ಎನ್.ಆರ್.ಪುರ: ರಾಷ್ಟ್ರೀಯ ಕಾಲುಬಾಯಿ ಲಸಿಕಾ ಕಾರ್ಯಕ್ರಮದಡಿ ಏ.1ರಿಂದ 30ರವರೆಗೆ 5ನೇ ಸುತ್ತಿನ ಲಸಿಕಾ ಅಭಿಯಾನ ನಡೆಯಲಿದೆ ಎಂದು ಪಶುಪಾಲನಾ ಇಲಾಖೆ ಸಹಾಯಕ ನಿರ್ದೇಶಕ ಡಾ. ಶಿವಕುಮಾರ್ ತಿಳಿಸಿದರು.
ಶನಿವಾರ ತಾಪಂ ಸಾಮರ್ಥ್ಯ ಸೌಧದಲ್ಲಿ ರಾಷ್ಟ್ರೀಯ ಕಾಲುಬಾಯಿ ಜ್ವರದ ಲಸಿಕಾ ಕಾರ್ಯಕ್ರಮದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿ, ಗರ್ಭ ಧರಿಸಿದ ಜಾನುವಾರು ಬಿಟ್ಟು ಬೇರೆ ಎಲ್ಲ ಜಾನುವಾರುಗಳಿಗೂ ಕಾಲುಬಾಯಿ ಲಸಿಕೆ ಹಾಕಿಸಬೇಕು. ಪಶು ಆಸ್ಪತ್ರೆ ಸಿಬ್ಬಂದಿ ಮನೆ ಮನೆಗೆ ಭೇಟಿ ನೀಡಿ ಜಾನುವಾರುಗಳಿಗೆ ಲಸಿಕೆ ಹಾಕಲಿದ್ದಾರೆ ಎಂದರು. ರೈತರು ಜಾನುವಾರುಗಳಿಗೆ 6 ತಿಂಗಳಿಗೊಮ್ಮೆ ಕಾಲುಬಾಯಿ ಲಸಿಕೆ ಹಾಕಿಸಬೇಕು. ಗ್ರಾಮಗಳಿಗೆ ಬರುವ ಮುನ್ನ ಮುಂಚಿತವಾಗಿ ತಿಳಿಸುತ್ತೇವೆ ಎಂದರು. ಕಾಲುಬಾಯಿ ಜ್ವರದ ಮಾಹಿತಿ ಕರಪತ್ರ ಬಿಡುಗಡೆ ಮಾಡಲಾಯಿತು. 14 ಪಶುಸಖಿಯರಿಗೆ ಗುರುತಿನ ಕಾರ್ಡ್ ನೀಡಲಾಯಿತು. ಪಶುಪಾಲನಾ ಇಲಾಖೆ ಸೀನಿಯರ್ ಇನ್ಸ್ಪೆಕ್ಟರ್ ಎನ್.ಟಿ.ಶೇಷಾಚಲ, ತಾಪಂ ಎನ್ಆರ್ಎಲ್ಎಂ ಯೋಜನೆ ಅಧಿಕಾರಿ ಸುಬ್ರಹ್ಮಣ್ಯ, ಆರೋಗ್ಯ ನಿರೀಕ್ಷಣಾಧಿಕಾರಿ ದರ್ಶನ್ ಇದ್ದರು.