ಶಿವಮೊಗ್ಗ: ಕೆಎಫ್ಡಿ ನಿಯಂತ್ರಣಕ್ಕೆ ಜನರ ಸಹಕಾರ ಅಗತ್ಯ. ಕಳೆದ ವರ್ಷ ಇದೇ ಅವಧಿಯಲ್ಲಿ 343 ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿದ್ದವು. ಈ ವರ್ಷ ಕೇವಲ 100 ಪ್ರಕರಣಗಳು ಪತ್ತೆಯಾಗಿವೆ. ಈ ಪೈಕಿ ಶೇ.15 ಮಂದಿ ಕೆಎಫ್ಡಿ ನಿರೋಧಕ ಲಸಿಕೆ ಹಾಕಿಸಿಕೊಂಡಿರಲಿಲ್ಲ. ಅವರಲ್ಲಿ ಕೆಎಫ್ಡಿ ವೈರಣು ಕಾಣಿಸಿಕೊಂಡಿದೆ ಎಂದು ಕೆ.ಬಿ.ಶಿವಕುಮಾರ್ ತಿಳಿಸಿದರು.
ಸಾಗರ ತಾಲೂಕಿನ ಓರ್ವ ಮಹಿಳೆ ಕೆಎಫ್ಡಿಗೆ ಮೆಗ್ಗಾನ್ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಸ್ವಲ್ಪ ಚೇತರಿಸಿಕೊಂಡಿದ್ದರು. ಆದರೂ ಅವರನ್ನು ಮಣಿಪಾಲ ಆಸ್ಪತ್ರೆಗೆ ಕರೆದೊಯ್ಯಲು ತೀರ್ವನಿಸಲಾಗಿತ್ತು. ಆದರೆ ಆ ಮಹಿಳೆ ಆಸ್ಪತ್ರೆಯಿಂದ ಮನೆಗೆ ಹೋಗಿದ್ದಾರೆ. ನಮ್ಮ ಸಿಬ್ಬಂದಿ ಅವರ ಮನೆ ಎದುರು ಆಂಬುಲೆನ್ಸ್ ನಿಲ್ಲಿಸಿಕೊಂಡು ಕರೆದರೂ ಅವರು ತುಂಬಾ ಸಮಯ ಸ್ಪಂದಿಸಲಿಲ್ಲ. ಹೀಗಾಗಿ ಸಾರ್ವಜನಿಕರ ಸಹಭಾಗಿತ್ವ ಅವಶ್ಯಕ ಎಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.
ಪ್ರತಿವರ್ಷ ಯಾವುದಾದರೂ ಸಾಂಕ್ರಾಮಿಕ ರೋಗ ಕಾಣಿಸಿಕೊಳ್ಳುವುದು ಸಹಜ. ಆದರೆ ಈ ವರ್ಷ ಕರೊನಾ, ಹಕ್ಕಿಜ್ವರ ಹಾಗೂ ಕೆಎಫ್ಡಿ ಭೀತಿ ಮಲೆನಾಡಿನಲ್ಲಿ ಕಾಣಿಸಿಕೊಂಡಿದೆ. ಜಿಲ್ಲಾಡಳಿತ ಮೂರನ್ನೂ ನಿರ್ವಹಣೆ ಮಾಡುವಲ್ಲಿ ಸಮರ್ಥವಿದೆ. ಸರ್ವೆಕ್ಷಣಾ ವಿಭಾಗದ ಸಿಬ್ಬಂದಿ ತೀವ್ರ ನಿಗಾ ವಹಿಸಿದ್ದಾರೆ ಎಂದರು.
ಕೋಳಿ ಮಾಂಸ ಮಾರುವಂತಿಲ್ಲ: ಜಿಲ್ಲೆಯಲ್ಲಿ ಹಕ್ಕಿಜ್ವರ ಇರುವ ಬಗ್ಗೆ ಇನ್ನೂ ಅಧಿಕೃತವಾಗಿ ದೃಢಪಟ್ಟಿಲ್ಲ. ಸೊರಬ ತಾಲೂಕಿನಲ್ಲಿ ಕಾಗೆಗಳ ಸಾವಿನ ಕುರಿತು ಪ್ರಯೋಗಾಲಯದಿಂದ ಮಾಹಿತಿ ಬಂದ ಬಳಿಕವಷ್ಟೇ ಕಾರಣ ತಿಳಿಯಲಿದೆ. ಆದರೆ ನೆರೆಯ ಜಿಲ್ಲೆಗಳಲ್ಲಿ ಹಕ್ಕಿ ಜ್ವರ ಕಾಣಿಸಿಕೊಂಡಿದೆ. ಹೊನ್ನಾಳಿ ತಾಲೂಕಿನಲ್ಲಿ ಹಕ್ಕಿ ಜ್ವರ ಕಾಣಿಸಿಕೊಂಡಿರುವ ಹಿನ್ನೆಲೆಯಲ್ಲಿ ಶಿಕಾರಿಪುರ ಹಾಗೂ ಶಿವಮೊಗ್ಗ ತಾಲೂಕಿನಲ್ಲಿ ಹೆಚ್ಚು ನಿಗಾ ವಹಿಸಲಾಗಿದೆ. ಈ ತಾಲೂಕುಗಳಲ್ಲಿ ಕೋಳಿ ಮಾಂಸ ಮಾರಾಟ ಮಾಡದಂತೆ ಫೌಲ್ಟ್ರಿ ಫಾಮ್ರ್ ಮಾಲೀಕರಿಗೆ ಸೂಚನೆ ನೀಡಲಾಗಿದೆ ಎಂದು ಡಿಸಿ ತಿಳಿಸಿದರು.
