ಬೆಳಗಾವಿ: ಅನಗೋಳದ ಹರಿಮಂದಿರದಲ್ಲಿ ಜ.17ರಿಂದ 23ರ ವರೆಗೆ ಪ್ರವಚನ ನಿಮಿತ್ತ ಸಂಚಾರ ಮಾರ್ಗದಲ್ಲಿ ಬದಲಾವಣೆ ಮಾಡಿ ನಗರ ಪೊಲೀಸ್ ಆಯುಕ್ತ ಡಾ.ಎಂ.ಬಿ.ಬೋರಲಿಂಗಯ್ಯ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಕಲಾವತಿ ದೇವಿ ಪುಣ್ಯತಿಥಿ ಉತ್ಸವ ಹಿನ್ನೆಲೆಯಲ್ಲಿ ಅನಗೋಳದ ಮುಖ್ಯ ರಸ್ತೆಯಲ್ಲಿರುವ ಹರಿ ಮಂದಿರದಲ್ಲಿ ಪ್ರತಿನಿತ್ಯ ಪ್ರವಚನ ಜರುಗಲಿದೆ.
ಸಂಚಾರ ದಟ್ಟಣೆ ಉಂಟಾಗಬಾರದು ಎಂಬ ಉದ್ದೇಶದಿಂದ ಸಂಚಾರ ಮಾರ್ಗದಲ್ಲಿ ಬದಲಾವಣೆ ಮಾಡಲಾಗಿದೆ. ಜ.23ರ ವರೆಗೆ ಪ್ರತಿದಿನ ಬೆಳಗ್ಗೆ 7ರಿಂದ 8.30 ಗಂಟೆ, ಬೆಳಗ್ಗೆ 10.30ರಿಂದ ಮಧ್ಯಾಹ್ನ 12 ಗಂಟೆ, ಸಂಜೆ 5.30ರಿಂದ ರಾತ್ರಿ 7 ಗಂಟೆ ಹಾಗೂ ರಾತ್ರಿ 9 ರಿಂದ 10.30ಗಂಟೆಯವರೆಗೆ ಡಿವಿಎಸ್ ಚೌಕ್ ಅನಗೋಳ ಕಡೆಯಿಂದ ಹರಿಮಂದಿರ ಬಳಸಿ ಆರ್ಪಿಡಿ ವೃತ್ತ, ಖಾನಾಪುರ ಮುಖ್ಯ ರಸ್ತೆ ಸೇರುವ ಎಲ್ಲ ಮಾದರಿ ವಾಹನಗಳು ಆಶೀರ್ವಾದ ಮಂಗಲ ಕಾರ್ಯಾಲಯ ಹತ್ತಿರ ಎಡ ತಿರುವು ಪಡೆದು ಮುಖ್ಯ ರಸ್ತೆಗೆ ಸಾಗುವುದು.
ಆರ್ಪಿಡಿ ವೃತ್ತದ ಕಡೆಯಿಂದ ಡಿವಿಎಸ್ ಚೌಕ್ ಅನಗೋಳ ಮತ್ತು ಭಾಗ್ಯನಗರ ಸಾಗುವ ಎಲ್ಲ ಮಾದರಿ ವಾಹನಗಳು ಅನಗೋಳ ಮುಖ್ಯ ರಸ್ತೆಯ ಪುರೋಹಿತ ಸ್ವೀಟ್ ಮಾರ್ಟ್ ಹತ್ತಿರ ಎಡ ತಿರುವು ಪಡೆದು ವಿದ್ಯಾನಗರ 1ನೇ ಕ್ರಾಸ್ ಮೂಲಕ ಮುಖ್ಯ ರಸ್ತೆ ಸೇರಬೇಕು ಎಂದು ಪೊಲೀಸ್ ಆಯುಕ್ತ ತಿಳಿಸಿದ್ದಾರೆ.