ಹನೂರು: ತಾಲೂಕಿನ ಎಲ್ಲೇಮಾಳ ಗ್ರಾಮದಲ್ಲಿ ಆರೋಗ್ಯ ಉಪ ಕೇಂದ್ರದ ಸ್ಥಾಪನೆಗೆ ಕೆಂಚಯ್ಯನದೊಡ್ಡಿ ಗ್ರಾಮದ ಕೆ.ವಿ. ಸಿದ್ದಪ್ಪ ಅವರು 60*40 ಅಳತೆಯ ನಿವೇಶನವನ್ನು ದಾನವಾಗಿ ನೀಡಿದ್ದಾರೆ.
ಎಲ್ಲೇಮಾಳ ಗ್ರಾಮದ ಸುತ್ತಮುತ್ತ ಹಲವು ಗ್ರಾಮಗಳಿವೆ. ಆದರೆ ಆರೋಗ್ಯ ಉಪ ಕೇಂದ್ರ ಇರಲಿಲ್ಲ. ಇದರಿಂದ ಜನರು ಅರೋಗ್ಯ ಸೇವೆ ಪಡೆಯಲು ತೊಂದರೆಪಡುತ್ತಿದ್ದರು. ಈ ದಿಸೆಯಲ್ಲಿ ಕೆ.ವಿ. ಸಿದ್ದಪ್ಪ ಎಲ್ಲೇಮಾಳ ಗ್ರಾಮದಲ್ಲಿ ಆರೋಗ್ಯ ಉಪ ಕೇಂದ್ರ ಸ್ಥಾಪನೆಗೆ ಸರ್ವೇ ನಂ.28/ಬಿ2 ಜಾಗವನ್ನು ದಾನವಾಗಿ ನೀಡಿದ್ದು, ಈ ಕೇಂದ್ರಕ್ಕೆ ಶ್ರೀಮತಿ ಜಯಮ್ಮ ಮತ್ತು ಶ್ರೀ ಕೆ.ವಿ. ಸಿದ್ದಪ್ಪ ಹೆಸರಿಡಲು ಕೋರಿದ್ದಾರೆ.
ಈ ಸಂಬಂಧ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ವಿಶ್ವೇಶ್ವರಯ್ಯ ದಾನಿಗಳ ನೀಡಿರುವ ನಿವೇಶನವನ್ನು ಪರಿಗಣಿಸಿ ವೈದ್ಯಾಧಿಕಾರಿ ಅವರ ಹೆಸರಿಗೆ ನೋಂದಣಿ ಮಾಡಿ ಕಚೇರಿಗೆ ಮಾಹಿತಿ ಸಲ್ಲಿಸಲು ಹನೂರು ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿಗೆ ಸೂಚಿಸಲಾಗಿದೆ. ಅಲ್ಲದೆ ಕಟ್ಟಡ ಕಾಮಗಾರಿ ಪೂರ್ಣಗೊಂಡ ಬಳಿಕ ಉಪ ಕೇಂದ್ರಕ್ಕೆ ಶ್ರೀಮತಿ ಜಯಮ್ಮ ಮತ್ತು ಶ್ರೀ ಕೆ.ವಿ. ಸಿದ್ದಪ್ಪ ಹೆಸರಿಡಲು ಸೂಚಿಸಿದ್ದಾರೆ.