ಚಿತ್ರದುರ್ಗ: ಜಿಲ್ಲೆಯ ಆರು ತಾಲೂಕುಗಳನ್ನೂ ಬರಪೀಡಿತ ಪ್ರದೇಶವೆಂದು ಘೋಷಿಸಿದ್ದು, ಪ್ರತಿ ಎಕರೆಗೆ ತಲಾ 20 ಸಾವಿರ ರೂ.ನಂತೆ ರೈತರಿಗೆ ಬೆಳೆ ಪರಿಹಾರ ಬಿಡುಗಡೆಗೊಳಿಸಬೇಕು ಎಂದು ಒತ್ತಾಯಿಸಿ ಆಮ್ ಆದ್ಮಿ ಪಕ್ಷದ ಕಾರ್ಯಕರ್ತರು ಶುಕ್ರವಾರ ಪ್ರತಿಭಟನೆ ನಡೆಸಿದರು.
ಜಿಲ್ಲೆಯಲ್ಲಿ ನೀರು, ಮೇವಿನ ಕೊರತೆ ಉಂಟಾಗದಂತೆ, ತ್ವರಿತವಾಗಿ ಪರಿಹಾರ ವಿತರಿಸಲು ಕ್ರಮವಹಿಸುವಂತೆ ಸಿಎಂಗೆ ಒತ್ತಾಯಿಸಿ ಜಿಲ್ಲಾಡಳಿತದ ಮೂಲಕ ಮನವಿ ರವಾನಿಸಿದರು.
ಪಕ್ಷದ ಜಿಲ್ಲಾಧ್ಯಕ್ಷ ಬಿ.ಜಗದೀಶ್ ಮಾತನಾಡಿ, ರೈತರು ಬರವಿರುವ ಕಾರಣಕ್ಕೆ ಈ ಬಾರಿ ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ. ಆದರೆ, ಭಿಕ್ಷೆಯಂತೆ ಕೇವಲ 2 ಸಾವಿರ ರೂ. ಪರಿಹಾರ ಘೋಷಿಸಿದರೆ, ಯಾವುದಕ್ಕೆ ಸಾಲುತ್ತದೆ. ಕನಿಷ್ಠ 20 ಸಾವಿರ ರೂ.ನಂತೆ ನೀಡಬೇಕು ಎಂದು ಆಗ್ರಹಿಸಿದರು.
ಬರದಿಂದಾಗಿ ಕೆಲಸವಿಲ್ಲದೆ, ಅನೇಕರು ಗುಳೆ ಹೋಗುತ್ತಿದ್ದಾರೆ. ಇದನ್ನು ತಡೆಯಲು ನರೇಗಾ ಯೋಜನೆಯಡಿ ಹೆಚ್ಚಿನ ಉದ್ಯೋಗ ನೀಡಲು ಮುಂದಾಗಬೇಕು ಎಂದು ಒತ್ತಾಯಿಸಿದರು.
ಸಕ್ಕರೆ ಸಚಿವ ಶಿವಾನಂದ್ ಪಾಟೀಲ್ ಅವರು ಪರಿಹಾರದ ಹಣಕ್ಕಾಗಿ ರೈತರು ಬರಗಾಲ ಎದುರು ನೋಡುತ್ತಾರೆಂಬ ಅವಹೇಳನಕಾರಿ ಹೇಳಿಕೆ ನೀಡಿದ್ದು, ಅನ್ನದಾತರ ಕುರಿತು ಯಾವ ರೀತಿಯ ಭಾವನೆ ಇದೆ ಎಂಬುದಕ್ಕೆ ನಿದರ್ಶನವಾಗಿದೆ. ಈ ಸರ್ಕಾರಕ್ಕೆ ರೈತರ ಕಾಳಜಿ ಇಲ್ಲ, ಬದಲಿಗೆ ವಿರೋಧಿ ನೀತಿ ಅನುಸರಿಸುತ್ತಿದೆ ಎಂದು ದೂರಿದರು.
ಪದಾಧಿಕಾರಿಗಳಾದ ಲೋಕೇಶ್, ರಾಮಪ್ಪ, ತಿಪ್ಪೇಸ್ವಾಮಿ, ತನ್ವೀರ್, ಮಹಿಳಾ ಕಾರ್ಯಕರ್ತೆಯರು ಇತರರಿದ್ದರು.