More

    ಕೈ ಕಟ್ಟಿ ರೈಲ್ವೆ ಹಳಿಗೆಸೆದು ಯುವಕನ ಕೊಲೆ?

    ಖಾನಾಪುರ: ಖಾನಾಪುರ-ಬೆಳಗಾವಿ ರೈಲ್ವೆ ಮಾರ್ಗದ ಪಟ್ಟಣದ ಹೊರವಲಯದಲ್ಲಿ ರೈಲ್ವೆ ಹಳಿ ಮೇಲೆ ಹಗ್ಗದಿಂದ ಕೈ ಕಟ್ಟಿದ, ರುಂಡ-ಮುಂಡ ಬೇರ್ಪಟ್ಟ ಸ್ಥಿತಿಯಲ್ಲಿ ಯುವಕನೊಬ್ಬನ ಮೃತದೇಹ ಸೆ.28ರಂದು ಪತ್ತೆಯಾಗಿದ್ದು, ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ. ಖಾನಾಪುರ ಪಟ್ಟಣದ ನಿವಾಸಿ ಹಾಲಿ ಬೆಳಗಾವಿಯಲ್ಲಿ ವಾಸವಾಗಿದ್ದ ಅರ್ಬಾಜ್ ಮುಲ್ಲಾ (24) ಮೃತಪಟ್ಟ ಯುವಕ.

    ಸೆ. 27ರಂದು ಸ್ನೇಹಿತರನ್ನು ಭೇಟಿಯಾಗಿ ಬರುವುದಾಗಿ ಹೇಳಿ ಅರ್ಬಾಜ್ ಮನೆಯಿಂದ ಹೋಗಿದ್ದ. ಮರುದಿನ ಬೆಳಗ್ಗೆ ಆತನ ಮೃತದೇಹ ರೈಲ್ವೆ ಹಳಿಯ ಪಕ್ಕದಲ್ಲಿ ಬಿದ್ದಿತ್ತು. ಯುವಕನ ಕುಟುಂಬಸ್ಥರು ಬೆಳಗಾವಿ ರೈಲ್ವೆ ಪೊಲೀಸರ ಗಮನಕ್ಕೆ ತಂದಿದ್ದರು. ಸ್ಥಳಕ್ಕೆ ಭೇಟಿ ನೀಡಿದ ರೈಲ್ವೆ ಪೊಲೀಸರು, ಯುವಕನನ್ನು ಬೇರೆಡೆ ಕೊಲೆಗೈದು ಸಾಕ್ಷ್ಯ ನಾಶಪಡಿಸುವ ಉದ್ದೇಶದಿಂದ ಮೃತದೇಹವನ್ನು ರೈಲ್ವೆ ಹಳಿಗಳ ಮೇಲೆ ಎಸೆದಿರಬಹುದು ಎಂದು ಶಂಕಿಸಿದ್ದಾರೆ. ಬೆಳಗಾವಿ ರೈಲ್ವೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

    ಯುವಕನ ಸಾವಿನ ತನಿಖೆ ಕೈಗೊಂಡ: ಪೊಲೀಸರಿಗೆ ಅನ್ಯ ಧರ್ಮಕ್ಕೆ ಸೇರಿದ ಯುವತಿಯನ್ನು ಪ್ರೀತಿಸಿದ್ದಕ್ಕಾಗಿ ಯುವತಿಯ ಕಡೆಯವರು ಆತನನ್ನು ಕೊಲೆಗೈದು ಶವವನ್ನು ರೈಲ್ವೆ ಹಳಿ ಮೇಲೆ ಎಸೆದಿರಬಹುದು ಎಂಬ ಮಾಹಿತಿ ಲಭ್ಯವಾಗಿದೆ. ಯುವಕ ಕಳೆದ ಕೆಲ ವರ್ಷಗಳಿಂದ ಅನ್ಯ ಧರ್ಮಕ್ಕೆ ಸೇರಿದ ಯುವತಿಯನ್ನು ಪ್ರೀತಿಸುತ್ತಿದ್ದ. ಅವರಿಬ್ಬರ ಪ್ರೀತಿಗೆ ಎರಡೂ ಕುಟುಂಬದಿಂದಲೂ ವಿರೋಧವಿತ್ತು ಎಂಬ ಮಾಹಿತಿ ದೊರೆತಿದೆ.

    ತನಿಖೆ ಚುರುಕುಗೊಳಿಸಿರುವ ರೈಲ್ವೆ ಪೊಲೀಸರು, ಶನಿವಾರದವರೆಗೆ ಒಟ್ಟು 8 ಜನರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ. ಆದರೆ ಈವರೆಗೂ ಯಾರನ್ನೂ ಬಂಧಿಸಿಲ್ಲ. ಹೆಚ್ಚಿನ ತನಿಖೆಗಾಗಿ ಪ್ರಕರಣವನ್ನು ಖಾನಾಪುರ ಪೊಲೀಸ್ ಠಾಣೆಗೆ ವರ್ಗಾಯಿಸುವ ಸಾಧ್ಯತೆ ಇದೆ. ಶನಿವಾರ ಸಂಜೆಯವರೆಗೂ ಪ್ರಕರಣ ಖಾನಾಪುರ ಠಾಣೆಗೆ ವರ್ಗಾವಣೆಗೊಂಡಿಲ್ಲ ಎಂದು ಪೊಲೀಸ್ ಇಲಾಖೆಯ ಮೂಲಗಳು ತಿಳಿಸಿವೆ.

    Array

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts