ಕಾರವಾರ: ಇಡೀ ರಾಜ್ಯದ ಎಲ್ಲ ಸ್ವರೂಪದ ಭೌಗೋಳಿಕ ಹಾಗೂ ಸಾಂಸ್ಕೃತಿಕ ವೈವಿಧ್ಯವನ್ನು ಹೊಂದಿರುವ ಏಕೈಕ ಜಿಲ್ಲೆ ಉತ್ತರ ಕನ್ನಡ. ಈ ಹಿಂದೆ ಏಕೀಕರಣ ಸಂದರ್ಭದಲ್ಲಿ ಜಿಲ್ಲೆಯ ಕೊಡುಗೆಯನ್ನು ಮರೆಯಲಾಗದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಶಿವರಾಮ ಹೆಬ್ಬಾರ ಬಣ್ಣಿಸಿದರು.
ಜಿಲ್ಲಾಡಳಿತದಿಂದ ಇಲ್ಲಿನ ಪೊಲೀಸ್ ಪರೇಡ್ ಮೈದಾನದಲ್ಲಿ ಭಾನುವಾರ ಸರಳವಾಗಿ ಆಯೋಜಿಸಿದ್ದ 65 ನೇ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ರಾಷ್ಟ್ರ ಧ್ವಜಾರೋಹಣ ನೆರವೇರಿಸಿ ಅವರು ಮಾತನಾಡಿದರು.
ಮಲೆನಾಡು, ಕರಾವಳಿ ಹಾಗೂ ಬಯಲು ಸೀಮೆಯ ಭೌಗೋಳಿಕ ಸ್ವರೂಪ ಹಾಗೂ ಸಂಸ್ಕೃತಿಯನ್ನು ಹೊಂದಿರುವ ಜಿಲ್ಲೆ ನಮ್ಮದು. ಇಲ್ಲಿನ ಜನ ಸಮುದಾಯಗಳ ಸಂಪ್ರದಾಯ, ಜಾನಪದ ಕಲೆ, ಸಾಹಿತ್ಯ ಸಮೃದ್ಧವಾಗಿದೆ. ವಿಶೇಷವಾಗಿ ಸಿದ್ದಿ, ಟಿಬೆಟಿಯನ್, ಗೊಂಡ, ಹಾಲಕ್ಕಿ, ಗೌಳಿ ಹೀಗೆ ವಿವಿಧ ಸಮುದಾಯಗಳ ಜಾನಪದ ಕಲೆಗಳನ್ನು ಪೋಷಿಸಲಾಗಿದೆ ಎಂದು ಹೇಳಿದರು.
ಡಿಎಆರ್, ನಾಗರಿಕ ಪೊಲೀಸ್ ತುಕಡಿ, ಗೃಹರಕ್ಷಕ, ಅರಣ್ಯ ಇಲಾಖೆ ತುಕಡಿಗಳು ಆಕರ್ಷಕ ಪಥಸಂಚಲನ ನಡೆಸಿದವು. ಉಸ್ತುವಾರಿ ಸಚಿವರು ತೆರೆದ ಜೀಪ್ನಲ್ಲಿ ತೆರಳಿ ತುಕಡಿಗಳಿಂದ ಗೌರವ ವಂದನೆ ಸ್ವೀಕರಿಸಿದರು. ಶಾಸಕಿ ರೂಪಾಲಿ ನಾಯ್ಕ, ತಾಪಂ ಅಧ್ಯಕ್ಷೆ ಪ್ರಮಿಳಾ ನಾಯ್ಕ, ಜಿಲ್ಲಾಧಿಕಾರಿ ಡಾ.ಹರೀಶ ಕುಮಾರ ಕೆ., ಜಿಪಂ ಸಿಇಒ ಎಂ.ರೋಶನ್, ಎಸ್ಪಿ ಶಿವಪ್ರಕಾಶ ದೇವರಾಜು, ಎಸಿ ಪ್ರಿಯಾಂಗಾ ಎಂ. ವೇದಿಕೆಯಲ್ಲಿದ್ದರು.