ಔರಾದ್: ಪ್ರಸಕ್ತ ಬೇಸಿಗೆಯಲ್ಲಿ ಜಾನುವಾರುಗಳಿಗೆ ಮೇವು ಹಾಗೂ ಕುಡಿಯುವ ನೀರಿನ ಸಮಸ್ಯೆ ಜತೆಗೆ ಕರೊನಾ ಸಂಕಷ್ಟ ಎದುರಾಗಿದ್ದು, ರೈತರು ತಮ್ಮ ದನಕರುಗಳನ್ನು ಕಮ್ಮಿ ಬೆಲೆಗೆ ಮಾರಾಟ ಮಾಡುತ್ತಿದ್ದಾರೆ. 50 ರಿಂದ 60 ಸಾವಿರ ರೂ. ಮೌಲ್ಯದ ಜಾನುವಾರುಗಳು ಕೇವಲ 25ರಿಂದ 30 ಸಾವಿರ ರೂ.ಗಳಿಗೆ ಕಸಾಯಿಖಾನೆಗೆ ಮಾರಾಟ ಮಾಡುತ್ತಿದ್ದಾರೆ. ಬೇಸಿಗೆಯಲ್ಲಿ ಒಣ ಮೇವು ಜಾನುವಾರುಗಳಿಗೆ ಲಭಿಸುತ್ತಿತ್ತು. ಆದರೆ ಈಗ ಮೇವಿಗೆ ತೀವ್ರ ಕೊರತೆ ಇದ್ದು, ದನಕರುಗಳನ್ನು ಹೇಗಪ್ಪ ಸಾಕೋದು ಎಂಬ ಚಿಂತೆ ರೈತರನ್ನು ಕಂಗಾಲಾಗಿಸಿದೆ.
ರೈತರು ಮನಸ್ಸು ಗಟ್ಟಿ ಮಾಡಿಕೊಂಡು ಪ್ರೀತಿಯಿಂದ ಸಾಕಿದ ತಮ್ಮ ಒಡನಾಡಿಗಳಾದ ಎತ್ತು, ಎಮ್ಮೆ, ಆಕಳು, ಎತ್ತುಗಳನ್ನು ಮಾರಾಟ ಮಾಡುತ್ತಿದ್ದಾರೆ. ಪ್ರತಿ ಸೋಮುವಾರ ಪಟ್ಟಣದಲ್ಲಿ ಜಾನುವಾರುಗಳ ಸಂತೆ ನಡೆಯುತ್ತಿತ್ತು. ಲಾಕ್ಡೌನ್ನಿಂದ ಕಳೆದ ಎರಡು ತಿಂಗಳಿಂದ ಸಂತೆ ಬಂದ್ ಮಾಡಲಾಗಿದೆ. ಹೀಗಾಗಿ ರೈತರು ಬೆಲೆ ಬಾಳುವ ಜಾನುವಾರುಗಳು ಕಡಿಮೆ ಬೆಲೆಗೆ ಮಾರಾಟ ಮಾಡುತ್ತಿರುವುದು ನೋವಿನ ಸಂಗತಿಯಾಗಿದೆ.
ರೈತರ ಅಸಾಯಕತೆ ಕಸಾಯಿಖಾನೆಗಳಿಗೆ ವರವಾಗಿದೆ. ಕಡಿಮೆ ಬೆಲೆಯಲ್ಲಿ ದನಕರುಗಳನ್ನು ಗ್ರಾಮೀಣ ಭಾಗದಲ್ಲಿ ಖರೀದಿಸುತ್ತಿರುವ ದೃಶ್ಯಗಳು ಸಾಮಾನ್ಯವಾಗಿವೆ. ಹೋಬಳಿ ಮಟ್ಟದಲ್ಲಿ ಮೇವು ಕೇಂದ್ರ ಆರಂಭಿಸಿದರೆ ಅನುಕೂಲವಾಗಲಿದೆ. ಸರ್ಕಾರದಿಂದ ಕೇಂದ್ರ ಆರಂಭಿಸಿ ಉಚಿತವಾಗಿ ರೈತರಿಗೆ ನೀಡಿದರೆ ಬೆಲೆ ಬಾಳುವ ಜಾನುವಾರುಗಳನ್ನು ಉಳಿಸಿಕೊಳ್ಳಬಹುದು ಎನ್ನುತ್ತಾರೆ ರೈತರು.