ಕಲಬುರಗಿ: ಕಲ್ಯಾಣ ಕರ್ನಾಟಕದ ೪೫೪ ಸಿವಿಲ್ ಪೊಲೀಸ್ ಕಾನ್ಸ್ಟೆಬಲ್ಗಳ (ಸಿಪಿಸಿ) ನೇಮಕಕ್ಕಾಗಿ ನಗರದ ೧೩ ಕೇಂದ್ರಗಳಲ್ಲಿ ಪರೀಕ್ಷೆ ಯಾವುದೇ ಗೊಂದಲವಿಲ್ಲದೆ ಸುಸೂತ್ರವಾಗಿ ಭಾನುವಾರ ನಡೆಯಿತು. ಅಕ್ಟೋಬರ್ನಲ್ಲಿ ಕೆಇಎ ನಡೆಸಿದ್ದ ಪರೀಕ್ಷೆಯಲ್ಲಿ ಬ್ಲೂಟೂತ್ ಬಳಸಿ ಅಕ್ರಮ ನಡೆಸಿದ ಪ್ರಕರಣ ಬೆಳಕಿಗೆ ಬಂದಿದ್ದರಿಂದ ಈ ಪರೀಕ್ಷೆಯಲ್ಲಿ ಅಂತಹ ಯಾವುದೇ ಪ್ರಕರಣ ಜರುಗದಂತೆ ಹೈಅಲರ್ಟ್ ಆಗಿ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲಾಗಿತ್ತು.
ಎಲ್ಲೆಡೆ ಖಾಕಿ ಪಡೆಯ ತೀವ್ರ ಕಣ್ಗಾವಲಿನಲ್ಲಿ ಪರೀಕ್ಷೆ ನಡೆದವು. ಕೇಂದ್ರದೊಳಗೆ ಪ್ರವೇಶಿಸುವ ಮುನ್ನ ಪ್ರತಿಯೊಬ್ಬ ಅಭ್ಯರ್ಥಿಯ ಪ್ರವೇಶ ಪತ್ರವನ್ನು ಆನ್ಲೈನ್ನಲ್ಲಿ ಪರೀಕ್ಷಿಸಲಾಯಿತು. ಬಳಿಕ ದೈಹಿಕ ಪರೀಕ್ಷೆಯನ್ನು ಮೆಟಲ್ ಡಿಟೆಕ್ಟರ್ ಮೂಲಕ ಮಾಡಲಾಯಿತು.
ಅರೆ ವೈದ್ಯಕೀಯ ಸಿಬ್ಬಂದಿ, ಇಎನ್ಟಿ ವೈದ್ಯರನ್ನು ಸಹ ಕಿವಿ ಇತರ ಅಂಗಾಂಗ ತಪಾಸಣೆಗೆ ನಿಯೋಜಿಸಲಾಗಿತ್ತು. ಎಲ್ಲ ಪರೀಕ್ಷಾ ಕೇಂದ್ರಗಳನ್ನು ಖಾಕಿಪಡೆ ಒಂದು ದಿನ ಮುಂಚಿತವಾಗಿ ತನ್ನ ಸುಪರ್ದಿಗೆ ತೆಗೆದುಕೊಂಡಿತ್ತು. ಹೀಗಾಗಿ ಯಾವುದೇ ನಿಷೇಧಿತ ಇಲೆಕ್ಟಾçನಿಕ್ಸ್ ಇತರ ಯಾವುದೇ ನಕಲು ಮಾಡುವಂತ ಸಲಕರಣೆ ಒಳಗೆ ಒಯ್ಯದಂತೆ ನಿಗಾ ವಹಿಸಲಾಗಿತ್ತು.
ಜಿಲ್ಲಾ ಪೊಲೀಸ್ ಇಲಾಖೆ ೬ ಹಾಗೂ ನಗರ ಪೊಲೀಸ್ ಆಯುಕ್ತಾಲಯ ವ್ಯಾಪ್ತಿಯ ೭ ಕೇಂದ್ರ ಸೇರಿ ೧೩ ಕೇಂದ್ರಗಳಲಿ ೫೬೦೦ಕ್ಕೂ ಹೆಚ್ಚಿನ ಅಭ್ಯರ್ಥಿಗಳು ಪರೀಕ್ಷೆ ಬರೆದರು. ನೋಂದಾಯಿಸಿದವರಲ್ಲಿ ಶೇ.೧೦ರಿಂದ ೨೦ ಅಭ್ಯರ್ಥಿಗಳು ಪರೀಕ್ಷೆಗೆ ಗೈರಾಗಿರುವ ಸಾಧ್ಯತೆ ಇದೆ.
ಪೊಲೀಸ್ ಆಯುಕ್ತ ಚೇತನ್ ಆರ್., ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಡ್ಡೂರು ಶ್ರೀನಿವಾಸುಲು ನೇತೃತ್ವದಲ್ಲಿ ಭಾರಿ ಬಂದೋಬಸ್ತ್ ಮಾಡಲಾಗಿತ್ತು. ಸೇಂಟ್ ಮೇರಿ, ಎಸ್ಬಿಆರ್, ಅಪ್ಪಾ ಪಬ್ಲಿಕ್ ಶಾಲೆ, ಅಪ್ಪ ಇಂಜಿನಿಯರಿಂಗ್ ಕಾಲೇಜು, ಮಿಲಿಂದ ಕಾಲೇಜು, ಆಲ್ ಹುಡ್, ಸರ್ಕಾರಿ ಸ್ವತಂತ್ರ ಕಾಲೇಜು, ಫರಾನ್, ಟಿನ್ನಿ ಪರ್ಲ್, ಗುಡ್ ಶೆಫರ್ಡ್ ಇತರ ಕೇಂದ್ರಗಳಲ್ಲಿ ಪರೀಕ್ಷೆಗಳು ಜರುಗಿದವು.