ಹುಬ್ಬಳ್ಳಿ: ಹಾರ್ಡ್ವೇರ್ ಅಂಗಡಿಯಲ್ಲಿ ಕಳ್ಳತನ ಮಾಡುತ್ತಿದ್ದ ಆರೋಪಿ, ಕರೊನಾ ಸೋಂಕಿತನ ಸಂಪರ್ಕಕ್ಕೆ ಒಳಪಟ್ಟ ಇಲ್ಲಿನ ಉಪನಗರ ಠಾಣೆ ನಾಲ್ವರು ಪೊಲೀಸರಿಗೆ ಕರೊನಾ ಸೋಂಕು ತಗುಲಿದೆ.
ಕಳ್ಳ ತಂದ ಕರೊನಾ ಬಾಂಬ್ನಿಂದ ಸಿಬ್ಬಂದಿಯಲ್ಲಿ ಮತ್ತಷ್ಟು ಭೀತಿ ಶುರುವಾಗಿದೆ. ಗದಗ ನಿವಾಸಿ ಕಳ್ಳತನ ಆರೋಪಿಯನ್ನು ಉಪನಗರ ಠಾಣೆ ಪೊಲೀಸರು ಜೂ. 28ರಂದು ಬಂಧಿಸಿ ಕೋರ್ಟ್ಗೆ ಹಾಜರುಪಡಿಸಿದ್ದರು. ನ್ಯಾಯಾಧೀಶರು ಆತನನ್ನು ನ್ಯಾಯಾಂಗ ಬಂಧನಕ್ಕೆ ಆದೇಶಿಸಿದ ಕೂಡಲೆ ಆತನನ್ನು ಕರೊನಾ ತಪಾಸಣೆಗೆ ಒಳಪಡಿಸಲಾಗಿತ್ತು. 3 ದಿನಗಳ ಬಳಿಕ ಆತನ ವರದಿ ಪಾಸಿಟಿವ್ ಬಂದಿತ್ತು.
ಜುಲೈ 3ರಂದು ಕಿಮ್ಸ್ನಿಂದ ಆತ ತಪ್ಪಿಸಿಕೊಂಡು ಅವಾಂತರ ಸೃಷ್ಟಿಸಿದ್ದ. ಸಂಜೆ ಗದಗನಲ್ಲಿ ಪೊಲೀಸರು ಬಂಧಿಸಿ ಕರೆತಂದಿದ್ದರು. ಕಳ್ಳನ ಪ್ರಾಥಮಿಕ ಸಂಪರ್ಕದಿಂದ ಕಳೆದ ವಾರ ಒಬ್ಬ ನೌಕರನಿಗೆ ಸೋಂಕು ತಗುಲಿತ್ತು. ಅಲ್ಲಿಂದ ಶುರುವಾದ ಪಾಸಿಟಿವ್ ಪ್ರಕರಣಗಳ ಸಂಖ್ಯೆ ಗುರುವಾರದವರೆಗೆ ಒಬ್ಬ ಮಹಿಳಾ ಕಾನ್ಸ್ಟೇಬಲ್ ಸೇರಿ ನಾಲ್ಕಕ್ಕೆ ಏರಿದೆ. ಮತ್ತೆಷ್ಟು ಸಿಬ್ಬಂದಿಗೆ ಹಬ್ಬುತ್ತದೋ ಎಂಬ ಆತಂಕ ಶುರುವಾಗಿದೆ.
