More

    ಕುವೆಂಪು ಕಾದಂಬರಿಗಳಲ್ಲಿ ಪರಿಸರ ಕಾಳಜಿ

    ತಿಕೋಟಾ: ಕುವೆಂಪು ಅವರ ಕಾದಂಬರಿಗಳಲ್ಲಿ ಪರಿಸರ ವಿಶೇಷತೆ ಹಾಗೂ ಕಾಳಜಿ ಕಾಣಬಹುದು. ಅವರ ಕಾದಂಬರಿಗಳಲ್ಲಿ ಪಾತ್ರಗಳ ವೈವಿಧ್ಯತೆ ಇರುತ್ತದೆ ಎಂದು ವಿಜಯಪುರ ರಾಣಿಚನ್ನಮ್ಮ ವಿಶ್ವ ವಿದ್ಯಾಲಯದ ಡಾ..ಗು.ಹಳಕಟ್ಟಿ ಸ್ನಾತಕೋತ್ತರ ಕೇಂದ್ರದ ಕನ್ನಡ ಉಪನ್ಯಾಸಕಿ ಡಾ.ಪೂರ್ಣಿಮಾ ಧಾಮಣ್ಣವರ ಹೇಳಿದರು.

    ಪಟ್ಟಣದ ಬಿ.ಎಲ್.ಡಿ.ಇ ಸಂಸ್ಥೆಯ ನೂತನ ಕಲಾ ಮತ್ತು ವಾಣಿಜ್ಯ ಮಹಾವಿದ್ಯಾಲಯದಲ್ಲಿ ಐ.ಕ್ಯೂ.ಎ.ಸಿ, ಕನ್ನಡ ವಿಭಾಗ ಹಾಗೂ ಸಾಂಸ್ಕೃತಿಕ ಘಟಕದ ಸಹಯೋಗದಲ್ಲಿ ಕುವೆಂಪು ಅವರ 120ನೇ ಜನ್ಮ ದಿನಾಚರಣೆ ನಿಮಿತ್ತ ಶುಕ್ರವಾರ ಹಮ್ಮಿಕೊಂಡಿದ್ದ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ‘ಕುವೆಂಪು ಸಾಹಿತ್ಯ ಮತ್ತು ಸಮಕಾಲೀನತೆ‘ ವಿಷಯದ ಕುರಿತು ಅವರು ಮಾತನಾಡಿದರು.

    ಮಾನವೀಯ ಮೌಲ್ಯ ಸಾರಿ ಹೇಳುವ ಕುವೆಂಪು ಅವರ ಕೃತಿಗಳು ಎಂದೆಂದಿಗೂ ಜೀವಂತ. ಸಾಹಿತ್ಯ ಲೋಕಕ್ಕೆ ಅವರ ಕೊಡುಗೆ ಅಪಾರವಾಗಿದೆ. ಕುವೆಂಪು ಅವರು ರಾಮಾಯಣ ದರ್ಶನಂ ಮೂಲಕ ಕನ್ನಡ ಸಾಹಿತ್ಯವನ್ನು ಮೇಲ್ಪಂಕಿಗೆ ಕೊಂಡೊಯ್ದ ಮಹಾನ್ ಕವಿ. ಹೀಗಾಗಿ ಅವರಿಗೆ ಜ್ಞಾನಪೀಠ ಪ್ರಶಸ್ತಿಯೂ ಲಭಿಸಿತು. ಕುವೆಂಪು 20ನೇ ಶತಮಾನದ ಶ್ರೇಷ್ಠ ಸ್ವಾಭಿಮಾನಿ ಮಹಾನ್ ಕವಿಯಾಗಿದ್ದರು ಎಂದರು.

    ಕನ್ನಡ ವಿಭಾಗದ ಮುಖ್ಯಸ್ಥ ಡಾ.ಬಸವರಾಜ ಸಾಲವಾಡಗಿ ಮಾತನಾಡಿ, ಕುವೆಂಪು ಅವರ ಪ್ರಕಾರ ಹುಟ್ಟುವ ಪ್ರತಿ ಮಗುವೂ ವಿಶ್ವಮಾನವನಾಗಿರುತ್ತದೆ. ಆ ನಂತರ ಆ ಮಗುವನ್ನು ಜಾತಿ, ಮತದ ಕಟ್ಟುಪಾಡುಗಳಿಂದ ಬಂಧಿಸಲಾಗುತ್ತದೆ. ಯಾವುದೇ ವ್ಯಕ್ತಿ ಜಾತಿಯಿಂದ ಮುಖ್ಯವಾಗಬಾರದು ಬದಲಾಗಿ ನೈತಿಕ ವ್ಯಕ್ತಿತ್ವದಿಂದ ಮುಖ್ಯನಾಗಬೇಕು ಎಂಬ ಪರಿಕಲ್ಪನೆ ಕುವೆಂಪು ಅವರದಾಗಿತ್ತು. ಕುವೆಂಪು ಅವರ ಜಾತ್ಯತೀತ ಮನೋಭಾವದಿಂದ ಮೂಡಿ ಬಂದ ಆಶಯವೇ ವಿಶ್ವಮಾನವ ಸಂದೇಶವಾಗಿದೆ ಎಂದರು.

    ಮಹಾವಿದ್ಯಾಲಯದ ಪ್ರಾಚಾರ್ಯ ಆರ್.ಬಿ.ಸಿರಸಂಗಿ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಮಹಾವಿದ್ಯಾಲಯದಲ್ಲಿ ಕುವೆಂಪು ಅವರ 120ನೇ ಜನ್ಮ ದಿನಾಚರಣೆ ಪ್ರಯುಕ್ತ ಗುರುವಾರ ವಿದ್ಯಾರ್ಥಿಗಳಿಗಾಗಿ ಜಾನಪದ ಗೀತೆ, ಭಾವಗೀತೆ ಹಾಗೂ ಭಾಷಣ ಸ್ಪರ್ಧೆಯನ್ನು ಏರ್ಪಡಿಸಲಾಗಿತ್ತು. ವಿಜೇತರಿಗೆ ಪ್ರಮಾಣ ಪತ್ರ ಮತ್ತು ಬಹುಮಾನ ನೀಡಲಾಯಿತು. ಡಾ.ಪೂರ್ಣಿಮಾ ಧಾಮಣ್ಣವರ ಅವರನ್ನು ಸನ್ಮಾನಿಸಲಾಯಿತು. ಐ.ಕ್ಯೂ.ಎ.ಸಿ ಸಂಯೋಜಕ ಡಾ.ರವಿಚಂದ್ರ ವಾಲಿಕಾರ, ಇಂಗಿಷ್ ವಿಭಾಗದ ಮುಖ್ಯಸ್ಥ ರಾಹುಲ್ ನಾಗಣ್ಣವರ ಇದ್ದರು. ಶ್ರುತಿ ಪೂಜಾರಿ ಸ್ವಾಗತಿಸಿದರು. ಅಸ್ಲಂ ಮುಲ್ಲಾ ನಿರೂಪಿಸಿದರು. ಸಿಲ್ಪಾ ಅಂಗಡಿ ವಂದಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts