ನಿಪ್ಪಾಣಿ: ಎಲ್ಲಕ್ಕಿಂತ ಮಾನವ ಸಂಪನ್ಮೂಲ ದೊಡ್ಡದು. ಕಾರ್ಖಾನೆ ಏಳಿಗೆಯಲ್ಲಿ ಕಾರ್ಮಿಕರ ಪಾತ್ರ ಅತ್ಯಂತ ಮಹತ್ವದ್ದು ಎಂದು ಸ್ಥಳೀಯ ಹಾಲಸಿದ್ಧನಾಥ ಸಹಕಾರಿ ಸಕ್ಕರೆ ಕಾರ್ಖಾನೆ ವ್ಯವಸ್ಥಾಪಕ ನಿರ್ದೇಶಕ ಶಿವ ಕುಲಕರ್ಣಿ ಹೇಳಿದರು.
ನಗರದ ಕಾರ್ಖಾನೆಯಲ್ಲಿ ಬುಧವಾರ ಹಮ್ಮಿಕೊಂಡಿದ್ದ ಕಾರ್ಮಿಕರ ಕಲ್ಯಾಣ ಸಭೆಯಲ್ಲಿ ಮಾತನಾಡಿ, ಕಾರ್ಖಾನೆ ಹಿತದೃಷ್ಟಿಯಿಂದ ಸಂಸದ ಅಣ್ಣಾಸಾಹೇಬ ಜೊಲ್ಲೆ, ಶಾಸಕಿ ಶಶಿಕಲಾ ಜೊಲ್ಲೆ ಕಾರ್ಖಾನೆಯ ಕಬ್ಬು ನುರಿಸುವ ಕಾರ್ಯಕ್ಷಮತೆಯನ್ನು ಪ್ರತಿ ದಿನ 8500 ಟನ್ಗೆ ಹೆಚ್ಚಳ ಮಾಡಿ ಯಂತ್ರೋಪಕರಣಗಳ ಸಾಮರ್ಥ್ಯ ಹೆಚ್ಚಿಸಿದ್ದಾರೆ. ಜತೆಗೆ ದಿನಕ್ಕೆ 150 ಸಾವಿರ ಲೀಟರ್ ಕ್ಷಮತೆಯ ಮದ್ಯಸಾರ ಘಟಕ ಸ್ಥಾಪಿಸಿದ್ದರಿಂದ ಈಗ ಉತ್ಪಾದನೆ ಕಾರ್ಯಾರಂಭವಾಗಿದೆ.
ರಾಜ್ಯ ಸರ್ಕಾರದ ಆದೇಶದಂತೆ ತ್ರಿಪಕ್ಷೀಯ ವೇತನ ಜಾರಿಗೊಳಿಸಿ ಕಾಯಂ ನೌಕರರ ಸಂಬಳ ಪರಿಷ್ಕರಿಸಲಾಗಿದೆ. ಗುತ್ತಿಗೆ ಆಧಾರದ ನೌಕರರಿಗೂ ವೇತನ ಹೆಚ್ಚಳ ಮಾಡಲಾಗಿದೆ. ಎಲ್ಲ ಸಿಬ್ಬಂದಿಗೆ ತಲಾ 25 ಕೆ.ಜಿ. ಸಕ್ಕರೆ ನೀಡಲಾಗುತ್ತಿದ್ದು, ವೈದ್ಯಕೀಯ ಸೌಲಭ್ಯ, ವಿಮಾ ಯೋಜನೆಯೂ ಜಾರಿಗೊಳಿಸಲಾಗಿದೆ ಎಂದರು.
ಕಾರ್ಖಾನೆ ಉಪಾಧ್ಯಕ್ಷ ಮಲಗೊಂಡ ಪಾಟೀಲ ಮಾತನಾಡಿ, ಸಿಬ್ಬಂದಿ ಎಲ್ಲ ಸೌಲಭ್ಯ ಸದುಪಯೋಗ ಪಡಿಸಿಕೊಳ್ಳಬೇಕು ಎಂದರು.
ನೌಕರ ಸಂಘದ ಅನಿಲ ಶಿಂಧೆ ಮಾತನಾಡಿದರು. ನಿರ್ದೇಶಕ ಅವಿನಾಶ ಪಾಟೀಲ, ಸಮಿತ ಸಾಸನೆ, ಪ್ರತಾಪ ಮೇತ್ರಾನಿ, ಅಮಿತ ರಣದಿವೆ, ಪ್ರಕಾಶ ಶಿಂಧೆ, ಪ್ರಧಾನ ವ್ಯವಸ್ಥಾಪಕ ಕಾಶಿನಾಥ ಶೇಟೆ, ಕಾರ್ಮಿಕ ಸಂಘದ ಅಧ್ಯಕ್ಷ ರಾಜು ಖಂದಾರೆ, ರಾಜೇಂದ್ರ ಖರಾಬೆ, ಕಲ್ಲಪ್ಪ ನಾಯಿಕ, ನವೀನ ಬಾಡಕರ ಇತರರಿದ್ದರು.