More

    ಎಸ್‌ಡಿಪಿಐಗೆ ರಾಜಕೀಯ ಯಶಸ್ಸು ಖಚಿತ -ಶೃಂಗಸಭೆಯಲ್ಲಿ ಆಲ್ಫೊನ್ಸೊ ಫ್ರಾಂಕೊ ಹೇಳಿಕೆ

    ದಾವಣಗೆರೆ: ಮುಂಬರುವ ದಿನಗಳಲ್ಲಿ ಎಸ್‌ಡಿಪಿಐಗೆ ರಾಜಕೀಯ ಯಶಸ್ಸು ಖಚಿತ ಎಂದು ಪಕ್ಷದ ರಾಷ್ಟ್ರೀಯ ಕಾರ್ಯದರ್ಶಿ ಆಲ್ಫೊನ್ಸೊ ಫ್ರಾಂಕೊ ಹೇಳಿದರು.
    ನಗರದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ಜಿಲ್ಲಾ ನಾಯಕರ ಶೃಂಗ ಸಭೆಯಲ್ಲಿ ಮಾತನಾಡಿದರು.
    ಪಕ್ಷವು 14 ವರ್ಷದ ರಾಜಕೀಯದಲ್ಲಿ ವಿಧಾನಸಭೆಗೆ ಪ್ರವೇಶಿಸಲು ಆಗದಿದ್ದರೂ ಕೂಡ ಜನಪ್ರತಿನಿಧಿಗಳಿಗೆ ಎಚ್ಚರಿಕೆಯ ಕರೆಗಂಟೆ ನೀಡಲು ಸಾಧ್ಯವಾಗಿದೆ. ಅಲ್ಲದೆ, ಜನಸಾಮಾನ್ಯರಲ್ಲಿ ರಾಜಕೀಯ ಪ್ರಜ್ಞೆ ಹಾಗೂ ಜಾಗೃತಿ ಮೂಡಿಸುವುದರಲ್ಲಿ ಯಶಸ್ವಿಯಾಗಿದೆ ಎಂದು ತಿಳಿಸಿದರು.
    ಪಕ್ಷದ ನಾಯಕರು ಹಾಗೂ ಕಾರ್ಯಕರ್ತರು ಪಕ್ಷದ ಸಿದ್ಧಾಂತವನ್ನು ಜಾತಿ, ಮತ, ವರ್ಣ ಭೇದಗಳಿಲ್ಲದೆ ಎಲ್ಲರಿಗೂ ತಲುಪಿಸುವ ಮೂಲಕ ಒಂದು ನೈಜ ಪರ್ಯಾಯ ರಾಜಕೀಯಕ್ಕೆ ಶ್ರಮ ವಹಿಸಬೇಕು ಎಂದರು.
    ಮೂರು ತಿಂಗಳಿಂದ ಮಣಿಪುರ ಹೊತ್ತಿ ಉರಿಯುತ್ತಿದ್ದರೂ ಅಲ್ಲಿ ಶಾಂತಿ ಮರಳುವಂತೆ ಮಾಡುವ ನಿಟ್ಟಿನಲ್ಲಿ ಮೋದಿ ಸರ್ಕಾರ ಪ್ರಯತ್ನ ಮಾಡಲಿಲ್ಲ. ಅಲ್ಲಿನ ಜನರಿಗೆ ಶಾಂತಿ ಕಾಪಾಡಿ ಎಂದು ಹೇಳುವ ತಮ್ಮ ಕನಿಷ್ಠ ಕರ್ತವ್ಯವನ್ನೂ ಪಾಲಿಸಲಿಲ್ಲ ಎಂದು ಆರೋಪಿಸಿದರು.
    ರಾಜ್ಯ ಪ್ರಧಾನ ಕಾರ್ಯದರ್ಶಿ ಅಫ್ಸರ್ ಕೊಡ್ಲಿಪೇಟೆ ಮಾತನಾಡಿ, ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರಲು ಅದು ಪಡೆದ ಒಟ್ಟು ಮತದಲ್ಲಿ ಶೇ.60ರಷ್ಟು ಮತ ನೀಡಿದ ಮುಸ್ಲಿಮರು, ಕ್ರೈಸ್ತರು, ಪರಿಶಿಷ್ಟ ಜಾತಿ ಮತ್ತು ಪಂಗಡದ ಮತದಾರರೇ ಕಾರಣ. ಈ ಸಮುದಾಯಗಳಿಗೆ ಮಾರಕವಾಗಿರುವ ಏಕರೂಪ ನಾಗರೀಕ ಸಂಹಿತೆ ವಿರುದ್ಧ ನಿರ್ಣಯ ಮಂಡಿಸಿ ಅಂಗೀಕರಿಸಲು ಕಾಂಗ್ರೆಸ್ ಸರ್ಕಾರವನ್ನು ಆಗ್ರಹಿಸಿದರು.
    ನಂತರ ಜಿಲ್ಲಾ ನಾಯಕರೊಂದಿಗೆ ರಾಜಕೀಯ ಸಂವಾದ, ಜಿಲ್ಲೆಯಲ್ಲಿ ಮುಂದೆ ನಡೆಸಬಹುದಾದ ರಾಜಕೀಯ ನಡೆಯ ಬಗ್ಗೆ ಚರ್ಚೆ ನಡೆಸಲಾಯಿತು.
    ಪಕ್ಷದ ಜಿಲ್ಲಾಧ್ಯಕ್ಷ ಇಸ್ಮಾಯಿಲ್ ಜಬಿಉಲ್ಲಾ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸೈಯದ್ ಅಶ್ಫಾಕ್, ಕೋಶಾಧಿಕಾರಿ ತಾಹಿರ್ ಇತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts