ಚಿತ್ರದುರ್ಗ: ಗುರುವಿಗಿಂತ ದೊಡ್ಡದಾದ ಹಾಗೂ ಸಮಾನವಾದ ವಸ್ತು ಯಾವುದೂ ಇಲ್ಲ ಎಂದು ಶ್ರೀ ಸದ್ಗುರು ಕಬೀರಾನಂದಾಶ್ರಮದ ಶ್ರೀ ಶಿವಲಿಂಗಾನಂದ ಸ್ವಾಮೀಜಿ ಹೇಳಿದರು.
ನಗರದ ಬಾಪೂಜಿ ಶಿಕ್ಷಣ ಮಹಾವಿದ್ಯಾಲಯದಲ್ಲಿ ಮಂಗಳವಾರ ಏರ್ಪಡಿಸಿದ್ದ ಹತ್ತು ಬೆಳದಿಂಗಳು ವಿಶೇಷ ಕಾರ್ಯಕ್ರಮ, ಪ್ರಥಮ ಬಿ.ಇಡಿ ಪ್ರಶಿಕ್ಷಣಾರ್ಥಿಗಳಿಗೆ ಸ್ವಾಗತ, ವಿದ್ಯಾರ್ಥಿ ಸಂಘದ ಉದ್ಘಾಟನೆ ಮತ್ತು ಪ್ರತಿಭಾ ಪುರಸ್ಕಾರ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಮಾತನಾಡಿದ ಅವರು, ಕಲಿಕೆಗೆ ಗುರುವಿನ ಮಾರ್ಗದರ್ಶನ ಬೇಕು. ಜ್ಞಾನಕ್ಕಾಗಿ ಆಳವಾದ ಅಧ್ಯಯನದ ಅಗತ್ಯವಿದೆ. ಗುರುವಿನಿಂದ ಪಡೆದ ವಿದ್ಯೆ ಮುಂದೆ ಆತನನ್ನು ಗುರುವಾಗಿಸುತ್ತದೆ ಎಂದರು.
ಹರಪನಹಳ್ಳಿಯ ಟಿಎಂಇ ಶಿಕ್ಷಣ ಮಹಾವಿದ್ಯಾಲಯದ ಪ್ರಾಚಾರ್ಯ ಪ್ರೊ.ಟಿ.ಎಂ.ರಾಜಶೇಖರಯ್ಯ ಮಾತನಾಡಿ, ಸಂವಿಧಾನ ಶಿಲ್ಪಿ ಡಾ. ಬಿ.ಆರ್.ಅಂಬೇಡ್ಕರ್ ಆಶಯಕ್ಕೆ ಪೂರಕವಾಗಿ ನಾಡಿನ ಮಠಗಳು ಕೂಡ ಶಿಕ್ಷಣ ನೀಡುತ್ತಿವೆ. ಶಿಕ್ಷಣದಲ್ಲಿ ಆಮೂಲಾಗ್ರ ಬದಲಾವಣೆಗೆ ಕೇಂದ್ರ ಸರ್ಕಾರ ಮುಂದಾಗಿದೆ ಎಂದರು.
ಅಧ್ಯಕ್ಷತೆ ವಹಿಸಿದ್ದ ಬಾಪೂಜಿ ಸಮೂಹ ಸಂಸ್ಥೆಗಳ ಕಾರ್ಯದರ್ಶಿ ಕೆ.ಎಂ.ವೀರೇಶ್ ಮಾತನಾಡಿದರು. ದಾವಣಗೆರೆ ವಿವಿ ಪರೀಕ್ಷಾಂಗ ಕುಲ ಸಚಿವ ಡಾ.ಶಿವಶಂಕರ್ ಸಮಾರಂಭವನ್ನು ಉದ್ಘಾಟಿಸಿದರು. ನಿವೃತ್ತ ಪ್ರಾಚಾರ್ಯ ಡಾ.ಎಂ.ಕೆ.ಪ್ರಭುದೇವ್, ಸಂಸ್ಥೆ ನಿರ್ದೆಶಕ ಕೆ. ಎಂ.ಚೇತನ್, ಪ್ರೊ.ಕೆ.ಜಂಬುನಾಥ್, ಪ್ರಾಂಶುಪಾಲೆ ಎಂ.ಆರ್.ಜಯಲಕ್ಷಿ ್ಮ ಇದ್ದರು.
ಈ ಸಂದರ್ಭದಲ್ಲಿ 2020-22ನೇ ಸಾಲಿನ ಬಿಇಡಿ ಪರೀಕ್ಷೆಯಲ್ಲಿ ಹೆಚ್ಚು ಅಂಕ ಪಡೆದ ಕೆ.ಸ್ಫೂರ್ತಿ, ಶಮೀಮ್ಬಾನು, ಎಂ.ತ್ರಿವೇಣಿ ಹಾಗೂ ಪ್ರಿಯಾ ಸಾನಿಕಂ ಅವರನ್ನು ಗೌರವಿಸಲಾಯಿತು. ಶಿವಕುಮಾರ್ ಸ್ವಾಗತಿಸಿ, ಚಂದ್ರಶೇಖರ್ ವಂದಿಸಿದರು, ಪದ್ಮಾ ನಿರೂಪಿಸಿದರು. ಕಾವ್ಯ ಸ್ವಾಗತ ನೃತ್ಯ ಪ್ರಸ್ತುತ ಪಡಿಸಿದರು.