ಕಾರವಾರ: ಕರೊನಾ ಕುರಿತು ಜನರಲ್ಲಿ ಜಾಗೃತಿ ಮೂಡಿಸಿ ಎಂದು ತಾಪಂ ಅಧ್ಯಕ್ಷೆ ಪ್ರಮಿಳಾ ನಾಯ್ಕ ಆರೋಗ್ಯಾಧಿಕಾರಿಗೆ ಸೂಚನೆ ನೀಡಿದರು.
ಕಾರವಾರ ತಾಪಂ ಸಭಾಭವನದಲ್ಲಿ ಶನಿವಾರ ಏರ್ಪಡಿಸಿದ್ದ ಕೆಡಿಪಿ ಸಭೆಯಲ್ಲಿ ಮಾತನಾಡಿದ ಅವರು, ಜನ ಕರೊನಾ ಹರಡುವ ಆತಂಕದಲ್ಲಿದ್ದಾರೆ. ಅವರಿಗೆ ರೋಗದ ಬಗ್ಗೆ ಮಾಹಿತಿ ಇಲ್ಲ. ಕೆಮ್ಮು ಬಂದರೂ ಕರೊನಾ ಬರುತ್ತೆ ಎಂಬ ಭಯದಲ್ಲಿದ್ದಾರೆ. ಹಾಗಾಗಿ ಅಂಗನವಾಡಿಗಳು, ಗ್ರಾಪಂಗಳಲ್ಲಿ ಸಭೆ ನಡೆಸಿ ಅರಿವು ಮೂಡಿಸಿ ಎಂದರು.
ಅದಕ್ಕೆ ಸ್ಪಷ್ಟನೆ ನೀಡಿದ ಆರೋಗ್ಯಾಧಿಕಾರಿ ಸುದಿತಾ ಪೆಡ್ನೇಕರ್, ಆಶಾ ಕಾರ್ಯಕರ್ತೆಯರು ತಾಲೂಕಿನ
ಎಲ್ಲ ಮನೆಗಳಿಗೆ ತೆರಳಿ ಜಾಗೃತಿ ಹಾಗೂ ಮಾಹಿತಿ ನೀಡುವಲ್ಲಿ ಈಗಾಗಲೇ ವಾರದಿಂದ ಕಾರ್ಯಪ್ರವೃತ್ತ ರಾಗಿದ್ದಾರೆ ಎಂದರು.
ಎಸ್ಎಸ್ಎಲ್ಸಿ, ಪಿಯುಸಿ ಹಾಗೂ ಇತರ ವಿದ್ಯಾರ್ಥಿಗಳಿಗೂ ವಾರ್ಷಿಕ ಪರೀಕ್ಷೆ ನಡೆಯುವುದರಿಂದ ವಿದ್ಯುತ್ ಕಡಿತ ಮಾಡದಂತೆ ಹೆಸ್ಕಾಂ ಎಇಇ ವಿ.ಎಸ್. ಶೇಬಣ್ಣನವರ ಅವರಿಗೆ ಅಧ್ಯಕ್ಷೆ ಸೂಚಿಸಿದರು.
ತಾಪಂ ಇಒ ಆನಂದಕುಮಾರ ಬಾಲಣ್ಣನವರ ಮಾತನಾಡಿ, ಜಿಪಂ ಇಂಜಿನಿಯರಿಂಗ್ ವಿಭಾಗ, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ವಿಭಾಗದ ಇಂಜಿನಿಯರ್ಗಳು ಮಾ. 10ರೊಳಗೆ ಎಲ್ಲ ಬಿಲ್ಗಳನ್ನು ತಾಪಂಗೆ ಕಳಿಸಬೇಕು. ಮಾ. 12ರೊಳಗೆ ಎಲ್ಲ ಬಿಲ್ಗಳೂ ಖಜಾನೆ ತಲುಪಬೇಕಿವೆ. ಎಲ್ಲ ಕಾಮಗಾರಿಗಳ ಜಿಪಿಎಸ್ ಫೋಟೋ ಕೂಡ ಅಗತ್ಯ ಎಂದರು.
ಉಪಾಧ್ಯಕ್ಷ ರವೀಂದ್ರ ಪವಾರ ವೇದಿಕೆಯಲ್ಲಿದ್ದರು.
ಬಾಡಿಗೆ ಕಟ್ಟಡದಲ್ಲಿನ ಶಾಲೆ ಸಮಸ್ಯೆ ಕುರಿತು ಚರ್ಚೆ: ಸದಾಶಿವಗಡ ನಾಗಪೋಂಡಾದಲ್ಲಿ ಶತಮಾನಗಳ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಬಾಡಿಗೆ ಕಟ್ಟಡದಲ್ಲಿ ನಡೆಯುತ್ತಿರುವ ವಿಚಾರ ತಾಪಂ ಕೆಡಿಪಿ ಸಭೆಯಲ್ಲಿ ಚರ್ಚೆಯಾಯಿತು. ಜ. 23ರಂದು ‘ವಿಜಯವಾಣಿ’ ಈ ಸಂಬಂಧ ವರದಿ ಪ್ರಕಟಿಸಿತ್ತು.
ಮಾ. 4ರಂದು ಜಿಪಂ ಸಿಇಒ ಎಂ. ರೋಶನ್ ಅವರು ಶಾಲೆಗೆ ಭೇಟಿ ನೀಡಿ ಪರಿಶೀಲಿಸಿದ್ದರು. ಸಮಸ್ಯೆ ಬಗೆಹರಿಸುವ ಭರವಸೆ ನೀಡಿದ್ದರು. ತಾಪಂ ಅಧ್ಯಕ್ಷೆ ಪ್ರಮಿಳಾ ನಾಯ್ಕ ಅವರು ಸಭೆಯಲ್ಲಿ ಈ ವಿಷಯ ಪ್ರಸ್ತಾಪಿಸಿ, ಶೀಘ್ರ ಸೂಕ್ತ ಕ್ರಮ ವಹಿಸುವಂತೆ ಶಿಕ್ಷಣ ಇಲಾಖೆ ಅಧಿಕಾರಿ ವಿಶಾಂತ ನಾಯಕ ಅವರಿಗೆ ಸೂಚಿಸಿದರು.