ಮಾಂಜರಿ, ಬೆಳಗಾವಿ: ಸಂಕಷ್ಟದಲ್ಲಿದ್ದ ಸಕ್ಕರೆ ಉದ್ಯಮಕ್ಕೆ ಕಾಯಕಲ್ಪ ನೀಡುತ್ತಿರುವ ಕೆಎಲ್ಇ ಕಾರ್ಯಾಧ್ಯಕ್ಷ ಡಾ. ಪ್ರಭಾಕರ ಕೋರೆ ಅವರು ಮಾಡುತ್ತಿರುವ ಕಾರ್ಯ ಗಮನಿಸಿ, ಸಕ್ಕರೆ ಉದ್ಯಮದ ಪ್ರಶಸ್ತಿ ನೀಡಿ ಗೌರವಿಸಿರುವುದು ಶ್ಲಾಘನೀಯ ಎಂದು ಚಿದಾನಂದ ಕೋರೆ ಸಹಕಾರಿ ಸಕ್ಕರೆ ಕಾರ್ಖಾನೆ ಅಧ್ಯಕ್ಷ ಭರತೇಶ ಬನವಣೆ ತಿಳಿಸಿದರು.
ಸಮೀಪದ ಸೌಂದತ್ತಿ ಗ್ರಾಮದ ಶಿವಶಕ್ತಿ ಶುಗರ್ಸ್ ಸಕ್ಕರೆ ಕಾರ್ಖಾನೆಯಲ್ಲಿ ಪ್ರಸಕ್ತ ಸಾಲಿನ ಕಬ್ಬು ಅರೆಯುವ ಹಂಗಾಮಿಗೆ ಬುಧವಾರ ಚಾಲನೆ ನೀಡಿ ಮಾತನಾಡಿದ ಅವರು, ಕಬ್ಬು ಬೆಳೆಗಾರರ ಸಮಸ್ಯೆ ಪರಿಹರಿಸಲು ಡಾ. ಕೋರೆ ಸ್ಥಾಪಿಸಿರುವ ಶಿವಶಕ್ತಿ ಶುಗರ್ಸ್ನ ಕಾರ್ಯ ಇಂದಿನ ಸಕ್ಕರೆ ಉದ್ಯಮಕ್ಕೆ ಆದರ್ಶಮಯವಾಗಿದೆ ಎಂದರು.
ಕಾರ್ಖಾನೆ ಆಡಳಿತ ಅಧೀಕ್ಷಕ ಬಿ.ಎ.ಪಾಟೀಲ ಮಾತನಾಡಿ, ಪ್ರಸಕ್ತ ಹಂಗಾಮಿನಲ್ಲಿ ಅಂದಾಜು 20 ಲಕ್ಷ ಟನ್ ಕಬ್ಬು ಅರೆಯುವ ಗುರಿ ಹೊಂದಲಾಗಿದೆ. ಎಲ್ಲ ರೈತರು ಬೆಳೆದ ಕಬ್ಬನ್ನು ಸಕ್ಕರೆ ಕಾರ್ಖಾನೆಗೆ ಪೂರೈಸಿ ಸಹಕರಿಸಬೇಕು ಎಂದು ವಿನಂತಿಸಿದರು.
ಕಾರ್ಖಾನೆ ಉಪಾಧ್ಯಕ್ಷ ಮಲ್ಲಿಕಾರ್ಜುನ ಕೋರೆ, ಆಡಳಿತ ಕಚೇರಿಯ ಅಧಿಕಾರಿ ಬಿ.ಎ.ಪಾಟೀಲ, ನಿರ್ದೇಶಕ ತಾತ್ಯಾಸಾಹೇಬ ಕಾಟೆ, ಮಲ್ಲಪ್ಪ ಮೈಶಾಳೆ, ರಾಮಚಂದ್ರ ನಿಶಾಂದಾರ, ಸುರೇಶ ಪಾಟೀಲ, ಪಿಂಟು ಹಿರೇಕುರಬರ, ತುಕಾರಾಮ ಪಾಟೀಲ, ಎಸ್.ಎಸ್.ಯಾದವ, ಬಿ.ಎಸ್.ಮುಧೋಳ, ಆರ್.ಶಿವರಾಂ, ಅಮಿತ ಜಾಧವ, ಸತ್ಯಪ್ಪ ಭಿಸಟೆ, ವಿಜಯ ಪಾಟೀಲ, ಗಿರಿಧರ ಗಲಾಂಡೆ, ಪಾಂಡು ಬಡಗಣ್ಣವರ, ಸತೀಶ ಪಾಟೀಲ, ಶಶಿಧರ ಸೂರ್ಯವಂಶಿ, ರಾಘವೇಂದ್ರ ಪತ್ತಾರ, ಅಣ್ಣಾಸಾಹೇಬ ಚೌಗುಲೆ, ಪ್ರಕಾಶ ಮಿರ್ಜಿ, ಸಂತೋಷ ಚಿಂಚಲಿ ಇತರರಿದ್ದರು.