ನಿಪ್ಪಾಣಿ: ಮಹಿಳೆಯರು ಸ್ವ ಸಹಾಯ ಸಂಘಗಳನ್ನು ಸ್ಥಾಪಿಸಿ ಆರ್ಥಿಕವಾಗಿ ಅಭಿವೃದ್ಧಿ ಹೊಂದಬೇಕು ಎಂದು ಸಚಿವೆ ಶಶಿಕಲಾ ಜೊಲ್ಲೆ ಕಿವಿಮಾತು ಹೇಳಿದ್ದಾರೆ.
ತಾಲೂಕಿನ ಕೊಗನೋಳಿ ಗ್ರಾಮದಲ್ಲಿ ಕೃಷಿ ಇಲಾಖೆಯಿಂದ ಪ್ರಧಾನಮಂತ್ರಿ ಕಿರು ಆಹಾರ ಸಂಸ್ಕರಣಾ ಉದ್ದಿಮೆಯ ನಿಯಮಬದ್ಧಗೊಳಿಸುವಿಕೆಯ ಯೋಜನೆ ಕುರಿತು ಗುರುವಾರ ಹಮ್ಮಿ ಕೊಂಡಿದ್ದ ತಿಳಿವಳಿಕೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಈ ಯೋಜನೆಯಡಿ ಬ್ಯಾಂಕ್ಗಳು ಸಾಲ ಕೊಡುತ್ತವೆ. ಶೇ.35 ಕೇಂದ್ರ ಹಾಗೂ ಶೇ.15 ರಾಜ್ಯ ಸರ್ಕಾರ ಸಹಾಯಧನ (ಒಟ್ಟು ಶೇ.50) ನೀಡುತ್ತವೆ. ವೈಯಕ್ತಿಕವಾಗಿ ಗರಿಷ್ಠ 15 ಲಕ್ಷದವರೆಗೆ ಸಾಲ ಪಡೆಯಬಹುದು. ತಮ್ಮದೇ ಆದ ಉದ್ದಿಮೆಗಳಲ್ಲಿ ತೊಡಗಿಕೊಂಡಿರುವ ಸ್ವಸಹಾಯ ಸಂಘಗಳಿಗೆ ಈ ಯೋಜನೆಯಡಿ ಗರಿಷ್ಠ ಮಿತಿ ಇರುವುದಿಲ್ಲ. ಈ ಯೋಜನೆ ಎಲ್ಲರಿಗೂ ಅನ್ವಯವಾಗುತ್ತದೆ. ಇದರ ಲಾಭ ಪಡೆಯಬೇಕು ಎಂದರು.
ಯೋಜನೆಯ ತಾಲೂಕಿನ ಪ್ರಥಮ ಲಾನುಭವಿ ಪ್ರಿಯಾಂಕಾ ಸಂಕೇಶ್ವರೆ ಅವರು 10 ಲಕ್ಷ ರೂ. ವೆಚ್ಚದಲ್ಲಿ ಆರಂಭಿಸಿದ ಬೇಕರಿಯನ್ನು ಸಚಿವೆ ಶಶಿಕಲಾ ಜೊಲ್ಲೆ ಉದ್ಘಾಟಿಸಿದರು.
ಬೆಳಗಾವಿ ಜಂಟಿ ಕೃಷಿ ನಿರ್ದೇಶಕ ಶಿವನಗೌಡ ಪಾಟೀಲ, ಚಿಕ್ಕೋಡಿ ಉಪಕೃಷಿ ನಿರ್ದೇಶಕ ಎಲ್.ಐ.ರೂಢಗಿ, ಸಹಾಯಕ ಕೃಷಿ ನಿರ್ದೇಶಕ ಮಂಜುನಾಥ ಜನ್ಮಟ್ಟಿ, ಲೀಲಾ ಕೌಜಗಿರಿ, ತೋಟಗಾರಿಕೆ ವಿದ್ಯಾಲಯದ ಪ್ರೊ. ಕಿರಣ ಬೋರಬಾಳ, ಕೃಷಿ ಅಧಿಕಾರಿ ಪುರುಷೋತ್ತಮ ಪಿರಾಜೆ, ಕೆನರಾ ಬ್ಯಾಂಕ್ ಸ್ಥಳೀಯ ಶಾಖೆಯ ವ್ಯವಸ್ಥಾಪಕ ಮಲ್ಲೇಶ ಕತ್ತಿ, ಬಿಜೆಪಿ ಗ್ರಾಮೀಣ ಘಟಕದ ಅಧ್ಯಕ್ಷ ಪವನ ಪಾಟೀಲ, ಮಹಿಳಾ ಮೋರ್ಚಾ ಗ್ರಾಮೀಣ ಘಟಕದ ಅಧ್ಯಕ್ಷೆ ಸರೋಜ ಜಮದಾಡೆ, ಕುಮಾರ ಪಾಟೀಲ, ಪ್ರಕಾಶ ಶಿಂಧೆ, ಅನಿತಾ ದೇಸಾಯಿ ಇದ್ದರು.