ಯಲ್ಲಾಪುರ: ಖಾಸಗಿ ಬಸ್ನಲ್ಲಿ ಅಕ್ರಮವಾಗಿ ಸಾಗಿಸುತ್ತಿದ್ದ 50 ಲಕ್ಷ ರೂಪಾಯಿ ನಗದನ್ನು ಯಲ್ಲಾಪುರ ಪೊಲೀಸರು ಜೋಡುಕೆರೆ ಬಳಿ ಮಂಗಳವಾರ ರಾತ್ರಿ ವಶಕ್ಕೆ ಪಡೆದು, ಐವರನ್ನು ಬಂಧಿಸಿದ್ದಾರೆ.
ಗುಜರಾತಿನ ಮೆಹಶಾನ್ ಜಿಲ್ಲೆಯ ಹೂಂಜಾ ತಾಲೂಕಿನ ಅಮೂದ ಪ್ರದೇಶದ ದಿನೇಶ್ ದೀಪಕ್ ಪ್ರಭಾತ್ಜಿ ಠಾಕೂರ್, ಪಂಕಜಕುಮಾರ ಅಲಿಯಾಸ್ ಪ್ರಕಾಶ್ ರಾಮಾಭಾಯಿ ಪಟೇಲ್, ಗೋವಿಂದ ಭಾಯಿ ನಾಥುದಾಸ ಪಟೇಲ್, ಮುಖೇಶ ಭಾಯಿ ಚಥುರ ಭಾಯಿ ಪಟೇಲ್ ಹಾಗೂ ಉಪೇಂದ್ರ ನಾರಾಯಣ ಭಾಯಿ ಪಟೇಲ್ ಬಂಧಿತರು. ಬಂಧಿತರಿಂದ 50 ಲಕ್ಷ ರೂಪಾಯಿ ಹಾಗೂ 23 ಸಾವಿರ ರೂ. ಮೌಲ್ಯದ 6 ಮೊಬೈಲ್ ಫೋನ್ಗಳನ್ನು ವಶಪಡಿಸಿಕೊಳ್ಳಲಾಗಿದೆ.
ಹಣವನ್ನು ಬೆಳಗಾವಿಯಿಂದ ಮಂಗಳೂರಿಗೆ ಸಾಗಿಸಲಾಗುತ್ತಿತ್ತು. ಟೂರಿಸ್ಟ್ ಬಸ್ನಲ್ಲಿ ಸಾಗಿಸುತ್ತಿರುವ ಕುರಿತು ಖಚಿತ ಮಾಹಿತಿ ಪಡೆದ ಯಲ್ಲಾಪುರ ಪೊಲೀಸರು ಜೋಡುಕೆರೆ ಬಳಿ ಬಸ್ ತಪಾಸಣೆ ನಡೆಸಿ, ಹಣ ವಶಪಡಿಸಿಕೊಂಡಿದ್ದಾರೆ. ಈ ಕುರಿತು ಆದಾಯ ತೆರಿಗೆ ಇಲಾಖೆಗೆ ಮಾಹಿತಿ ನೀಡಲಾಗಿದೆ.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶಿವಪ್ರಸಾದ ದೇವರಾಜು ಹಾಗೂ ಶಿರಸಿ ಡಿಎಸ್ಪಿ ರವಿ ನಾಯ್ಕ ಮಾರ್ಗದರ್ಶನದಲ್ಲಿ ಪಿಐ ಸುರೇಶ ಯಳ್ಳೂರು, ಪಿಎಸ್ಐ ಮಂಜುನಾಥ ಗೌಡರ್, ಸಿಬ್ಬಂದಿ ದೀಪಕ್ ನಾಯ್ಕ, ಗಜಾನನ ನಾಯ್ಕ, ನಾಗಪ್ಪ ಲಮಾಣಿ, ಮಹಮ್ಮದ ಶಫಿ, ಕೃಷ್ಣ ಮಾತ್ರೋಜಿ, ಗಿರೀಶ ಲಮಾಣಿ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.