ಹಾವೇರಿ: ಕರೊನಾ ಸೋಂಕು ಹರಡದಂತೆ ತಡೆಯಲು ಸರ್ಕಾರ ಘೋಷಿಸಿದ್ದ ಲಾಕ್ಡೌನ್ 3.0 ಅನ್ವಯ ಮೇ 4ರಿಂದ ಜಿಲ್ಲೆಯೊಳಗೆ ಆರಂಭಗೊಂಡಿದ್ದ ಬಸ್ ಸಂಚಾರ, ಲಾಕ್ಡೌನ್ 4.0ರ ಅನ್ವಯ ಮಂಗಳವಾರದಿಂದ ಅಂತರ್ ಜಿಲ್ಲೆಗಳಿಗೂ ಸಂಚಾರ ವಿಸ್ತರಣೆಗೊಂಡಿತು.
ಕರೊನಾ ಸೋಂಕು ನಿಯಂತ್ರಣಕ್ಕಾಗಿ ಮಾರ್ಚ್ 22ರಿಂದಲೇ ಸಂಪೂರ್ಣವಾಗಿ ಡಿಪೊ ಸೇರಿದ್ದ ಸಾರಿಗೆ ಸಂಸ್ಥೆಯ ಬಸ್ಗಳು ಮೇ 4ರಿಂದ ಅಲ್ಪ ಪ್ರಮಾಣದಲ್ಲಿ ಅಂದರೆ 78 ಬಸ್ಗಳು ರಸ್ತೆಗಿಳಿದಿದ್ದವು. ಮಂಗಳವಾರದಿಂದ ಅಂತರ್ ಜಿಲ್ಲೆಗಳ ಸಂಚಾರಕ್ಕೆ ಅನುಮತಿ ದೊರೆತಿದ್ದರಿಂದ ಜಿಲ್ಲೆಯಿಂದ ಬೆಂಗಳೂರು, ದಾವಣಗೆರೆ, ಮೈಸೂರ, ಹುಬ್ಬಳ್ಳಿ, ಗದಗ, ಕಲಬುರಗಿ, ದಕ್ಷಿಣಕನ್ನಡ, ಬಳ್ಳಾರಿ ಜಿಲ್ಲೆಗಳಿಗೆ ಬಸ್ಗಳು ಸಂಚಾರ ನಡೆಸಿದವು. ಅದೇ ರೀತಿ ಬೇರೆ ಜಿಲ್ಲೆಗಳಿಂದಲೂ ಜಿಲ್ಲೆಯ ವಿವಿಧ ತಾಲೂಕು ಕೇಂದ್ರಗಳಿಗೆ ಬಸ್ ಬಂದಿವೆ.
ರಸ್ತೆಗಿಳಿದ 211 ಬಸ್: ಮಂಗಳವಾರ ಒಟ್ಟು 211 ಬಸ್ಗಳು ಜಿಲ್ಲೆಯಲ್ಲಿ ಆರಂಭಗೊಂಡವು. ಸ್ಥಳೀಯವಾಗಿ 70 ಹಾಗೂ ಹೊರ ಜಿಲ್ಲೆಗಳಿಗೆ 140 ಎಕ್ಸ್ಪ್ರೆಸ್ ಬಸ್ಗಳು ಸಂಚರಿಸಿದವು. ಬೆಳಗ್ಗೆ 10 ಗಂಟೆಯೊಳಗೆ ಮಾತ್ರ ಬೆಂಗಳೂರು, ಕಲಬುರಗಿ ಹಾಗೂ ದೂರದ ಮಾರ್ಗಕ್ಕೆ ಬಸ್ ಬಿಡಲಾಯಿತು. 7 ಗಂಟೆ ಬಳಿಕ ಸಂಚಾರಕ್ಕೆ ನಿರ್ಬಂಧವಿರುವುದರಿಂದ ನಿಗದಿತ ಅವಧಿ ಮೀರದಂತೆ ಲೆಕ್ಕಾಚಾರ ಮಾಡಿ ಬಸ್ ಬಿಡಲಾಯಿತು. ಹಾನಗಲ್ಲ, ಹಿರೇಕೆರೂರ ತಾಲೂಕಿನಲ್ಲಿ ಬಸ್ ಸಂಚಾರಕ್ಕೆ ಪ್ರಯಾಣಿಕರಿಂದ ನೀರಸ ಪ್ರತಿಕ್ರಿಯೆ ವ್ಯಕ್ತವಾಗಿದೆ. ಈ ತಾಲೂಕುಗಳಿಂದ ಹುಬ್ಬಳ್ಳಿ, ಗದಗ, ದಾವಣಗೆರೆ ಕಡೆ ಹೋಗುವ ಬಸ್ಗಳಿಗೆ ಜನ ಹತ್ತಲೇ ಇಲ್ಲ. ಆದರೆ, ಇನ್ನುಳಿದ ತಾಲೂಕುಗಳಲ್ಲಿ ಪ್ರತಿ ಬಸ್ನಲ್ಲಿ ಪರಸ್ಪರ ಅಂತರ ಕಾಯ್ದುಕೊಂಡು ಪ್ರಯಾಣಿಕರನ್ನು ಹತ್ತಿಸಿಕೊಂಡು ಬಸ್ ಓಡಾಡಿದವು.
