More

    ಕಾಂಗ್ರೆಸ್ ತಂತ್ರ-ಕುತಂತ್ರ ನಡೆಯಲ್ಲ

    ಗದಗ: ಮಾಜಿ ಸಿಎಂ ಸಿದ್ದರಾಮಯ್ಯ ಅವರ ತಂತ್ರ, ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ ಅವರ ಕುತಂತ್ರ ನಡೆಯಲ್ಲ. ವಿಧಾನ ಪರಿಷತ್​ನ ನಾಲ್ಕು ಹಾಗೂ ವಿಧಾನಸಭೆಯ ಎರಡು ಸ್ಥಾನಗಳಲ್ಲಿ ಬಿಜೆಪಿ ಗೆಲುವು ಖಚಿತ ಎಂದು ಸಚಿವ ಸಮಾಜ ಕಲ್ಯಾಣ ಸಚಿವ ಶ್ರೀರಾಮುಲು ಹೇಳಿದರು.

    ನಗರದಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವಿ.ಪ. ಸದಸ್ಯರಾಗಿ ಎಸ್.ವಿ. ಸಂಕನೂರ ಆರು ವರ್ಷ ಕಾಲ ಸದನದ ಹೊರಗೆ ಮತ್ತು ಒಳಗೆ ಉತ್ತಮ ಕೆಲಸ ಮಾಡಿದ್ದಾರೆ. ಯುವಕರಿಗೆ ಉದ್ಯೋಗ ಮೇಳ ಆಯೋಜಿಸಿ ಅನೇಕರಿಗೆ ಕೆಲಸ ನೀಡಿದ್ದಾರೆ. ಇದರಿಂದ ಪದವೀಧರರ ಪರವಾಗಿ ಕೆಲಸ ಮಾಡಲು ಸಂಕನೂರ ಅವರಿಗೆ ಮತ್ತೊಮ್ಮೆ ಆಶೀರ್ವಾದ ಮಾಡಬೇಕು ಎಂದು ಶ್ರೀರಾಮುಲು ಹೇಳಿದರು.

    ರಾಜರಾಜೇಶ್ವರಿ ವಿಧಾನಸಭೆ ಕ್ಷೇತ್ರ ಸಂಸದ ಡಿ.ಕೆ. ಸುರೇಶ ಪ್ರತಿನಿಧಿಸುವ ಬೆಂಗಳೂರು ಗ್ರಾಮಾಂತರ ಲೋಕಸಭೆ ಕ್ಷೇತ್ರದ ಭಾಗವಾಗಿದ್ದು, ಹೇಗಾದರೂ ಮಾಡಿ ಗೆಲ್ಲಬೇಕು ಎಂದು ಶಿವಕುಮಾರ ಅವರು ಕುತಂತ್ರ ನಡೆಸಿದ್ದಾರೆ. ಅಲ್ಲಿ ಕಾಂಗ್ರೆಸ್ ಪರಾಭವಗೊಂಡರೆ ಶಿವಕುಮಾರ ಅವರ ಪ್ರತಿಷ್ಠೆ ಮಣ್ಣು ಪಾಲಾಗುತ್ತ್ತೆ. ಹೀಗಾಗಿ ಜಿದ್ದಿಗೆ ಬಿದ್ದಿರುವ ಡಿ.ಕೆ. ಶಿವಕುಮಾರ ಶತಾಯಗತಾಯ ಗೆಲ್ಲಲು ಹರಸಾಹಸ ಮಾಡುತ್ತಿದ್ದಾರೆ ಎಂದರು.

    ನಾನು ಡಿಸಿಎಂ ಆಗಬೇಕು ಎಂಬುದು ಜನರ ಆಸೆಯಾಗಿತ್ತು. ಆದರೆ, ಬಿಜೆಪಿಗೆ ಪೂರ್ಣಪ್ರಮಾಣದ ಬಹುಮತ ಸಿಗಲಿಲ್ಲ. ಇದರಿಂದ ಬೇರೆ ಬೇರೆ ಕಾರಣಗಳಿಂದ ಡಿಸಿಎಂ ಆಗಲು ಸಾಧ್ಯವಾಗಲಿಲ್ಲ. ಮುಂದಿನ ದಿನಗಳಲ್ಲಿ ನಾಯಕರು ಅಧಿಕಾರ ನೀಡುತ್ತಾರೆ ಎಂಬ ಸಂಪೂರ್ಣ ವಿಶ್ವಾಸವಿದೆ ಎಂದರು.

    ಸಂಸದ ಶಿವಕುಮಾರ ಉದಾಸಿ ಮಾತನಾಡಿ, ಪಶ್ಚಿಮ ಪದವೀಧರರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಎಸ್.ವಿ. ಸಂಕನೂರ ಅವರ ಗೆಲುವು ನೂರಕ್ಕೆ ನೂರರಷ್ಟು ಖಚಿತ. ಕಳೆದ ಚುನಾವಣೆಯಲ್ಲಿ 15 ಸಾವಿರ ಮತಗಳ ಅಂತರದಿಂದ ಸಂಕನೂರ ಗೆದ್ದಿದ್ದರು. ಈ ಬಾರಿ 25 ಸಾವಿರಕ್ಕೂ ಅಧಿಕ ಮತಗಳ ಅಂತರದಿಂದ ಗೆಲುವು ಸಾಧಿಸಲಿದ್ದಾರೆ ಎಂದು ಹೇಳಿದರು.

    ಈ ಸಂದರ್ಭದಲ್ಲಿ ಮುಖಂಡ ಅನಿಲ ಮೆಣಸಿನಕಾಯಿ, ಮೋಹನ ಮಾಳಶೆಟ್ಟಿ, ಕಾಂತಿಲಾಲ ಬನ್ಸಾಲಿ, ಎಂ.ಎಂ. ಹಿರೇಮಠ, ಅನಿಲ ಅಬ್ಬಿಗೇರಿ, ರಾಘವೇಂದ್ರ ಯಳವತ್ತಿ ಮತ್ತಿತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts