ಕಲಬುರಗಿ: ಮಾಜಿ ಸಚಿವ ರಮೇಶ ಜಾರಕಿಹೊಳಿ ಅವರದ್ದು ಎನ್ನಲಾದ ಸೆಕ್ಸ್ ಸಿಡಿ ಬಯಲಿಗೆ ಬಂದ ಬೆನ್ನಲ್ಲಿಯೇ, ತಮ್ಮ ಮಾನ ಹಾನಿಯಾಗದಂತ ಸುದ್ದಿಗಳನ್ನು ಪ್ರಸಾರ ಮಾಡದಂತೆ ನ್ಯಾಯಾಲಯದಿಂದ ಆದೇಶ ಪಡೆದುಕೊಂಡಿರುವ ಆರು ಸಚಿವರನ್ನು ಸಂಪುಟದಿಂದ ಕೈಬಿಡಬೇಕು ಎಂದು ಕಾಂಗ್ರೆಸ್ ನಾಯಕರಾಗಿರುವ ಎಂಎಲ್ಸಿ ಸಿ.ಎಂ.ಇಬ್ರಾಹಿಂ ಆಗ್ರಹಿಸಿದರು.
ನಗರದಿಂದ ಸೋಮವಾರ ಬೆಂಗಳೂರಿಗೆ ತೆರಳುವ ಮುನ್ನ ಪತ್ರಕರ್ತರೊಂದಿಗೆ ಮಾತನಾಡಿ, ಮುಂಬಯಿ ಮಿತ್ರ ಮಂಡಳಿಯವರಿಗೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಮತ್ತು ಬಿಜೆಪಿಯವರು ನೀಡಿರುವ ಪ್ಯಾಕೇಜ್ನಲ್ಲಿ ಸಿಡಿ ಸಹ ಒಳಗೊಂಡಿರುವಂತಿದೆ ಎಂದು ಲೇವಡಿ ಮಾಡಿ, ಇದೊಂದು ನೈತಿಕ ಅಧಃಪತನ ಎಂದು ಕಿಡಿಕಾರಿದರು.
ಸಚಿವರು ನ್ಯಾಯಾಲಯಕ್ಕೆ ಹೋದ ಬೆನ್ನಲ್ಲಿಯೇ ಸಿಎಂ ಮತ್ತು ಬಿಜೆಪಿ ಹೈಕಮಾಂಡ್ ಅವರೆಲ್ಲರನ್ನು ಸಂಪುಟದಿಂದ ವಜಾಗೊಳಿಸಬೇಕಾಗಿತ್ತು. ಇಲ್ಲವೇ ರಾಜೀನಾಮೆ ಪಡೆದುಕೊಳ್ಳಬೇಕಾಗಿತ್ತು. ಈ ಕೆಲಸ ಮಾಡದಿರುವುದು ನೋಡಿದಾಗ ಇನ್ನೂ ಏನೋನು ಅಡಗಿದೆಯೋ ಎಂದು ಸಂಶಯ ವ್ಯಕ್ತಪಡಿಸಿದರು.
ಯಾವ ಕಾರಣಕ್ಕೆ ಆರು ಸಚಿವರು ನ್ಯಾಯಾಲಯ ಮೊರೆ ಹೋಗಿ ತಡೆಯನ್ನು ಪಡೆದುಕೊಂಡಿದ್ದಾರೆ ಎಂಬುದನ್ನು ಹೇಳಲಿ ಎಂದು ಆಗ್ರಹಿಸಿದರು. ನಾನು ಈ ವಿಷಯವನ್ನು ಸೋಮವಾರ ಸದನದಲ್ಲಿ ಪ್ರಸ್ತಾಪಿಸುವೆ ಎಂದು ಹೇಳಿದರು. ಅಲ್ಲದೆ ಜಾರಕಿಹೊಳಿ ವಿರುದ್ಧ ದೂರು ನೀಡಿದ್ದ ದಿನೇಶ ಕಲ್ಲಹಳ್ಳಿ ದೂರು ಹಿಂದಕ್ಕೆ ಪಡೆದುಕೊಂಡಿರುವ ಹಿಂದಿನ ಮರ್ಮವೇನು ಎಂಬುದು ಜನಕ್ಕೆ ಗೊತ್ತಾಗಬೇಕು ಎಂದು ಇಬ್ರಾಹಿಂ ಹೇಳಿದರು.
ಅಸಾದುದ್ದೀನ್ ಓವೈಸಿ ಅವರ ಎಂಐಎಂ ಪಕ್ಷವು ಕಲಬುರಗಿ ಸೇರಿ ಹಲವು ಕಡೆಗೆ ಜೋರಾಗಿ ಪ್ರವೇಶಿಸುತ್ತಿದೆ. ಅದರಿಂದ ಯಾವುದೇ ಪರಿಣಾಮ ಆಗಲ್ಲ. ಮುಸ್ಲಿಂರು ತುಂಬಾ ಜಾಗೃತರಾಗಿದ್ದಾರೆ. ಅಂತಹರ ಆಟ ನಡೆಯಲ್ಲ ಎಂದು ತಿಳಿಸಿದರು. ಕಾಂಗ್ರೆಸ್ ನಾಯಕ ಲಾಲ್ಅಹ್ಮದ ಬಾಂಬೆಶೇಠ ಇದ್ದರು.