ಎಸಿಪಿ ಕಚೇರಿ ಸೀಲ್ಡೌನ್: ಉಪನಗರ ಪೊಲೀಸ್ ಠಾಣೆಯ ನಾಲ್ವರು ಸಿಬ್ಬಂದಿಗೆ ಸೋಂಕು ತಗುಲಿದ ಹಿನ್ನೆಲೆಯಲ್ಲಿ ಅದೇ ಕಟ್ಟಡದಲ್ಲಿರುವ ಉತ್ತರ ಉಪ ವಿಭಾಗದ ಎಸಿಪಿ ಕಚೇರಿ, ಉಪನಗರ ಠಾಣೆ, ಮಹಿಳಾ ಪೊಲೀಸ್ ಠಾಣೆ, ಸೈಬರ್ ಕ್ರೖೆಂ ಪೊಲೀಸ್ ಠಾಣೆ ಸೇರಿ ಸಂಪೂರ್ಣ ಕಟ್ಟಡವನ್ನು ಸೀಲ್ಡೌನ್ ಮಾಡಲಾಗಿದೆ. ಹಲವು ಸಿಬ್ಬಂದಿಯನ್ನು ಕ್ವಾರಂಟೈನ್ಗೆ ಒಳಪಡಿಸಲಾಗಿದೆ. ಹುಬ್ಬಳ್ಳಿ ನಗರದ ದುರ್ಗದ ಬೈಲ್ ಬಳಿ ಇರುವ ಶಹರ ಪೊಲೀಸ್ ಠಾಣೆಯ 45 ವರ್ಷದ ಮುಖ್ಯ ಪೇದೆಗೆ ಕರೊನಾ ಸೋಂಕು ತಗುಲಿದ್ದು, ಠಾಣೆಯನ್ನು ಸೀಲ್ಡೌನ್ ಮಾಡಲಾಗಿದೆ. ವಾರಂಟ್ ಡ್ಯೂಟಿ ಮಾಡುತ್ತಿದ್ದ ಮುಖ್ಯ ಪೇದೆಗೆ ಐದಾರು ದಿನಗಳ ಹಿಂದೆ ಜ್ವರ, ಕೆಮ್ಮು ಕಾಣಿಸಿಕೊಂಡಿತ್ತು. ಕೂಡಲೆ, ರಜೆ ಹಾಕಿ ಕಿಮ್ಸ್ನಲ್ಲಿ ಪರೀಕ್ಷೆ ಮಾಡಿಸಿದ್ದರು. ಇದೀಗ ಅವರ ವರದಿ ಪಾಸಿಟಿವ್ ಬಂದಿದೆ. ಸದ್ಯ ಸಂಪೂರ್ಣ ಠಾಣೆ ಸ್ಯಾನಿಟೈಸ್ ಮಾಡಲಾಗಿದೆ. ಠಾಣೆ ಎದುರು ಬ್ಯಾರಿಕೇಡ್ ಇಟ್ಟು ಸೀಲ್ಡೌನ್ ಮಾಡಲಾಗಿದೆ.
ಒಂದೇ ದಿನ ನಾಲ್ಕು ಪೊಲೀಸರಿಗೆ ವೈರಸ್: ವಾಣಿಜ್ಯ ನಗರಿ ಹುಬ್ಬಳ್ಳಿಯಲ್ಲಿ ಕಳೆದ 24 ಗಂಟೆಗಳಲ್ಲಿ ಒಬ್ಬ ಮಹಿಳಾ ಪೊಲೀಸ್ ಕಾನ್ಸ್ಟೇಬಲ್ ಸೇರಿ ನಾಲ್ವರು ಪೊಲೀಸರಿಗೆ ಕರೊನಾ ವೈರಸ್ ತಗುಲಿದ್ದು, ಸೋಂಕು ಹರಡುವುದನ್ನು ತಡೆಗಟ್ಟಲು ಖಾಕಿ ಪಡೆ ಹರಸಾಹಸ ಪಡುತ್ತಿದೆ. ವಿದ್ಯಾನಗರ ಪೊಲೀಸ್ ಠಾಣೆಯ 54 ವರ್ಷದ ಎಎಸ್ಐ, ಘಂಟಿಕೇರಿ ಪೊಲೀಸ್ ಠಾಣೆಯ 36 ವರ್ಷದ ಮಹಿಳಾ ಕಾನ್ಸ್ಟೇಬಲ್, ದಕ್ಷಿಣ ಸಂಚಾರ ಠಾಣೆಯ 31 ವರ್ಷದ ಕಾನ್ಸ್ಟೇಬಲ್ ಮತ್ತು ಉಪನಗರ ಪೊಲೀಸ್ ಠಾಣೆ 31 ವರ್ಷದ ಕಾನ್ಸ್ಟೇಬಲ್ಗೆ ಗುರುವಾರ ಕರೊನಾ ದೃಢಪಟ್ಟಿದೆ.
ಪೊಲೀಸ್ ಸಿಬ್ಬಂದಿಯಲ್ಲಿ ಸೋಂಕು ಹರಡುತ್ತಿರುವ ಕಾರಣ ಜಾಗ್ರತೆ ವಹಿಸುವಂತೆ ನಮ್ಮ ಸಿಬ್ಬಂದಿಗೆ ಸೂಚಿಸಿದ್ದೇವೆ. ಸಾರ್ವಜನಿಕರು ಅನಗತ್ಯವಾಗಿ, ಸಣ್ಣ ಪುಟ್ಟ ವಿಷಯಕ್ಕೆ ಪೊಲೀಸ್ ಠಾಣೆಗಳಿಗೆ ಬರಬಾರದು. ಅಗತ್ಯವಿದ್ದಲ್ಲಿ ಠಾಣೆಯ ದೂರವಾಣಿ ಸಂಖ್ಯೆ ಅಥವಾ ಕಂಟ್ರೋಲ್ ರೂಮ್ ಸಂರ್ಪಸಬಹುದು.
| ಆರ್. ದಿಲೀಪ, ಪೊಲೀಸ್ ಆಯುಕ್ತ