ಹನಗೋಡು: ಆರೋಗ್ಯವನ್ನು ಕಾರ್ಮಿಕರು ಸುಸ್ಥಿರವಾಗಿರಿಸಿಕೊಳ್ಳಬೇಕು ಎಂದು ತಟ್ಟೆಕೆರೆ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯ ಕೆ.ಹೇಮಂತ್ಕುಮಾರ್ ಸಲಹೆ ನೀಡಿದರು.
ಡೇರಿ ಆವರಣದಲ್ಲಿ ತಾಲೂಕು ಪಂಚಾಯಿತಿ ಮಹಾತ್ಮಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ, ತಟ್ಟೆಕೆರೆ ಗ್ರಾಮ ಪಂಚಾಯಿತಿ, ಸಾರ್ವಜನಿಕ ಆಸ್ಪತ್ರೆಯ ಐಇಸಿಟಿ ಕೇಂದ್ರ, ಕೆ.ಎಚ್.ಪಿ.ಟಿ.ಆರೋಗ್ಯ ಅಮೃತ ಅಭಿಯಾನ, ಪ್ರಾಥಮಿಕ ಆರೋಗ್ಯ ಕೇಂದ್ರದ ಸಂಯುಕ್ತಾಶ್ರಯದಲ್ಲಿ ನರೇಗಾ ಕೂಲಿ ಕಾರ್ಮಿಕರು ಹಾಗೂ ಗ್ರಾಮಸ್ಥರಿಗೆ ಆಯೋಜಿಸಿದ್ದ ಸಮುದಾಯ ಆರೋಗ್ಯ ಉಚಿತ ತಪಾಸಣಾ ಶಿಬಿರದಲ್ಲಿ ಮಾತನಾಡಿದರು.
ಏಡ್ಸ್ ತಪಾಸಣೆ, ಕೆಮ್ಮು, ಜ್ವರ, ರಕ್ತದೊತ್ತಡ, ಸಕ್ಕರೆ ಕಾಯಿಲೆ, ಕಫಾ ಪರೀಕ್ಷೆ ಮಾಡಲಾಯಿತು. ಚಿಕಿತ್ಸೆ ಅಗತ್ಯವಿದ್ದಲ್ಲಿ ಸಾರ್ವಜನಿಕ ಆಸ್ಪತ್ರೆಗೆ ತೆರಳಲು ಸಲಹೆ ನೀಡಲಾಯಿತು.
ತಾಲೂಕು ಪಂಚಾಯಿತಿ ಐಇಸಿ ಸಂಯೋಜಕಿ ಪುಷ್ಪವತಿ, ಇ-ಶ್ರಮ ಪೋರ್ಟಲ್ ತಾಲೂಕು ನೋಂದಣಾಧಿಕಾರಿ ದಿನೇಶ್, ಗ್ರಾ.ಪಂ. ಅಧ್ಯಕ್ಷ ದೇವರಾಜು, ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಎಚ್.ಡಿ.ಲೋಕೇಶ್, ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ನಾಗರಾಜು, ಅಮೃತ ಆರೋಗ್ಯ ಅಭಿಯಾನದ ತಾಲೂಕು ಸಂಯೋಜಕ ವಸಂತ್, ಕಾರ್ಯದರ್ಶಿ ರಂಗಯ್ಯ ಇತರರು ಇದ್ದರು.