ಎಲ್ಲ ಮಾರ್ಗಗಳಿಗೆ ಬಸ್ ಬಿಡಲು ಸಂಸ್ಥೆ ಸಿದ್ಧತೆ ಮಾಡಿಕೊಂಡಿದೆ. ಆದರೆ, ಕೆಲವು ಮಾರ್ಗಗಳಿಗೆ ಪ್ರಯಾಣಿಕರಿಲ್ಲದ್ದರಿಂದ ಬಸ್ ಓಡಿಸಿಲ್ಲ. ಇದರಿಂದ ಬಸ್ ನಿಲ್ದಾಣಗಳಲ್ಲಿ ಖಾಲಿ ಬಸ್ಗಳು ನಿಂತಿದ್ದವು. ಪ್ರಯಾಣಿಕರ ಸಂಖ್ಯೆಗಿಂತ ಚಾಲಕರು ಮತ್ತು ನಿರ್ವಾಹಕರೇ ಹೆಚ್ಚಿನ ಸಂಖ್ಯೆಯಲ್ಲಿ ಕಂಡುಬಂದರು. ಮಾಸ್ಕ್ ಧರಿಸದೆ ನಿಲ್ದಾಣ ಪ್ರವೇಶಕ್ಕೆ ಪೊಲೀಸರು ಅವಕಾಶ ನೀಡಲಿಲ್ಲ. ಪ್ರಯಾಣಿಕರನ್ನು ಸ್ಕ್ರೀನಿಂಗ್ ಮಾಡಿ ಒಳಬಿಡಲಾಯಿತು. ಆದರೆ, ನಿಲ್ದಾಣಗಳಲ್ಲಿ ಸ್ಯಾನಿಟೈಸರ್ ವ್ಯವಸ್ಥೆ ಇರಲಿಲ್ಲ.
ಆಟೋ ಸಂಚಾರ ಆರಂಭ: ಕಳೆದ 55 ದಿನಗಳಿಂದ ನಿಂತಲ್ಲಿಯೇ ನಿಂತಿದ್ದ ಆಟೋ ರಿಕ್ಷಾಗಳು ಮಂಗಳವಾರ ರಸ್ತೆಗಳಿದವು. ಆಟೋ ಚಾಲಕರು ನಿಲ್ದಾಣಗಳಿಗೆ ತೆರಳಿ ಮತ್ತೆ ಕಾಯಕ ಆರಂಭಿಸಿದರು. ಆದರೆ, ಹೊರ ಜಿಲ್ಲೆಗಳಿಂದ ಬರುವವರ ಸಂಖ್ಯೆ ಕಡಿಮೆಯಿದ್ದುದರಿಂದ ಆಟೋ ರಿಕ್ಷಾ ಸಂಚಾರ ಕಡಿಮೆಯಿತ್ತು. ಬಹುತೇಕ ಹೋಟೆಲ್ಗಳು ಪಾರ್ಸಲ್ ಸೇವೆ ಆರಂಭಿಸಿದ್ದು, ಸಾರ್ವಜನಿಕರಿಗೆ ಅನುಕೂಲವಾದಂತಾಗಿದೆ. ಜಿಲ್ಲಾಡಳಿತ ಪ್ರತ್ಯೇಕವಾದ ಆದೇಶ ಹೊರಡಿಸದ್ದರಿಂದ ಸಲೂನ್ ಹೊರತುಪಡಿಸಿ ಎಲ್ಲ ರೀತಿಯ ಅಂಗಡಿಗಳು, ಪಾನ್ಶಾಪ್ ಮಂಗಳವಾರದಿಂದ ಆರಂಭಗೊಂಡವು. ಬಟ್ಟೆ, ರೆಡಿಮೇಡ್ ಗಾರ್ವೆಂಟ್ಸ್, ಜ್ಯುವೆಲರಿ ಶಾಪ್ಗಳಲ್ಲಿ ಗ್ರಾಹಕರ ಸಂಖ್ಯೆ ವಿರಳವಾಗಿತ್ತು.