ದಾವಣಗೆರೆ: ಮನೆಗಳಲ್ಲಿ ಉತ್ಪತ್ತಿಯಾಗುವ ಹಸಿ ಕಸವನ್ನು ಸಮರ್ಪಕ ನಿರ್ವಹಣೆ ಮಾಡುವುದು ಪ್ರತಿಯೊಬ್ಬರ ಹೊಣೆಗಾರಿಕೆ. ಇದರಿಂದ ಸ್ಪಚ್ಛ ನಗರವಾಗಿಸಲು ಸಾಧ್ಯ ಎಂದು ಮಹಾನಗರ ಪಾಲಿಕೆ ಸದಸ್ಯ ಎಸ್.ಟಿ. ವೀರೇಶ್ ಹೇಳಿದರು.
ನಗರದ ಐಸಿಎಆರ್ ತರಳಬಾಳು ಕೃಷಿ ವಿಜ್ಞಾನ ಕೇಂದ್ರದಲ್ಲಿ ಭಾರತೀಯ ಕೃಷಿ ಅನುಸಂಧಾನ ಪರಿಷತ್ನ 95ನೇ ಸಂಸ್ಥಾಪನಾ
ದಿನಾಚರಣೆ ಪ್ರಯುಕ್ತ ಹಮ್ಮಿಕೊಂಡಿದ್ದ ಹಸಿ ತ್ಯಾಜ್ಯ ನಿರ್ವಹಣೆ ಮತ್ತು ತಾರಸಿ ತೋಟ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ನಗರದಲ್ಲಿ ನಿತ್ಯ ಉತ್ಪತ್ತಿಯಾಗುವ ಕಸವನ್ನು ನಿರ್ವಹಿಸುವುದೇ ಸವಾಲು. ಇಂತಹ ಪರಿಸ್ಥಿತಿಯಲ್ಲಿ ಮನೆಯಲ್ಲೇ ಸಂಸ್ಕರಿಸಿ ಬಳಸಿದರೆ ನಿರ್ವಹಣೆ ಸಾಧ್ಯ. ಪರಿಸರ ಸಂರಕ್ಷಣೆ ಎಲ್ಲರ ಜವಾಬ್ದಾರಿ, ಗಿಡ-ಮರ ಬೆಳೆಸಿ ಪೋಷಿಸಬೇಕು ಎಂದು ತಿಳಿಸಿದರು.
ತೋಟಗಾರಿಕೆ ಇಲಾಖೆ ಉಪನಿರ್ದೇಶಕ ರಾಘವೇಂದ್ರ ಪ್ರಸಾದ್ ಮಾತನಾಡಿ, ಇಲಾಖೆಯಿಂದ ಮುಂದಿನ ದಿನಗಳಲ್ಲಿ ಕೈತೋಟ ಮತ್ತು ತಾರಸಿ ತೋಟ ಹೆಚ್ಚಿನ ಮಟ್ಟದಲ್ಲಿ ಉತ್ತೇಜಿಸುವ ಯೋಜನೆ ಹಮ್ಮಿಕೊಳ್ಳಲಾಗುವುದು ಎಂದು ಹೇಳಿದರು.
ಕೇಂದ್ರದ ಮುಖ್ಯಸ್ಥ ಡಾ.ಟಿ.ಎನ್. ದೇವರಾಜ ಅಧ್ಯಕ್ಷತೆ ವಹಿಸಿ ಮಾತನಾಡಿ, ಭಾರತ ದೇಶ ಆಹಾರದಲ್ಲಿ ಸ್ವಾವಲಂಬಿಯಾಗಲು ಕೃಷಿ ಸಂಶೋಧನೆಗಳ ಕೊಡುಗೆ ಹೆಚ್ಚಿದೆ. ಜತೆಗೆ ರೈತರಿಗೆ ಸಂಶೋಧನೆ ತಲುಪಿಸಲು ಕೃಷಿ ವಿಜ್ಞಾನ ಕೇಂದ್ರಗಳು ದೇಶಾದ್ಯಂತ ಶ್ರಮಿಸುತ್ತಿವೆ. ರೈತರಿಗೆ ಉತ್ತಮ ತಾಂತ್ರಿಕತೆ ಹಾಗೂ ಮಾರುಕಟ್ಟೆ ಕಲ್ಪಿಸಲು ಭಾರತಿಯ ಕೃಷಿ ಅನುಸಂಧಾನ ಪರಿಷತ್ ಉತ್ತಮ ಕಾರ್ಯ ನಿರ್ವಹಿಸುತ್ತಿದೆ ಎಂದು ತಿಳಿಸಿದರು.
ಕೇಂದ್ರದ ಎಂ.ಜಿ. ಬಸವನಗೌಡ ಪ್ರಾಸ್ತಾವಿಕ ಮಾತನಾಡಿ, ದೇಶದಲ್ಲಿ ಇಂದು ಕೃಷಿಯಲ್ಲಿ ನಡೆಯುವ ಎಲ್ಲ ಸಂಶೋಧನೆ, ವಿಸ್ತರಣಾ ಚಟುವಟಿಕೆಗೆ ಮೂಲ ಭಾರತೀಯ ಕೃಷಿ ಅನುಸಂಧಾನ ಪರಿಷತ್, ಇದರ 95ನೇ ಸಂಸ್ಥಾಪನೆ ಅಂಗವಾಗಿ ಹಸಿ ಕಸ ನಿರ್ವಹಣೆ ಮತ್ತು ತಾರಸಿ ತೋಟ ಕಾರ್ಯಕ್ರಮ ಹಮ್ಮಿಕೊಂಡಿರುವುದು ಸ್ವಚ್ಚ ಭಾರತದೆಡೆಗೆ ಇಡುತ್ತಿರುವ ಹೆಜ್ಜೆಯಾಗಿದೆ ಎಂದರಲ್ಲದೆ, ತಾರಸಿ ತೋಟದ ನಿರ್ವಹಣೆ ಬಗ್ಗೆ ಮಾಹಿತಿ ನೀಡಿದರು.
ಪರಿಸರ ತಜ್ಞೆ ಡಾ. ಶಾಂತಾಭಟ್, ಹಸಿ ಕಸ ತ್ಯಾಜ್ಯ ನಿರ್ವಹಣೆಯ ಪ್ರಾತ್ಯಕ್ಷಿಕೆ ತೋರಿಸಿಕೊಟ್ಟರು. ನಾಗರೀಕರು, ಮಹಾನಗರ ಪಾಲಿಕೆ ಸಿಬ್ಬಂದಿ, ಕಸ ರಸ ಅಭಿಯಾನದ ಪದಾಧಿಕಾರಿಗಳು, ವಿಹಾ ವನಿತಾ ಪರಿಸರ ವೇದಿಕೆ ಸದಸ್ಯರಿದ್ದರು.
—