ಗುಂಡ್ಲುಪೇಟೆ: ಗಿರಿಜನರನ್ನು ಸಮಾಜದ ಮುಖ್ಯ ವಾಹಿನಿಗೆ ತರಲು ಸರ್ಕಾರ ಹಲವಾರು ಯೋಜನೆಗಳನ್ನು ಜಾರಿಗೆ ತಂದಿದ್ದರೂ ತಾಲೂಕಿನ ಮದ್ದೂರು ಕಾಲನಿಗೆ ಮಾತ್ರ ಅಭಿವೃದ್ಧಿಯಿಂದ ವಂಚಿತಬಾಗಿದೆ.
ಈವರೆಗೂ ಸರ್ಕಾರಿ ಯೋಜನೆಗಳು ಇಲ್ಲಿಗೆ ತಲುಪದ ಪರಿಣಾಮ ಗಿರಿಜನರ ಬದುಕು ಅಕ್ಷರಃ ನರಕಸದೃಷವಾಗಿದ್ದು, ಅಧಿಕಾರಿಗಳ ಕಾರ್ಯವೈಖರಿ ವಿರುದ್ಧ ನಿವಾಸಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಬಂಡೀಪುರ ಹುಲಿ ಯೋಜನೆ ವ್ಯಾಪ್ತಿಯ ಮದ್ದೂರು ವಲಯದ ಕಾಡಂಚಿನಲ್ಲಿರುವ ಕಾಲನಿಯಲ್ಲಿ ಸುಮಾರು 300 ಗಿರಿಜನರ ಮನೆಗಳಿವೆ. ಇಲ್ಲಿ ಬುಡಕಟ್ಟು ಜನಾಂಗಗಳಾದ ಸೋಲಿಗ, ಕಾಡುಕುರುಬ ಹಾಗೂ ಬೆಟ್ಟ ಕುರುಬರು ವಾಸಿಸುತ್ತಿದ್ದು, ಸರ್ಕಾರದ ಬಹುತೇಕ ಸೌಲಭ್ಯಗಳಿಂದ ವಂಚಿತರಾಗಿದ್ದಾರೆ. ಗ್ರಾಮದ ಎರಡು ಬೀದಿಗಳಲ್ಲಿ ಸಿಸಿ ರಸ್ತೆ ನಿರ್ಮಿಸಿದ್ದು, ಉಳಿದ ಯಾವುದೇ ರಸ್ತೆಗಳು ಅಭಿವೃದ್ಧಿಕಾಣದ ಪರಿಣಾಮ ಮಳೆಗಾಲದಲ್ಲಿ ಕಾಲಿಡಲಾಗದ ಪರಿಸ್ಥಿತಿ ಇದೆ.
15ರಿಂದ 20ಟನ್ ತೂಕದ ಚೆಂಡುಮಲ್ಲಿಗೆ ಹೂವಿನ ಲಾರಿಗಳು ಇಲ್ಲಿ ಸಂಚರಿಸುವುದರಿಂದ ರಸ್ತೆಗಳು ಸಂಪೂರ್ಣ ಹಾಳಾಗಿದೆ. ಹಳ್ಳ ಬಿದ್ದ ರಸ್ತೆಗಳಿಂದ ಕೂಡಿದ ಗ್ರಾಮಕ್ಕೆ ಸರ್ಕಾರಿ ಬಸ್ಸುಗಳೂ ಬರುತ್ತಿಲ್ಲ. ಇದರಿಂದ ವಿದ್ಯಾರ್ಥಿಗಳು 5 ಕಿಲೋ ಮೀಟರ್ ದೂರದ ಬೇರಂಬಾಡಿ ಗ್ರಾಮದ ಶಾಲೆಗೆ ಕಾಲ್ನಡಿಗೆಯಲ್ಲೇ ತೆರಳಬೇಕಿದೆ.
