ಆನಂದಪುರ: ಕಡ್ಲೆಹಂಕ್ಲು ಶ್ರೀ ಮಾರಿಕಾಂಬಾ ಜಾತ್ರೆಗೆ ಸುತ್ತಮುತ್ತಲ ಗ್ರಾಮಗಳಿಂದ ಅತ್ಯಧಿಕ ಭಕ್ತರು ಆಗಮಿಸಿದ್ದ ಕಾರಣ ಜನ ಜಂಗುಳಿ ಉಂಟಾಗಿತ್ತು. ದೇವಿಯ ಗದ್ದುಗೆ ಎದುರು ನಿರ್ಮಿಸಿದ್ದ ಭವ್ಯ ವೇದಿಕೆಯಲ್ಲಿ ಸಾಂಸ್ಕೃತಿಕ ಸೌರಭ ನಿಮಿತ್ತ ವೈವಿಧ್ಯಮಯ ಕಲಾ ಪ್ರದರ್ಶನ ವೀಕ್ಷಣೆಗೆ ಜನರು ಅಧಿಕ ಸಂಖ್ಯೆಯಲ್ಲಿ ಸೇರಿದ್ದರು. ಶ್ರೀಧರಿ ಭಜನಾ ಮಂಡಳಿಯಿಂದ ಭಜನೆ, ಸಾಗರದ ಶ್ರೀ ಮಲೆಮಹದೇಶ್ವರ ಜಾನಪದ ಕಲಾ ತಂಡದಿಂದ ಕಂಸಾಳೆ ನೃತ್ಯ, ಸಾಗರದ ನಾಟ್ಯ ತರಂಗ ಸಂಸ್ಥೆಯಿಂದ ಭರತನಾಟ್ಯ, ಗದಗದ ಅರುಣೋದಯ ಕಲಾ ತಂಡದಿಂದ ಜೋಗತಿ ನೃತ್ಯ ಪ್ರದರ್ಶನ ಭಕ್ತರ ಮನಸೂರೆಗೊಂಡಿತು.