ಕಮಲನಗರ: ಡಾ.ಚನ್ನಬಸವ ಪಟ್ಟದ್ದೇವರ ಕೆರೆಯ ಮರು ನಿರ್ಮಾಣ, ಆಧುನೀಕರಣ, ಸೌಂದರ್ಯಿಕರಣ ಕಾಮಗಾರಿಗೆ 7 ಕೋಟಿ ಅನುದಾನ ಮಂಜೂರು ಮಾಡಿಸಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಪ್ರಭು ಚವ್ಹಾಣ್ ಹೇಳಿದರು.
ಪಟ್ಟಣದ ಡಾ.ಚನ್ನಬಸವ ಪಟ್ಟದ್ದೇವರ ಕೆರೆ ಆವರಣಕ್ಕೆ ಶುಕ್ರವಾರ ಭೇಟಿ ನೀಡಿದ ಅವರು, ಕೆರೆ ಒಡ್ಡಿನಲ್ಲಿ ಬಿರುಕು ಕಾಣಿಸಿಕೊಂಡಿದ್ದರಿಂದ ನೀರು ಸಂಗ್ರಹವಾಗುತ್ತಿಲ್ಲ. ಹೀಗಾಗಿ ಮರು ನಿರ್ಮಾಣಕ್ಕೆ ನಿರ್ಧರಿಸಲಾಗಿದೆ ಎಂದರು.
ಕೆರೆ ಮರು ನಿಮರ್ಾಣದ ಕ್ರಿಯಾಯೋಜನೆ ಸಿದ್ಧಪಡಿಸಲು ಸೂಚಿಸಿದ್ದು, ಕರೊನಾ ಹತೋಟಿಗೆ ಬಂದ ನಂತರ 7 ಕೋಟಿ ಅನುದಾನದಲ್ಲಿ ಒಡ್ಡಿನ ವಿಸ್ತರಣೆ, ಕೋಡಿ ಮೇಲ್ಸೇತುವೆ, ಕೆರೆ ಸುತ್ತ ಪಾದಾಚಾರಿ ಮಾರ್ಗ, ತಂತಿ ಬೇಲಿ, ವಿದ್ಯುತ್ ಅಳವಡಿಕೆ, ಹುಲ್ಲು ಹಾಸು ಹಾಗೂ ಡಾಂಬರೀಕರಣ ಯೋಜನೆ ಇದೆ ಎಂದು ತಿಳಿಸಿದರು.
ಖಾತ್ರಿ ಕೆಲಸ ಪರಿಶೀಲನೆ: ಕಮಲನಗರದಲ್ಲಿ ಕೈಗೊಂಡಿರುವ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಕಾಮಗಾರಿಯನ್ನು ಸಚಿವ ಚವ್ಹಾಣ್ ಗುರುವಾರ ಪರಿಶೀಲಿಸಿದರು. ಕೆಲಸ ಇಲ್ಲದವರು ನರೇಗಾ ಉಪಯೋಗ ಪಡೆದುಕೊಳ್ಳಬೇಕು. ಮುಂಜಾಗ್ರತೆಯೊಂದಿಗೆ ಕೆಲಸ ಮಾಡಲು ಸೂಚಿಸಿದರು.
ಖಾತ್ರಿ ಯೋಜನೆಯಡಿ ಪ್ರತಿದಿನ ಕಮಲನಗರದಲ್ಲಿ 400, ಬಾಲೂರದಲ್ಲಿ 40 ಹಾಗೂ ಮುರ್ಗ್ (ಕೆ)ನಲ್ಲಿ 60 ಕಾರ್ಮಿಕರಿಗೆ ಉದ್ಯೋಗ ನೀಡಲಾಗಿದೆ. ಔರಾದ್ ಹಾಗೂ ಕಮಲನಗರ ತಾಲೂಕಿನಲ್ಲಿ ಸುಮಾರು 1500 ಕಾರ್ಮಿಕರಿಗೆ ಕೆಲಸ ನೀಡಲಾಗಿದೆ ಎಂದು ತಾಪಂ ಸಹಾಯಕ ನಿರ್ದೇಶಕ ಶಿವಾನಂದ ಔರಾದೆ ತಿಳಿಸಿದರು.