ಜಲಜೀವನ್ ಮಿಷನ್ ಯೋಜನೆಯಡಿ ಗ್ರಾಮಕ್ಕೆ ಮನೆಗಳಿಗೆ ಕುಡಿಯುವ ನೀರಿನ ಸಂಪರ್ಕ ನೀಡಿದ್ದರೂ ಯಾವುದೇ ಮನೆಗಳಿಗೆ ನೀರು ಬರುತ್ತಿಲ್ಲ. ಗ್ರಾಮದ ಹಳೆಯ ತೊಂಬೆಯೊಂದರಲ್ಲಿ ಬರುವ ನೀರನ್ನು ಕುಡಿಯಲು, ಮನೆ ಬಳಕೆ ಮತ್ತು ಬಟ್ಟೆ ಒಗೆಯಲು ಉಪಯೋಗಿಸುತ್ತಿದ್ದರೆ. ಏಕಕಾಲದಲ್ಲಿ ಈ ಎಲ್ಲವನ್ನೂ ಮಾಡುತ್ತಿರುವುದರಿಂದ ಅಶುಚಿತ್ವ ತಾಂಡವಾಡುತ್ತಿದೆ. ಸಮುದಾಯ ಚಟುವಟಿಕೆಗೆಂದು ಆರು ವರ್ಷದ ಹಿಂದೆ ನಿರ್ಮಿಸಿದ ಸಮುದಾಯ ಭವನ ಕಾಮಗಾರಿ ಅರೆಬರೆಯಾಗಿದ್ದು ನಾಲ್ಕು ಗೋಡೆಗಳಿಗೆ ಸೀಮಿತವಾಗಿದೆ. ಬಿಸಿಲು ಮಳೆಗೆ ಇಟ್ಟಿಗೆಗಳು ಕಳಚಿ ನೆಲಕ್ಕೆ ಬೀಳುತ್ತಿದೆ.
ಕಾಡು ಕುರುಬ ಹಾಗೂ ಜೇನು ಕುರುಬರಿಗೆ ಮಾತ್ರ ಮನೆ ಕಟ್ಟಲು ಅನುದಾನ ನೀಡಲಾಗುತ್ತಿದೆ. ಈ ಜನಾಂಗದವರಿಗೆ ನಿರ್ಮಿಸಿದ ಮನೆಗಳಿಗೆ ನಾಲ್ಕು ಗೋಡೆಗಳಿಗೆ ಮೇಲ್ಚಾವಣಿ ಹಾಕಲಾಗಿದೆ. ಒಳಗೆ ಕೋಣೆಗಳನ್ನು ನಿರ್ಮಿಸದೆ ಬಾಕ್ಸ್ ಮಾದರಿಯಲ್ಲಿ ಗೋಡೆ ಕಟ್ಟಲಾಗಿದೆ. ಆದರೆ ಯಾವುದೇ ಮನೆಗಳಿಗೂ ಇನ್ನೂ ವಿದ್ಯುತ್ ಹಾಗೂ ಕುಡಿಯುವ ನೀರಿನ ಸಂಪರ್ಕ ಸಿಕ್ಕಿಲ್ಲ. ಸೋಲಿಗ ಸಮುದಾಯದವರು ಹಾಳುಬಿದ್ದ ಮನೆಗಳಲ್ಲಿ ವಾಸಿಸುತ್ತಿದ್ದರೂ ಸಮಾಜಕಲ್ಯಾಣ ಇಲಾಖೆ ಇವರಿಗೆ ಹೊಸದಾಗಿ ಮನೆಗಳನ್ನು ಕಟ್ಟಿಕೊಟ್ಟಿಲ್ಲ. ಇದರಿಂದ ಮೇಲ್ಚಾವಣಿಗೆ ಪ್ಲಾಸ್ಟಿಕ್ ಹಾಕಿ ಗೋಡೆಗಳೇ ಇಲ್ಲದ ಗೂಡುಗಳಲ್ಲಿ ವಾಸಿಸುತ್ತಿದ್ದಾರೆ. ಇತ್ತ ಗ್ರಾಮಪಂಚಾಯಿತಿಯವರೂ ಮನೆಗಳನ್ನು ನಿರ್ಮಿಸಿ ಕೊಡುತ್ತಿಲ್ಲ ಎಂದು ನಿವಾಸಿಗಳು ಬೇಸರ ವ್ಯಕ್ತಪಡಿಸಿದ್ದಾರೆ.
