ಚಿಂತಾಮಣಿ: ವರುಣನ ಆರ್ಭಟಕ್ಕೆ ಉತ್ತರ ಕರ್ನಾಟಕ ನಲುಗಿದ್ದರೆ ಇತ್ತ ಬಯಲುಸೀಮೆಯಲ್ಲೂ ಮಳೆಯ ಆರ್ಭಟ ಶುರುವಾದಂತಿದೆ, ಕಳೆದೆರಡು ದಿನಗಳಿಂದ ಜಿಲ್ಲೆಯಲ್ಲಿ ಸುರಿಯುತ್ತಿರುವ ಮಳೆಗೆ ಚಿಂತಾಮಣಿಯ ಮುಂಗಾನಹಳ್ಳಿ ಹೋಬಳಿ ಮಾದಮಂಗಲ ಬಳಿ ಕುಶಾವತಿ ನದಿ ಸೇತುವೆ ಪಕ್ಕದ ಮಣ್ಣು ಕೊಚ್ಚಿಕೊಂಡು ಹೋಗಿದ್ದು 6 ಗ್ರಾಮಗಳು ರಸ್ತೆ ಸಂಪರ್ಕ ಕಡಿದುಕೊಂಡಿವೆ.
ಮಳೆಗೆ ತಾಲೂಕಿನ ಕೆರೆಗಳು ಕೋಡಿ ಹರಿದು ನೀರು ಕಾಲುವೆ ಮೂಲಕ ಕುಶಾವತಿ ನದಿ ಸೇರುತ್ತಿದ್ದು 5 ವರ್ಷಗಳ ಬಳಿಕ ನದಿ ಭೋರ್ಗರೆಯುತ್ತಿದೆ. ಸೇತುವೆ ಬಳಿಯ ಮಣ್ಣು ಕೊಚ್ಚಿ ಹೋಗಿ ಮಾದಮಂಗಲ, ಬ್ರಾಹ್ಮಣಹಳ್ಳಿ, ಕೋನಪಲ್ಲಿ, ಏಟಿಗಡ್ಡಗೊಲ್ಲಪಲ್ಲಿ ಗ್ರಾಮಗಳು ಸಂಪರ್ಕ ಕಳೆದುಕೊಂಡಿವೆ.
ವಿದ್ಯುತ್ ಕಂಬಗಳು ನೆಲಕ್ಕುರುಳಿವೆ, ಜನ ಮತ್ತು ವಾಹನ ಸಂಪರ್ಕ ಸಂಪೂರ್ಣ ಸ್ಥಗಿತಗೊಂಡಿದೆ. ಚಿಂತಾಮಣಿ, ಬಟ್ಲಹಳ್ಳಿ ಮತ್ತು ಇರಗಂಪಲ್ಲಿ ತಲುಪಲು ಚೇಳೂರು ರಸ್ತೆ-ಸಿದ್ದೇಪಲ್ಲಿ ಕ್ರಾಸ್ ಮೂಲಕ ಸುತ್ತು ಹಾಕಿ ಈ ಗ್ರಾಮಗಳಿಗೆ ಮತ್ತು ಚಿಂತಾಮಣಿಗೆ ತೆರಳಬೇಕಾಗಿದೆ.
2015 ನವೆಂಬರ್ನಲ್ಲಿ ಸುರಿದ ಮಳೆಗೆ ಇಂತಹದೇ ಪರಿಸ್ಥಿತಿ ನಿರ್ಮಣವಾಗಿತ್ತು, ಮಳೆ ಬಿಡುವು ನೀಡದ ಬಳಿಕ ಗ್ರಾಮಸ್ಥರು ಸೇತುವೆ ಪಕ್ಕ ಮಣ್ಣು ತುಂಬಿಸಿ ತಾತ್ಕಾಲಿಕವಾಗಿ ರಸ್ತೆ ಮಾಡಿಕೊಂಡಿದ್ದರು. ಜತೆಗೆ ದುರಸ್ತಿ ಪಡಿಸುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಮನವಿ ಸಹ ಮಾಡಿದ್ದರು. ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳ ನಿರ್ಲಕ್ಷ್ಯಿದಿಂದ ಈಗ ಗ್ರಾಮಗಳು ಮತ್ತೆ ಸಂಪರ್ಕ ಕಡಿದುಕೊಂಡಿವೆ.
ಮಾದಮಂಗಲ ಬಳಿ ಕುಶಾವತಿ ಸೇತುವೆ ಅಕ್ಕಪಕ್ಕದ ಮಣ್ಣು ಮತ್ತೆ ಕೊಚ್ಚಿಕೊಂಡು ಹೋಗಿ ಜನ ಮತ್ತು ವಾಹನ ಸಂಪರ್ಕ ಸಂಪೂರ್ಣ ಸ್ಥಗಿತಗೊಂಡಿದೆ, 5 ವರ್ಷಗಳ ಹಿಂದೆ ಇದೇ ಪರಿಸ್ಥಿತಿ ನಿರ್ಮಾಣವಾದಾಗ ದುರಸ್ತಿ ಮಾಡುವಂತೆ ಸಂಬಂಧಪಟ್ಟ ಇಲಾಖೆಗಳಿಗೆ ಮನವಿ ಸಲ್ಲಿಸಲಾಗಿದೆ. ಆದರೆ ಇದುವರೆಗೂ ಸರಿಯಾಗಿಲ್ಲ.
ಸ್ಕೂಲ್ ಸುಬ್ಬಾರೆಡ್ಡಿ, ಜಿಪಂ ಸದಸ್ಯರು.
ಸೇತುವೆ ಪಕ್ಕದಲ್ಲಿ ಮಣ್ಣು ಕೊಚ್ಚಿಕೊಂಡು ಹೋಗಿ ರಸ್ತೆ ಸಂಪರ್ಕ ಕಡಿತಗೊಂಡಿರುವ ಬಗ್ಗೆ ಗಮನಕ್ಕೆ ತರಲಾಗಿದೆ, ಈಗಾಗಲೇ ಜಿಪಂ ಎಇಇ ಮತ್ತು ಗ್ರಾಪಂ ಪಿಡಿಒ ಸ್ಥಳ ಪರಿಶೀಲಿಸಿದ್ದು, ಸೇತುವೆ ಸಣ್ಣ ನೀರಾವರಿ ಇಲಾಖೆ ವ್ಯಾಪ್ತಿಗೆ ಒಳಪಡುತ್ತದೆ ಎಂಬುದನ್ನು ಗಮನಕ್ಕೆ ತಂದಿದ್ದೇವೆ, ದುರಸ್ತಿಗೆ ಕೂಡಲೇ ಪತ್ರ ಬರೆಯುವಂತೆ ಸೂಚಿಸಲಾಗಿದೆ.
ಜಿ.ಅರ್.ಮಂಜುನಾಥ ತಾಪಂ ಇಒ