ನಂಜನಗೂಡು: ನಟ ಡಾ.ಪುನೀತ್ರಾಜಕುಮಾರ್ ಅಭಿನಯದ ಗಂದಧಗುಡಿ ಚಲನಚಿತ್ರದ ಬಿಡುಗಡೆ ಹಾಗೂ ದಲಿತ್ ಪ್ಯಾಂಥರ್ಸ್ ಸಂಘಟನೆಯ ಸ್ಮರಣಾರ್ಥ ಶಾಸಕ ಬಿ.ಹರ್ಷವರ್ಧನ್ ನಂಜನಗೂಡಿನ ಜನತೆಯ ಹೆಸರಿನಲ್ಲಿ ಮೈಸೂರು ಮೃಗಾಲಯದ ಕಪ್ಪು ಚಿರತೆ(ಬ್ಲಾಕ್ ಪ್ಯಾಂಥರ್)ಯನ್ನು ದತ್ತು ಪಡೆದಿದ್ದಾರೆ.
2022ರ ಅಕ್ಟೋಬರ್ 28ರಿಂದ ಮುಂದಿನ ವಷರ್ 2023ರ ಅಕ್ಟೋಬರ್ 27ರವರೆಗೆ ಕಪ್ಪು ಚಿರತೆ ದತ್ತು ಪಡೆದಿರುವ ಅವರು ಈ ಸಂಬಂಧ ಮೃಗಾಲಯ ಪ್ರಾಧಿಕಾರಕ್ಕೆ 50 ಸಾವಿರ ರೂ. ಗಳ ಚೆಕ್ ಪಾವತಿಸಿದ್ದಾರೆ.
ಈ ಕುರಿತು ಮಾತನಾಡಿದ ಶಾಸಕ ಬಿ.ಹಷರ್ವರ್ಧನ್, ನಟ ಡಾ.ಪುನೀತ್ರಾಜಕುಮಾರ್ ಕನ್ನಡ ನಾಡು ನುಡಿಯ ಹಿರಿಮೆಯನ್ನು ಸಾರುವ ಜತೆಗೆ ಅಮೂಲ್ಯ ವನ್ಯಜೀವಿ ಹಾಗೂ ಪ್ರಕೃತಿ ಸಂಪತ್ತಿನ ಸಂರಕ್ಷಣೆ ಬಗ್ಗೆ ಅಪಾರ ಕಾಳಜಿ ತೋರಿದ್ದರು. ಅವರು ಅಭಿನಯಿಸಿರುವ ಕೊನೆಯ ಚಿತ್ರ ಗಂದಧಗುಡಿ ಶುಕ್ರವಾರ ರಾಜ್ಯಾದ್ಯಂತ ಬಿಡುಗಡೆಯಾಗಲಿದೆ. ಇದರ ಸವಿನೆನಪಿನಲ್ಲಿ ಹಾಗೂ 70ರ ದಶಕದಲ್ಲಿ ಮಹಾರಾಷ್ಟ್ರದಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಅವರ ಚಿಂತನೆಗಳಿಂದ ಪ್ರೇರೇಪಿತರಾಗಿದ್ದ ಯುವ ಜನರು ದಲಿತ್ ಪ್ಯಾಂಥರ್ ಮೂವ್ಮೆಂಟ್(ಡಿಪಿಎಂ) ಪ್ರಾರಂಭಿಸಿ ದಲಿತರ ಮೇಲಿನ ದೌರ್ಜನ್ಯಗಳ ವಿರುದ್ಧ ಪ್ರತಿರೋಧ ತೋರಿ ಭಾರತದ ರಾಜಕೀಯದಲ್ಲಿ ಮಹತ್ವದ ಹೆಜ್ಜೆ ಗುರುತು ಮೂಡಿಸಿದ್ದರು. ಈ ಎರಡು ಪ್ರಮುಖ ಸ್ಮರಣಾರ್ಥವಾಗಿ ಮೈಸೂರು ಮೃಗಾಲಯದಲ್ಲಿ ಕಪ್ಪು ಚಿರತೆ ಪ್ರಾಣಿಯನ್ನು ನಂಜನಗೂಡು ವಿಧಾನಸಭಾ ಕ್ಷೇತ್ರದ ಜನರ ಹೆಸರಿನಲ್ಲಿ ದತ್ತು ಸ್ವೀಕರಿಸಲಾಗಿದೆ ಎಂದು ತಿಳಿಸಿದರು.
ಮೈಸೂರು ಮೃಗಾಲಯದಲ್ಲಿ ದೇಶ-ವಿದೇಶಗಳ ಹಲವು ಪ್ರಭೇದದ ಪ್ರಾಣಿ, ಪಕ್ಷಿಗಳಿವೆ. ಅವುಗಳನ್ನು ಮೈಸೂರು ಮೃಗಾಲಯದಲ್ಲಿ ಉತ್ತಮ ರೀತಿಯಲ್ಲಿ ನಿರ್ವಹಣೆ ಮಾಡಲಾಗುತ್ತಿದೆ. ವಿಶ್ವದ ಹಲವೆಡೆ ಮೃಗಾಲಯಗಳಿದ್ದರೂ, ಮೈಸೂರು ಮೃಗಾಲಯ ವಿಭಿನ್ನವಾಗಿದ್ದು ಪ್ರಾಣಿಪ್ರಿಯರ ಮೆಚ್ಚುಗೆಗೆ ಪಾತ್ರವಾಗಿದೆ ಎಂದು ಹೇಳಿದರು.