ಸಿದ್ದಾಪುರ: ಸೋಶಿಯಲ್ ಮಿಡಿಯಾ, ದೂರದರ್ಶನಗಳಿಂದ ಇಂದು ಪತ್ರಿಕೆ ಓದುಗರ ಸಂಖ್ಯೆ ಕಡಿಮೆ ಆಗುತ್ತಿದೆ. ಜನರಿಗೆ ಓದುವ ಕುರಿತು ಆಸಕ್ತಿ ಇಲ್ಲದಂತಾಗಿದೆ ಎಂದು ಪತ್ರಕರ್ತ ಕೃಷ್ಣಪ್ರಸಾದ ಮೈಸೂರು ಹೇಳಿದರು.
ಪಟ್ಟಣದ ಶಂಕರಮಠದಲ್ಲಿ ಸಂಸ್ಕೃತಿ ಸಂಪದ ತಾಲೂಕು ಪತ್ರಕರ್ತರ ಸಹಕಾರದೊಂದಿಗೆ ಭಾನುವಾರ ಆಯೋಜಿಸಿದ್ದ ದೊಡ್ಮನೆ ಗಣೇಶ ಹೆಗಡೆ ಸ್ಮೃತಿ ಪುರಸ್ಕಾರವನ್ನು ಕರಾವಳಿ ಮುಂಜಾವು ಪತ್ರಿಕೆ ಸಂಪಾದಕ ಗಂಗಾಧರ ಹಿರೇಗುತ್ತಿ ಅವರಿಗೆ ನೀಡಿ ಅವರು ಮಾತನಾಡಿದರು. ಪತ್ರಿಕೆಯಲ್ಲಿ ಬರುವಂತಹ ಲೇಖನ, ಸಂಪಾದಕೀಯ ಜನರನ್ನು ಸ್ಪಂದಿಸುತ್ತಿಲ್ಲ. ರಾಜ್ಯದಲ್ಲಿ ನಡೆಯುತ್ತಿರುವಂತಹ ಭ್ರಷ್ಟಾಚಾರ, ಅಕ್ರಮ ಗಣಿಗಾರಿಕೆ, ರಾಜ್ಯ ರಾಜಕಾರಣದ ಮತ್ತಿತರ ವಿಷಯಗಳ ಕುರಿತು ಸಮಗ್ರ ವರದಿ ಮಾಡಬೇಕಾಗಿದೆ. ಎಲ್ಲರೂ ಮೊಬೈಲ್ ಫೋನ್ ಬಳಕೆದಾರರಾಗಿದ್ದಾರೆ. ಪತ್ರಿಕೆಯವರು ಪ್ರಸಾರ ಸಂಖ್ಯೆ ಹೆಚ್ಚಿಸಕೊಳ್ಳುವುದಕ್ಕೆ ಹಾಗೂ ದೂರದರ್ಶನದವರು ಟಿಆರ್ಪಿ ಹೆಚ್ಚಿಸಿಕೊಳ್ಳುವುದಕ್ಕೆ ಮಾತ್ರ ಆಧ್ಯತೆ ನೀಡುವಂತೆ ಕಂಡುಬರುತ್ತಿದೆ ಎಂದು ಹೇಳಿದರು.
ಪತ್ರಕರ್ತ ರವಿ ಹೆಗಡೆ ಮಾತನಾಡಿ, ಇಂದು ಪತ್ರಿಕಾ ರಂಗ ಆರ್ಥಿಕ ಸಂಕಷ್ಟ ಎದುರಿಸುವ ಸ್ಥಿತಿ ಉಂಟಾಗಿದೆ. ಆದರೆ, ತಾಂತ್ರಿಕವಾಗಿ ಸಾಕಷ್ಟು ಸುಧಾರಣೆ ಆಗಿದೆ. ಪತ್ರಿಕಾ ಕ್ಷೇತ್ರದಲ್ಲಿಯೂ ಎಡ ಹಾಗೂ ಬಲಪಂಕ್ತಿ ಕಾಣುವಂತಾಗಿದೆ. ದೊಡ್ಮನೆ ಗಣೇಶ ಹೆಗಡೆ ಅವರು ಸಮಾಜದ ವಿವಿಧ ರಂಗದಲ್ಲಿ ತಮ್ಮನ್ನು ತೊಡಗಿಸಿಕೊಂಡು ಎಲ್ಲರಿಗೂ ಮಾದರಿ ಆಗಿದ್ದರು ಎಂದು ಹೇಳಿದರು.
ಪುರಸ್ಕಾರ ಸ್ವೀಕರಿಸಿ ಮಾತನಾಡಿದ ಪತ್ರಕರ್ತ ಗಂಗಾಧರ ಹಿರೇಗುತ್ತಿ, ಪತ್ರಿಕಾ ರಂಗದಲ್ಲಿನ ತಮ್ಮ ಅನುಭವ, ನೋವು-ನಲಿವುಗಳನ್ನು ಹಂಚಿಕೊಂಡರು. ಪುರಸ್ಕಾರ ಸಮಿತಿ ಅಧ್ಯಕ್ಷ ಎಂ.ಕೆ.ಭಾಸ್ಕರ ರಾವ್ ಬೆಂಗಳೂರು, ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ರಾಧಾಕೃಷ್ಣ ಭಟ್ಟ ಭಟ್ಕಳ ಮಾತನಾಡಿದರು.
ಶಂಕರಮಠದ ಧರ್ಮಾಧಿಕಾರಿ ವಿಜಯ ಹೆಗಡೆ ದೊಡ್ಮನೆ ದಂಪತಿ, ಡಾ.ಶಶಿಭೂಷಣ ಹೆಗಡೆ ದೊಡ್ಮನೆ, ಗಣೇಶ ಭಟ್ಟ ಹೊಸೂರು, ಗಂಗಾಧರ ಕೊಳಗಿ ಇತರರು ಇದ್ದರು. ರಮೇಶ ಹಾರ್ಸಿಮನೆ, ಕಾಶ್ಯಪ ಪರ್ಣಕುಟಿ, ನಾಗರಾಜ ಭಟ್ಟ ಕೆಕ್ಕಾರ ಕಾರ್ಯಕ್ರಮ ನಿರ್ವಹಿಸಿದರು. ವೇ.ಉಮೇಶ ಭಟ್ಟ ವೇದಘೊಷ ಮಾಡಿದರು.