ಹಂದಿ ಸಾವು ತಿಳಿದಿಲ್ಲ: ಅಬ್ಬಲಗೆರೆ ಹಾಗೂ ಅನುಪಿನಕಟ್ಟೆ ಬಳಿ ಹಂದಿಗಳು ಸಾವನ್ನಪ್ಪಿರುವ ಬಗ್ಗೆ ತಮಗೆ ಯಾವುದೇ ಮಾಹಿತಿಯಿಲ್ಲ ಎಂದು ಜಿಲ್ಲಾಧಿಕಾರಿ ಕೆ.ಬಿ.ಶಿವಕುಮಾರ್ ಸ್ಪಷ್ಟಪಡಿಸಿದರು. ಹಂದಿಗಳ ಸಾವು ಹಂದಿ ಜ್ವರದ ಮುನ್ಸೂಚನೆ ಇರಬಹುದೇ ಎಂಬುದು ತಿಳಿದಿಲ್ಲ. ಈ ಬಗ್ಗೆ ಅಧಿಕಾರಿಗಳಿಂದ ವರದಿ ಪಡೆದು ಅಗತ್ಯ ಕ್ರಮ ಕೈಗೊಳ್ಳಲಾಗುವುದು ಜನರು ಭಯಭೀತರಾಗುವ ಅಗತ್ಯವಿಲ್ಲ ಎಂದರು.
ತೀರ್ಥಹಳ್ಳಿ ತಾಲೂಕಿನಲ್ಲಿ ಮಂಗನಕಾಯಿಲೆ ಸೋಂಕಿತರ ಸಂಖ್ಯೆ ಏರುತ್ತಿದ್ದು ತಾಲೂಕಿನ ಬೆಟ್ಟ ಬಸವಾನಿ ಆರೋಗ್ಯ ಕೇಂದ್ರ ವ್ಯಾಪ್ತಿಯಲ್ಲಿ ಒಂದು ಪ್ರಕರಣ ದಾಖಲಾಗಿದೆ ಈ ಪ್ರಾಥಮಿಕ ಆರೋಗ್ಯ ಕೇಂದ್ರದ ವ್ಯಾಪ್ತಿಯ ಗುಂಡ ಗದ್ದೆ ಗ್ರಾಮದಲ್ಲಿ ನಾಲ್ಕು ವರ್ಷದ ಬಾಲಕ ನಯನ ಕುಮಾರ್ ಎಂಬ ಮಗುವಿನ ರಕ್ತದಲ್ಲಿ ಈ ಸೋಂಕು ಕಂಡು ಬಂದಿದೆ ಮಗುವಿನ ಅಜ್ಜ ಅಡಿಕೆ ತೋಟದ ಕೆಲಸಕ್ಕೆ ಹೋಗುವಾಗ ಈ ಮಗುವನ್ನು ಕರೆದುಕೊಂಡು ಹೋಗಿದ್ದರಂತೆ ಹೇಳಲಾಗಿದೆ. ಇದೀಗ ಈ ಮಗುವನ್ನು ತೀರ್ಥಹಳ್ಳಿಯ ಜೆಸ್ಸಿ ಆಸ್ಪತ್ರೆಗೆ ದಾಖಲಿಸಲಾಗಿದೆ ಇದರಿಂದ ತಾಲ್ಲೂಕಿನಲ್ಲಿ ಮಂಗನಕಾಯಿಲೆ ಸೋಂಕಿತರ ಸಂಖ್ಯೆ 81 ಏರಿದೆ. ತೀರ್ಥಹಳ್ಳಿಯ ಜೆಸ್ಸಿ ಆಸ್ಪತ್ರೆಯಲ್ಲಿ 12 ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಅಪರ ಜಿಲ್ಲಾಧಿಕಾರಿ ಜಿ.ಅನುರಾಧಾ, ಡಿಎಚ್ಒ ಡಾ. ರಾಜೇಶ್ ಸುರಗೀಹಳ್ಳಿ, ವಿಡಿಎಲ್ಆರ್ ಉಪನಿರ್ದೇಶಕ ಡಾ. ಕಿರಣ್ ಇದ್ದರು.