ಸಮಾಜ ಕಲ್ಯಾಣ ಇಲಾಖೆ ಗ್ರಾಮವನ್ನು ಸಂಪೂರ್ಣ ನಿರ್ಲಕ್ಷೃದ ಪರಿಣಾಮ ಬುಡಕಟ್ಟು ಜನರಿಗೆ ಕನಿಷ್ಟ ಮೂಲ ಸೌಕರ್ಯ ಸಿಕ್ಕಿಲ್ಲ. ಗ್ರಾಮದಲ್ಲಿ ಗಿರಿಜನ ಆಶ್ರಮಶಾಲೆಯಿದ್ದರೂ ನಿವಾಸಿಗಳು ತಮ್ಮ ಮಕ್ಕಳನ್ನು ಕಳಿಸಲು ಮುಂದಾಗಿಲ್ಲ. ಬೇರಂಬಾಡಿ ಶಾಲೆಗೆ ಹೋಗಲು ಕಾಲ್ನಡಿಗೆಯಲ್ಲಿಯೇ ಹೋಗಬೇಕಾಗಿದೆ. ಪಟ್ಟಣಕ್ಕೆ ಹೋಗುವವರಿಗೆ ಮಾತ್ರ ಬೆಳಗ್ಗೆ ಮತ್ತು ಸಂಜೆ ಬಸ್ ಬರುತ್ತಿದೆ. ಬೇಸಿಗೆ ಸಂದರ್ಭ ದಲ್ಲಿ ಅರಣ್ಯ ಇಲಾಖೆಯ ಕೆಲಸ ಬಿಟ್ಟರೆ ಅಕ್ಕಪಕ್ಕದ ಜಮೀನುಗಳಿಗೆ ಕೂಲಿಗೆ ಹೋಗಬೇಕಾಗಿದೆ. ಗ್ರಾಮ ಪಂಚಾಯಿತಿಯು ನರೇಗಾ ಯೋಜನೆಯಡಿ ಕೆಲಸ ನೀಡಲು ಕ್ರಮಕೈಗೊಳ್ಳಬೇಕು. ಗ್ರಾಮದಲ್ಲಿ ರಸ್ತೆ ನಿರ್ಮಿಸುವುದರ ಜತೆಗೆ ಬುಡಕಟ್ಟುಜನರಿಗೆ ಮನೆಗಳನ್ನೂ ನಿರ್ಮಿಸಿಕೊಡಬೇಕು
ನಾಗರಾಜು ಗ್ರಾಮಸ್ಥ
ಕಾಡು ಹಾಗೂ ಜೇನು ಕುರುಬ ಸಮುದಾಯದವರಿಗೆ ಮನೆಕಟ್ಟಿಕೊಡಲು ಅನುದಾನ ಬಂದಿದ್ದು ಅವರಿಗೆ ಮನೆಗಳನ್ನು ಕಟ್ಟಿಕೊಡಲಾಗಿದೆ. ಆದರೆ ಸೋಲಿಗರಿಗೆ ಮಾತ್ರ ಇನ್ನೂ ಅನುದಾನ ಬಂದಿಲ್ಲ. ಮನೆ ಅಗತ್ಯವಿರುವವರ ಸರ್ವೇ ನಡೆಸಿ ಅನುದಾನ ಕೊಡುವಂತೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ.
ಮಂಜುಳಾ ಜಿಲ್ಲಾ ಪರಿಶಿಷ್ಟ ವರ್ಗಗಳ ಕಲ್ಯಾಣಾಧಿಕಾರಿ, ಚಾಮರಾಜನಗರ