲ್ಲಿ ಬಿಜೆಪಿ ಜಿಲ್ಲಾ ಘಟಕದಿಂದ ಸೋಮವಾರ ಗಾಂಧಿ ವೃತ್ತದಲ್ಲಿ ನಡೆದ ವಿಜಯೋತ್ಸವ ಆಚರಣೆಯಲ್ಲಿ ಸಿಹಿ ಹಂಚಿ ಮಾತನಾಡಿದರು.
ಮುಂದುವರೆದ ರಾಷ್ಟ್ರಗಳು ಮೋದಿ ಅವರ ಪಾರದರ್ಶಕ ಆಡಳಿತ ಮೆಚ್ಚಿಕೊಂಡು ಭಾರತದಲ್ಲಿ ಬಂಡವಾಳ ಹೂಡಲು ಮುಂದೆ ಬರುತ್ತಿವೆ. ಬಿಜೆಪಿಯ ಜನಪರ ಆಡಳಿತಕ್ಕೆ ಈ ಫಲಿತಾಂಶ ಉತ್ತಮ ನಿದರ್ಶನವಾಗಿದೆ. ಲೋಕಸಭಾ ಚುನಾವಣೆಗೂ ದಿಕ್ಸೂಚಿಯಾಗಿದ್ದು, 400ಕ್ಕೂ ಅಧಿಕ ಸೀಟು ಗೆಲ್ಲುವ ವಿಶ್ವಾಸ ಹೆಚ್ಚಾಗಿದೆ ಎಂದರು.
ಮಧ್ಯಪ್ರದೇಶದಲ್ಲಿ ನಾಲ್ಕು ಬಾರಿ ಸಿಎಂ ಆಗಿದ್ದ ಶಿವರಾಜ್ಸಿಂಗ್ ಚೌಹಾಣ್ ಈ ಬಾರಿಯೂ ಬಹುಮತದಿಂದ ಗೆದ್ದಿದ್ದಾರೆ. ಅತ್ಯಧಿಕ ಅಂತರ ಐತಿಹಾಸಿಕ ಮೈಲಿಗಲ್ಲಾಗಿದ್ದು, ಜನಾಶೀರ್ವಾದ ಬಿಜೆಪಿಗೆ ಎಂಬುದು ಸಾಬೀತಾಗಿದೆ ಎಂದು ಹೇಳಿದರು.
ಬಿಜೆಪಿ ಜಿಲ್ಲಾಧ್ಯಕ್ಷ ಎ.ಮುರಳಿ, ಮಾಜಿ ಅಧ್ಯಕ್ಷ ಟಿ.ಜಿ.ನರೇಂದ್ರನಾಥ್, ಪದಾಧಿಕಾರಿಗಳಾದ ನವೀನ್ ಚಾಲುಕ್ಯ, ಎಸ್.ಆರ್.ಗಿರೀಶ್, ಸಂಪತ್ಕುಮಾರ್, ಕೆ.ಜಯಣ್ಣ, ಶಿವಣ್ಣಾಚಾರ್, ಭಾರ್ಗವಿ ದ್ರಾವಿಡ್, ದಗ್ಗೆ ಶಿವಪ್ರಕಾಶ್, ನಂದಿ ನಾಗರಾಜ್, ಚಂದ್ರು, ತಿಪ್ಪೇಸ್ವಾಮಿ, ನಾಗರಾಜ್ ಬೇದ್ರೆ, ದ್ರಾವಿಡ್ ರೇಖಾ, ಬಸಮ್ಮ, ತಿಮ್ಮಣ್ಣ, ಶಾಂತಮ್ಮ, ಶಂಭು, ಕೃಷ್ಣ, ಯಶವಂತ್ ಇತರರಿದ್ದರು.