ಬೆಳಗಾವಿ: ಭಾರತದಲ್ಲಿರುವ ಎಲ್ಲ ಧರ್ಮ ಹಾಗೂ ಜಾತಿಯ ಜನರು ಯಾರನ್ನೂ ಹಿಂಸೆಗೆ ಪ್ರಚೋದಿಸದೆ ಎಲ್ಲರೂ ಒಂದಾಗಿ ನೆಮ್ಮದಿಯಿಂದ ಸಹಬಾಳ್ವೆ ನಡೆಸುವ ವಾತಾವರಣ ನಿರ್ಮಾಣವಾಗಬೇಕಿದೆ ಎಂದು ಹುಕ್ಕೇರಿ ಹಿರೇಮಠದ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ ಹೇಳಿದರು.
ನಗರದ ನ್ಯೂಕ್ಲಿಯಸ್ ಥಿಯೇಟರ್ನಲ್ಲಿ ಜಿಲ್ಲೆಯ ವಿವಿಧ ಮಠಾಧೀಶರೊಂದಿಗೆ ಬುಧವಾರ ಕಶ್ಮೀರ್ ಫೈಲ್ಸ್ ಸಿನಿಮಾ ವೀಕ್ಷಿಸಿ, ಮಾತನಾಡಿದರು. ದೇಶದಲ್ಲಿ ಹಲವು ಧರ್ಮೀಯರು ಸೇರಿಕೊಂಡು ಭಾರತೀಯರಾಗಿ ಜೀವನ ಸಾಗಿಸುತ್ತಿದ್ದೇವೆ. ಶೋಷಣೆಗೊಳಗಾದ ಕಾಶ್ಮೀರಿ ಪಂಡಿತರಿಗೆ ಅವರ ಆಸ್ತಿ-ಪಾಸ್ತಿಗಳನ್ನು ಹಿಂದಿರುಗಿಸುವ ಕಾರ್ಯವಾಗಬೇಕಿದೆ ಎಂದರು.
ಅದಕ್ಕೂ ಮುನ್ನ ಬೆಳಗಾವಿ ನಗರದಲ್ಲಿ ಮರಾಠಾ ಸಮಾಜದ ವತಿಯಿಂದ ವಿವಿಧ ಮಠಾಧೀಶರು ಧರ್ಮವೀರ ಸಂಭಾಜಿ ಮಹಾರಾಜರ ಪ್ರತಿಮೆಗೆ ಗೌರವ ನಮನ ಸಲ್ಲಿಸುವ ಮೂಲಕ ಬಲಿದಾನ ದಿನ ಆಚರಿಸಲಾಯಿತು. ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಸ್ವಾಮೀಜಿಗಳು ಶಿವಾಜಿ ಹಾಗೂ ಶ್ರೀರಾಮನ ಪರ ಘೋಷಣೆ ಕೂಗಿದರು. ಛತ್ರಪತಿ ಶಿವಾಜಿ ಮಹಾರಾಜರಂತೆಯೇ ಅವರ ಪುತ್ರ ಸಂಭಾಜಿ ಮಹಾರಾಜರು ಹಿಂದು ಧರ್ಮಕ್ಕೆ ಅಪಾರ ಕೊಡುಗೆ ನೀಡಿದ್ದಾರೆ. ಶಿವಾಜಿ ಹಾಗೂ ಸಂಭಾಜಿ ಮಹಾರಾಜರ ವಿಚಾರಧಾರೆಗಳನ್ನು ಇಂದಿನ ಯುವಕರು ಅಳವಡಿಸಿಕೊಳ್ಳಬೇಕಿದೆ ಎಂದು ಸ್ವಾಮೀಜಿಗಳು ಭಕ್ತ ಸಮೂಹಕ್ಕೆ ಸಂದೇಶ ಸಾರಿದರು.
ಕಲ್ಮಠದ ರಾಜಯೋಗಿಂದ್ರ ಸ್ವಾಮೀಜಿ, ಗದುಗಿನ ಶಿವಾನಂದ ಮಠದ ಸದಾಶಿವಾನಂದ ಸ್ವಾಮೀಜಿ, ಮುರಗೋಡ ದುರದುಂಡೀಶ್ವರ ಮಠದ ನೀಲಕಂಠ ಸ್ವಾಮೀಜಿ, ಬೆಳಗಾವಿಯ ರುದ್ರಕೇಸರಿ ಸ್ವಾಮೀಜಿ, ಕಡೋಲಿಯ ದುರದುಂಡಿಶ್ವರ ಮಠದ ಸ್ವಾಮೀಜಿ ಸೇರಿ ಜಿಲ್ಲೆಯ ಬಾಗೋಜಿಕೊಪ್ಪ, ಅಂಕಲಗಿ, ನಿಲಜಿ ಮಠಗಳ ಸ್ವಾಮೀಜಿಗಳು ಪಾಲ್ಗೊಂಡಿದ್ದರು.