ಬೈಲಹೊಂಗಲ, ಬೆಳಗಾವಿ: ಕನೇರಿ ಮಠವು ಗೋ ಸಂರಕ್ಷಣೆ ಜತೆ ಜನ-ಜಾನುವಾರುಗಳಿಗೆ ಉಚಿತವಾಗಿ ಔಷಧಿ ವಿತರಿಸುವ ಸಮಾಜಮುಖಿ ಕಾರ್ಯ ಮಾಡುತ್ತಿದೆ ಎಂದು ಇಂಚಲ ಸಾಧು ಸಂಸ್ಥಾನ ಮಠದ ಡಾ. ಶಿವಾನಂದ ಭಾರತಿ ಸ್ವಾಮೀಜಿ ಹೇಳಿದರು.
ಸಮೀಪದ ಇಂಚಲ ಗ್ರಾಮದಲ್ಲಿ ಕನೇರಿ ಮಠದಿಂದ ಉಚಿತ ರೋಗ ನಿರೋಧಕ ಔಷಧಿಯನ್ನು ಹುಬ್ಬಳ್ಳಿ ವರದಶ್ರೀ ಫೌಂಡೇಷನ್, ಇಂಚಲ ಗ್ರಾಮದ ಅಪ್ಪಾಜಿ ಸ್ವಸಹಾಯ ಸಂಘ ಹಾಗೂ ಗ್ರಾಮೀಣ ಅಭಿವೃದ್ಧಿ ಸೇವಾ ಸಂಸ್ಥೆ ಸಹಯೋಗದಲ್ಲಿ ರೈತರಿಗೆ ಉಚಿತ ಲಸಿಕೆ ವಿತರಿಸಿ ಅವರು ಮಾತನಾಡಿದರು. ರೈತರು ಲಸಿಕೆ ಸದುಪಯೋಗ ಪಡೆದುಕೊಳ್ಳುವ ಮೂಲಕ ಜಾನುವಾರುಗಳನ್ನು ಚರ್ಮಗಂಟು ರೋಗದಿಂದ ಕಾಪಾಡಿಕೊಳ್ಳಬೇಕು. ಜತೆಗೆ ವೈದ್ಯರ ಸಲಹೆಯಂತೆ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಬೇಕು ಎಂದರು.
ಪೂರ್ಣಾನಂದ ಸ್ವಾಮೀಜಿ, ಶಿವಾನಂದ ಭಾರತಿ ಶಿಕ್ಷಣ ಸಂಸ್ಥೆಯ ಚೇರ್ಮನ್ ಡಿ.ಬಿ. ಮಲ್ಲೂರ ಮಾತನಾಡಿ, ವರದಶ್ರೀ ಫೌಂಡೇಷನ್ ಇಂಚಲ ಗ್ರಾಮದ ಅಪ್ಪಾಜಿ ಸ್ವಸಹಾಯ ಸಂಘ, ಗ್ರಾಮೀಣಾಭಿವೃದ್ಧಿ ಸೇವಾ ಸಂಸ್ಥೆಯವರು ಗ್ರಾಮಕ್ಕೆ ಲಸಿಕೆ ವಿತರಿಸಿರುವ ಕಾರ್ಯ ಶ್ಲಾಘನೀಯ. ಸುತ್ತಮುತ್ತಲಿನ ರೈತರಿಗೆ ಉಚಿತವಾಗಿ ಲಸಿಕೆ ವಿತರಿಸಿದ್ದು ಜಾನುವಾರ ರಕ್ಷಣೆ ಕೆಲಸ ಇದಾಗಿದೆ ಎಂದರು.
ವರದಶ್ರೀ ಫೌಂಡೇಷನ್ ಸಂಸ್ಥಾಪಕ ಮಲ್ಲಿಕಾರ್ಜುನ ರಡ್ಡೇರ ಮಾತನಾಡಿ, ಕನೇರಿ ಮಠದ ಅದೃಶ ಕಾಡಸಿದ್ಧೇಶ್ವರ ಸ್ವಾಮೀಜಿ ಅವರು ಕೋವಿಡ್ ಸಂದರ್ಭದಲ್ಲಿ ಒಂದೂವರೆ ಕೋಟಿ ಜನರಿಗೆ ರೋಗ ನಿರೋಧಕ ಲಸಿಕೆ ಹಂಚಿದ್ದು ಇತಿಹಾಸ. ದೇಶಿಯ 23 ತಳಿಯನ್ನು ಸಾಕುತ್ತಾ ಜಾನುವಾರುಗಳನ್ನು ಅತ್ಯಂತ ಪ್ರೀತಿಯಿಂದ ಗೋ ಸಂರಕ್ಷಣೆ ಮಾಡುತ್ತಿರುವುದು ಮಾದರಿಯ ಕೆಲಸ ಎಂದರು. ಶಿವಾನಂದ ಭಾರತಿ ಶಿಕ್ಷಣ ಸಂಸ್ಥೆಯ ಮಾಜಿ ಚೇರ್ಮನ್ ಎಸ್. ಎಂ. ರಾಹುತನ್ನವರ, ಚಂದ್ರನಾಯ್ಕ ರಾಯನಾಯ್ಕರ, ಫೌಂಡೇಷನನ ಅಮರೇಗೌಡ ಬೂನಾವಾರ, ಸಿದ್ದು ಶಿರಸಂಗಿ ಇತರರು ಇದ್ದರು.