ಚಿಕ್ಕಮಗಳೂರು: ಬೆಂಗಳೂರು ನಿರ್ವತೃ ಕೆಂಪೇಗೌಡರ ಗೌರವಾರ್ಥ ಮೃತ್ತಿಕೆ ಸಂಗ್ರಹಿಸುವ ಐತಿಹಾಸಿಕ ಅಭಿಯಾನಕ್ಕೆ ಜಿಲ್ಲೆಯ ಎಲ್ಲ ಜನರು ಪೂಜೆ ಸಲ್ಲಿಸಿ ಗೌರವ ಸಲ್ಲಿಸುವ ಮೂಲಕ ಕೈಜೋಡಿಸಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಬೈರತಿ ಬಸವರಾಜ್ ಹೇಳಿದರು.
ಜಿಲ್ಲಾ ಆಟದ ಮೈದಾನದಲ್ಲಿ ಶುಕ್ರವಾರ ಜಿಲ್ಲಾಡಳಿತ ಹಮ್ಮಿಕೊಂಡಿದ್ದ ಕೋಟಿ ಕಂಠ ಗಾಯನ ಮತ್ತು ಮೃತ್ತಿಕೆ ಸಂಗ್ರಹ ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿದರು.
ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ನ.11ರಂದು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕೆಂಪೇಗೌಡರ 108 ಅಡಿ ಕಂಚಿನ ಪ್ರತಿಮೆ ಲೋಕಾರ್ಪಣೆ ಮಾಡಲಿದ್ದಾರೆ. ಈ ಸಮೃದ್ಧಿಯ ಸಂಕೇತವಾಗಿ ರಾಜ್ಯಾದ್ಯಂತ ಪ್ರತಿ ಗ್ರಾಪಂನಿಂದ ಮೃತ್ತಿಕೆ ಸಂಗ್ರಹಿಸುವ ಅಭಿಯಾನಕ್ಕೆ ಜಿಲ್ಲೆಯಲ್ಲಿ ಚಾಲನೆ ನೀಡಿ ಮಣ್ಣಿಗೆ ಗೌರವ ನೀಡುವ ಕಾರ್ಯ ಮಾಡಲಾಗಿದೆ. ನನ್ನ ಕ್ಷೇತ್ರದಲ್ಲೂ ಕೋಟಿಕಂಠ ಗಾಯನ ಕಾರ್ಯಮವಿದ್ದರೂ ಚಿಕ್ಕಮಗಳೂರಿನ ಬಗ್ಗೆ ವಿಶೇಷ ಕಾಳಜಿ ವಹಿಸಿ ಎರಡೂ ಕಾರ್ಯಕ್ರಮಕ್ಕೆ ಕೈಜೋಡಿದ್ದೇನೆ ಎಂದರು.
ಶಾಸಕ ಸಿ.ಟಿ.ರವಿ ಮಾತನಾಡಿ, ಕೋಟಿಕಂಠ ಗಾಯನ ಕನ್ನಡಿಗರನ್ನು ಭಾರತೀಯತೆಗೆ ಜೋಡಿಸಿದೆ. ಸ್ವಾತಂತ್ರ್ಯ ಅಮೃತ ಮಹೋತ್ಸವದ ಸಂದರ್ಭ ರಾಜ್ಯ ಸರ್ಕಾರ ತಾಯಿ ಭಾರತಿಗೆ ಅಮೃತದಾರತಿ ಎಂದು ಆಯೋಜಿಸಿದ್ದರೆ ಕನ್ನಡಿಗರೆಲ್ಲರನ್ನು ಒಗ್ಗೂಡಿಸಿ ಕನ್ನಡದ ಜನಪ್ರೀಯ ಗೀತೆಗಳನ್ನು ಹಾಡಿಸಿ ಕೋಟಿ ಕಂಠಗಳನ್ನು ಜೋಡಿಸುವುದು ಸಾಮಾನ್ಯ ಸಂಗತಿಯಲ್ಲ. ಕೋಟಿ ಕಂಠಗಳ ಮೂಲಕ ಕನ್ನಡ ಕಟ್ಟುವ ಕೆಲಸ ಮಾಡಲಾಗಿದೆ ಎಂದು ಹೇಳಿದರು.