ಲಕ್ಷ್ಮೇಶ್ವರ: ಆಶ್ರಯ ಯೋಜನೆಗೆ ಸಂಬಂಧಿಸಿದಂತೆ ಫಲಾನುಭವಿಯೊಬ್ಬರಿಂದ ಶುಕ್ರವಾರ 5 ಸಾವಿರ ರೂ. ಲಂಚ ಪಡೆಯುತ್ತಿದ್ದ ಪುರಸಭೆಯ ದ್ವಿತೀಯ ದರ್ಜೆ ಸಹಾಯಕ ಹರಿಶ್ವಚಂದ್ರಪ್ಪ ಎಚ್ ನಂದೆಣ್ಣವರ ಎಸಿಬಿ ಬಲೆಗೆ ಬಿದ್ದಿದ್ದಾನೆ.
ಪಟ್ಟಣದ ಪೇಠಬಣದ ಸೋಮಪ್ಪ ಬಿಂಕದಕಟ್ಟಿ ಎಂಬುವವರಿಗೆ ಆಶ್ರಯ ಯೋಜನೆಯಡಿ ಮನೆ ಮಂಜೂರಾಗಿದೆ. ಅನುದಾನ ಬರುವ ನಿರೀಕ್ಷೆಯಲ್ಲಿ ಮನೆ ನಿರ್ವಿುಸಿಕೊಂಡಿದ್ದಾರೆ. ಹಂತಹಂತವಾಗಿ ಜಿಪಿಎಸ್ ಮಾಡಿ ಪ್ರಗತಿಯನ್ನು ಅಪ್ಲೋಡ್ ಮಾಡಲು, ಅನುದಾನ ಮಂಜೂರು ಮಾಡಿಸಲು ಫಲಾನುಭವಿಯಿಂದ 20 ಸಾವಿರ ರೂ. ಬೇಡಿಕೆ ಇಟ್ಟಿದ್ದಾರೆ. ಅಷ್ಟೊಂದು ಹಣ ಕೊಡಲು ಒಪ್ಪದಿದ್ದಾಗ ಸದ್ಯ 5 ಸಾವಿರ ರೂ., ಉಳಿದ ಹಣವನ್ನು ಹಂತಹಂತವಾಗಿ ಜಿಪಿಎಸ್ ಮಾಡುವಾಗ ಕೊಡಬೇಕು ಎಂದು ನಂದೆಣ್ಣವರ ಹೇಳಿದ್ದಾನೆ.
ಅದರಂತೆ ಶುಕ್ರವಾರ ಮಧ್ಯಾಹ್ನ ಫಲಾನುಭವಿಯ ಮಗನಿಂದ 5 ಸಾವಿರ ರೂ. ಲಂಚದ ಹಣ ಪಡೆಯುವ ವೇಳೆ ಗದಗನ ಭ್ರಷ್ಟಾಚಾರ ನಿಗ್ರಹ ದಳದ ಡಿಎಸ್ಪಿ ವಾಸುದೇವರಾಮ್ ಎನ್. ನೇತೃತ್ವದ ಅಧಿಕಾರಿಗಳ ತಂಡ ದಾಳಿ ಮಾಡಿ ಹಣದ ಸಮೇತ ಅಧಿಕಾರಿಯನ್ನು ವಶಕ್ಕೆ ಪಡೆದು ವಿಚಾರಣೆಗೊಳಪಡಿದ್ದಾರೆ. ಈ ಕುರಿತು ಪ್ರವೀಣಕುಮಾರ ಬಿಂಕದಕಟ್ಟಿ ನೀಡಿದ ದೂರಿನನ್ವಯ ಎಸಿಬಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ದಾಳಿ ವೇಳೆ ಎಸಿಬಿ ಎಸ್ಪಿಗಳಾದ ವಿಶ್ವನಾಥ ಹಿರೇಗೌಡ್ರ, ವೈ.ಎಸ್. ಧರನಗೌಡ್ರ, ಸಿಬ್ಬಂದಿ ಎಂ.ಎಂ. ಅಯ್ಯನಗೌಡರ, ಆರ್.ಎಚ್. ಹೆಬಸೂರ, ಎನ್.ಎಸ್. ತಾಯಣ್ಣವರ, ಎಂ.ಎನ್. ಕರಿಗಾರ, ಈರಣ್ಣ ಜಾಲಿಹಾಳ, ವೀರೇಶ ಜೋಳದ ಇದ್ದರು.