ಯಾದಗಿರಿ: ಕನ್ನಡ ನಾಡಿ ವಿವಿಧತೆಯಲ್ಲಿ ಏಕತೆ ಹೊಂದಿದ ವಿಭಿನ್ನ ಸಂಸ್ಕೃತಿ ಮತ್ತು ಸಂಪ್ರದಾಯ ಒಳಗೊಂಡ ನಾಡಾಗಿದೆ ಎಂದು ಶಾಸಕ ಚನ್ನಾರಡ್ಡಿ ಪಾಟೀಲ್ ತುನ್ನೂರ ತಿಳಿಸಿದರು.
ಇಲ್ಲಿನ ಪಂಪ ಮಹಾಕವಿ ಕಲ್ಯಾಣ ಮಂಟಪದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ಆಯೋಜಿಸಿದ್ದ ಸಾಂಸ್ಕೃತಿಕ ಸೌರಭ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿ, ಪಂಪ, ರನ್ನ, ಕುಮಾರವ್ಯಾಸ, ನೃಪತುಂಗನಂಥ ಕವಿಗಳನ್ನು ಕಂಡ ಶ್ರೇಷ್ಠ ನಾಡು ನಮ್ಮದು. ಶ್ರೀಕೃಷ್ಣ ದೇವರಾಯನ ಆಡಳಿತದಲ್ಲಿ ಅತ್ಯಂತ ಉತ್ತುಂಗದಲ್ಲಿದ್ದ ಕನ್ನಡ ಭಾಷೆಗೆ 2 ಸಾವಿರ ವರ್ಷಗಳ ಇತಿಹಾಸವಿದೆ. ಇಲ್ಲಿನ ಕಲೆ ಮತ್ತು ಸಾಹಿತ್ಯ ವಿಶ್ವಮನ್ನಣೆ ಪಡೆದಿದೆ ಎಂದು ಕೊಂಡಾಡಿದರು.
ಜಾನಪದ ಕಲೆಗಳ ಮೂಲಕ ಕನ್ನಡ ಭಾಷೆ ಅತ್ಯಂತ ಶ್ರೀಮಂತವಾಗಿದೆ. ಯುವ ಜನಾಂಗ ನಾಡಿನ ಸಾಹಿತ್ಯ, ಕಲೆ ಮತ್ತು ಪರಂಪರೆಯನ್ನು ಉಳಿಸಿ, ಬೆಳಸಿಕೊಂಡು ಹೋಗುವ ಅಗತ್ಯವಿದೆ ಎಂದು ಸಲಹೆ ನೀಡಿದರು.
ಉತ್ತರಾದೇವಿ ಮಠಪತಿ ಮಾತನಾಡಿ, ಸಾಮಾನ್ಯ ಯೋಜನೆಯಡಿ ಬರುವ ಕಲಾವಿದರಿಗೆ ಸಮೂಹ ನೃತ್ಯ, ಜಾನಪದ ಗೀತೆ, ಸುಗಮ ಸಂಗೀತ, ವಚನಗಾಯನ, ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತ, ತಮಟೆ ವಾದನ, ಡೊಳ್ಳು ಕುಣಿತ, ಪುರವಂತಿಕೆ ಸೇರಿ ವೈವಿಧ್ಯಮಯ ಕಲಾ ಪ್ರಕಾರದ ಕಲೆಗಳ ಪ್ರದರ್ಶನಕ್ಕೆ ವೇದಿಕೆಯನ್ನು ಕಲ್ಪಿಸಿ ಅವಕಾಶ ನೀಡುವುದು ಇಲಾಖೆ ಉದ್ದೇಶವಾಗಿದೆ ಎಂದರು.