ಹರಿಹರ: ತುಂಗಭದ್ರಾ ನದಿ ನೀರಿನ ಹರಿವು ಹೆಚ್ಚಳವಾದ ಹಿನ್ನೆಲೆಯಲ್ಲಿ ಉಕ್ಕಡಗಾತ್ರಿ ಫತ್ಯಾಪುರ ರಸ್ತೆ ಸಂಪರ್ಕ ಕಡಿತವಾಗಿದ್ದು ಶಾಸಕ ಬಿ.ಪಿ.ಹರೀಶ್ ಮತ್ತು ತಹಸೀಲ್ದಾರ್ ಪೃಥ್ವಿ ಸಾನಿಕಂ ಸೋಮವಾರ ಭೇಟಿ ನೀಡಿ ಪರೀಶಿಲಿಸಿದರು.
ಮಲೆನಾಡು ಭಾಗದಲ್ಲಿ ನಿರಂತರ ಮಳೆಯಾಗುತ್ತಿರುವ ಕಾರಣ ತುಂಗಾ ಜಲಾಶಯದಿಂದ ಹೆಚ್ಚಿನ ಪ್ರಮಾಣದಲ್ಲಿ ನೀರನ್ನು ಬಿಡುತ್ತಿರುವ ಪರಿಣಾಮ ನದಿಯ ನೀರಿನ ಮಟ್ಟ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ
ನೀರಿನ ಪ್ರವಾಹದಿಂದ ತಾಲೂಕಿನ ಸುಕ್ಷೇತ್ರ ಉಕ್ಕಡಗಾತ್ರಿ ಮತ್ತು ಫತ್ಯಾಪುರ ಸಂಪರ್ಕ ರಸ್ತೆ ಸಂಪೂರ್ಣ ಮುಳುಗಡೆಯಾಗಿದ್ದು ಸಾರ್ವಜನಿಕರ ಓಡಾಟ ನಿಷೇಧಿಸಲಾಗಿದೆ.
ಹಲಸಬಾಳು, ಬಿಳಸನೂರು, ಬೆಳ್ಳೂಡಿ, ಉಕ್ಕಡಗಾತ್ರಿ ಮತ್ತು ನದಿ ಪಾತ್ರಕ್ಕೆ ಭೇಟಿ ನೀಡಿ ಅಗತ್ಯ ಮುನ್ನೆಚ್ಚರಿಕೆ ಕೈಗೊಳ್ಳುವಂತೆ ಶಾಸಕ ಬಿ.ಪಿ. ಹರೀಶ್ ಸೂಚನೆ ನಿಡಿದರು.
7 ಮನೆಗೆ ಹಾನಿ: ತಾಲೂಕಿನ ಕುಂಬಳೂರು, ಬಿಳಸನೂರು, ಇಂಗಳಗೊಂದಿ, ಕುಣೆ ಬೆಳಕೆರೆ, ಹನಗವಾಡಿ ಗ್ರಾಮಗಳ ತಲಾ ಒಂದು ಹಾಗೂ ಕೊಂಡಜ್ಜಿಯ 2 ಮನೆಗಳಿಗೆ ಬಾಗಶಃ ಹಾನಿಯಾಗಿ 2.10 ಲಕ್ಷ ರೂ. ನಷ್ಟವಾಗಿದೆ ಎಂದು ಅಧಿಕಾರಿಗಳು ಅಂದಾಜಿಸಿದ್ದಾರೆ.
ನದಿ ಪಾತ್ರದಲ್ಲಿ ಓಡಾಟ ನಿಷೇಧ: ತುಂಗಭದ್ರಾ ನದಿಯಲ್ಲಿ ನೀರಿನ ಪ್ರಮಾಣ ಹೆಚ್ಚಾಗುತ್ತಿರುವ ಕಾರಣ ನದಿ ಪಾತ್ರಕ್ಕೆ ಅನವಶ್ಯಕವಾಗಿ ಸಾರ್ವಜನಿಕರು ಒಡಾಟ ಮಾಡುವುದನ್ನು ಹಾಗೂ ಜಾನುವಾರು ಬಿಡುವುದನ್ನು ನಿಷೇಧಿಸಿ ತಾಲೂಕು ಆಡಳಿತ ಆದೇಶಿಸಿದೆ. ಹರಿಹರ ನಗರದ ರಾಘವೇಂದ್ರ ಮಠ ಸಮೀಪದ ತುಂಗಾರತಿ ಸ್ಥಳಕ್ಕೆ ಸಾರ್ವಜನಿಕರ ಪ್ರವೇಶ ನಿಷೇಧಿಸಿ ಪೊಲೀಸರನ್ನು ನೀಯೋಜಿಸಲಾಗಿದೆ.
ಮಳೆಯ ವಿವರ: ಹರಿಹರ-17.4 ಮಿ.ಮೀ., ಕೊಂಡಜ್ಜಿ-13.4 ಮಿ.ಮಿ., ಹೊಳೆಸಿರಿಗೆರೆ -13.2 ಮಿ.ಮೀ., ಮಲೆಬೆನ್ನೂರು- 22.0 ಮಿ.ಮೀ. ಸೇರಿ ಸರಾಸರಿ 16.5 ಮಿ.ಮೀ. ಮಳೆಯಾಗಿದೆ.
ಅಧಿಕಾರಿಗಳ ಸಭೆ: ತಾಲೂಕು ಕಚೇರಿಯಲ್ಲಿ ಗ್ರೇಡ್-2 ತಹಸೀಲ್ದಾರ್ ಶಶಿಧರಯ್ಯ ನೇತೃತ್ವದಲ್ಲಿ ಕಂದಾಯ ನೀರಿಕ್ಷಕರು ಹಾಗೂ ಗ್ರಾಮಲೆಕ್ಕಾಧಿಕಾರಿಗಳ ಸಭೆ ನಡೆಸಿ ಮಳೆಯಿಂದ ಸಾರ್ವಜನಿಕರಿಗೆ ಹಾಗೂ ಜಾನುವಾರುಗಳಿಗೆ ತೊಂದರೆಯಾಗದಂತೆ ಕ್ರಮ ಗೈಗೊಳ್ಳಲು ಸೂಚಿಸಲಾಯಿತು.