ಯಾದಗಿರಿ: ಕಳೆದೊಂದು ವಾರದಿಂದ ಭಾರಿ ಕುತೂಹಲ ಮೂಡಿಸಿದ್ದ ಇಲ್ಲಿನ ನಗರಸಭೆ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಕ್ಕೆ ಗುರುವಾರ ನಡೆದ ಚುನಾವಣೆಯಲ್ಲಿ ಬಿಜೆಪಿಯ ವಿಲಾಸ್ ಪಾಟೀಲ್ ಅಧ್ಯಕ್ಷರಾಗಿ, ಪ್ರಭಾವತಿ ಮಾರುತಿ ಕಲಾಲ್ ಉಪಾಧ್ಯಕ್ಷರಾಗಿ ಆಯ್ಕೆಯಾದರು.
ಸಾಮಾನ್ಯ ಮತ್ತು ಸಾಮಾನ್ಯ ಮಹಿಳೆಗೆ ಮೀಸಲಾಗಿದ್ದ ಇಲ್ಲಿನ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಗಳಿಗೆ ಬಿಜೆಪಿಯಿಂದ ವಿಲಾಸ್, ಕಾಂಗ್ರೆಸ್ನಿಂದ ಮನಸೂರ್ ಅಹ್ಮದ್ ಅಪ್ಘಾನ್ ಅಧ್ಯಕ್ಷ ಸ್ಥಾನಕ್ಕೆ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ಬಿಜೆಪಿಯಿಂದ ಪ್ರಭಾವತಿ ಕಲಾಲ್ ಮತ್ತು ಕಾಂಗ್ರೆಸ್ನಿಂದ ನಿರ್ಮಲಾ ಜಗನ್ನಾಥ ಉಪಾಧ್ಯಕ್ಷ ನಾಮಪತ್ರ ಸಲ್ಲಿಕೆ ಮಾಡಿದ್ದರು. ಇದರಿಂದ ಕೈ ಎತ್ತುವ ಮೂಲಕ ಚುನಾವಣೆ ನಡೆಸಿದ ಸಹಾಯಕ ಆಯುಕ್ತರೂ ಆದ ಚುನಾವಣಾಧಿಕಾರಿ ಶಂಕರಗೌಡ ಪಾಟೀಲ್ ಸೋಮನಾಳ್ ಚುನಾವಣೆ ಪ್ರಕ್ರಿಯೆ ನಡೆಸಿದರು.
ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನಗಳಿಗೆ ಬಿಜೆಪಿಯ ವಿಲಾಸ್ ಪಾಟೀಲ್, ಪ್ರಭಾವತಿಗೆ ರಾಯಚೂರು ಸಂಸದ ರಾಜಾ ಅಮರೇಶ್ವರ ನಾಯಕ್, ಶಾಸಕ ವೆಂಕಟರಡ್ಡಿ ಮುದ್ನಾಳ್, 16 ಜನ ಬಿಜೆಪಿ ಸೇರಿದಂತೆ 2 ಜೆಡಿಎಸ್ ಮತ್ತು ಓರ್ವ ಪಕ್ಷೇತರ ಸದಸ್ಯರು ಬೆಂಬಲ ಸೂಚಿಸಿದ ಹಿನ್ನೆಲೆಯಲ್ಲಿ 21 ಮತಗಳಿಂದ ಇಬ್ಬರು ಅಧ್ಯಕ್ಷ ಮತ್ತು ಉಪಾಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ ಎಂದು ಸೋಮನಾಳ್ ಘೋಷಣೆ ಮಾಡಿದರು. ಇನ್ನೂ ಕಾಂಗ್ರೆಸ್ನ ಮನಸೂರ್ ಅಹ್ಮದ್, ನಿರ್ಮಲಾ ಅವರು ತಲಾ 11 ಮತಗಳನ್ನು ಪಡೆದುಕೊಳ್ಳುವ ಮೂಲಕ ತೃಪ್ತಿಪಟ್ಟುಕೊಂಡರು.
ನೂತನ ಅಧ್ಯಕ್ಷ ಮತ್ತು ಉಪಾಧ್ಯಕ್ಷರನ್ನು ಅಭಿನಂದಿಸಿ ಮಾತನಾಡಿದ ಶಾಸಕ ಮುದ್ನಾಳ್, ನಗರದ ಅಭಿವೃದ್ಧಿಗೆ ನಮ್ಮೆಲ್ಲ ಸದಸ್ಯರು ಕಂಕಣಬದ್ಧರಾಗಿದ್ದಾರೆ. ವಿರೋಧ ಪಕ್ಷಗಳು ನಮ್ಮಲ್ಲಿ ಒಡಗಿದೆ ಎಂದು ಭಾವಿಸಿದ್ದರೂ ಅದನ್ನು ನಮ್ಮ ಸದಸ್ಯರು ಹುಸಿಗೊಳಿಸಿದ್ದಾರೆ ಎಂದು ಹೇಳಿದರು.
ಸಂಸದ ರಾಜಾ ಅಮರೇಶ್ವರ ನಾಯಕ ಮಾತನಾಡಿ, ಕೇಂದ್ರ ಮತ್ತು ರಾಜ್ಯದಲ್ಲಿ ನಮ್ಮ ಸರ್ಕಾರ ಅಧಿಕಾರದಲ್ಲಿದ್ದು, ನಗರದ ಅಭಿವೃದ್ಧಿಗೆ ಎಲ್ಲರೂ ಶ್ರಮಿಸೋಣ ಎಂದರು. ಮಾಜಿ ಶಾಸಕ ಡಾ.ವೀರಬಸವಂತರಡ್ಡಿ ಮುದ್ನಾಳ್, ಬಿಜೆಪಿ ಜಿಲ್ಲಾಧ್ಯಕ್ಷ ಡಾ.ಶರಣಭೂಪಾಲರಡ್ಡಿ ನಾಯ್ಕಲ್, ಪ್ರಧಾನ ಕಾರ್ಯದಶರ್ಿಗಳಾದ ದೇವಿಂದ್ರನಾಥ ನಾದ್, ವೆಂಕಟರಡ್ಡಿ ಅಬ್ಬೆತುಮಕೂರ, ಗುರು ಕಾಮಾ, ಪ್ರಮುಖರಾದ ಮಲ್ಲನಗೌಡ ಪಾಟೀಲ್ ಹತ್ತಿಕುಣಿ, ಸಿದ್ದಪ್ಪ ಹೊಟ್ಟಿ, ಲಲಿತಾ ಅನಪುರ, ಖಂಡಪ್ಪ ದಾಸನ್, ಬಿಜೆಪಿ ಮಾಧ್ಯಮ ಪ್ರಮುಖ ವಿರೂಪಾಕ್ಷಯ್ಯ ಸ್ವಾಮಿ ಹೆಡಗಿಮದ್ರಾ ಇದ್ದರು.ನಂತರ ಬಿಜೆಪಿ ಸದಸ್ಯರು ಸಂಭ್ರಮಾಚರಣೆ ನಡೆಸಿದರು.