ಸಿ.ಎಸ್.ವಿಶ್ವನಾಥಶಾಸ್ತ್ರಿ,
ಶ್ರೀನಿವಾಸಪುರ: ಮಾವಿನನಗರಿ ಎಂದೇ ಹೆಸರಾಗಿರುವ ಶ್ರೀನಿವಾಸಪುರವು ಮಾವಿನ ಕಾಯಿಗಳನ್ನು ಕತ್ತರಿಸಿ ಆಮ್ಚೂರ್ ಪೌಡರ್ ಸಿದ್ಧಪಡಿಸುವಲ್ಲಿಯೂ ಹೆಸರುವಾಸಿಯಾಗಿದೆ.
ಎಪಿಎಂಸಿ ಮಾರುಕಟ್ಟೆ ಪಕ್ಕದಲ್ಲೇ ಇರುವ ಇಂದಿರಾ ನಗರದಲ್ಲಿ ಅಂದಾಜು ಸಾವಿರ ಕುಟುಂಬಗಳಿದ್ದು, ಬಹುತೇಕ ಕುಟುಂಬಗಳು ಆಮ್ಚೂರ್ನ ಕಚ್ಚಾವಸ್ತು ತಯಾರಿಕೆಯಲ್ಲಿ ತೊಡಗಿದ್ದಾರೆ. ಮಾವಿನಕಾಯಿ ಸೀಸನ್ನಲ್ಲಿ 2ರಿಂದ 3 ತಿಂಗಳು ಮಾರುಕಟ್ಟೆಗೆ ಬರುವ ಮಾವನ್ನು 5 ರಿಂದ 10 ರೂಗೆ ಖರೀದಿಸಿ, ಕಾಯಿಗಳನ್ನು ಕತ್ತರಿಸಿ, ಆಮ್ಚೂರ್ನ ಕಚ್ಚಾ ವಸ್ತುಗಳನ್ನು ತಯಾರಿಸುವುದನ್ನೇ ಕಾಯಕ ಮಾಡಿಕೊಂಡಿವೆ.
ವರ್ಷವಿಡೀ ಜೀವನಕ್ಕೆ ಬೇಕಾಗುವಷ್ಟು ಹಣ ಸಂಪಾದನೆ ಮಾಡಿಕೊಳ್ಳುತ್ತಾರೆ. ಈ ಕುಟುಂಬಗಳಿಗೆ ಆಮ್ಚೂರ್ ತಯಾರಿ ಕರಗತವಾಗಿದ್ದು, ಬೆಂಗಳೂರು, ಕೋಲಾರ, ಚಿಂತಾಮಣಿ ಮತ್ತಿತರ ನಗರ ಪ್ರದೇಶಗಳಿಗೆ ಮಾರಾಟ ಮಾಡುತ್ತಾರೆ.
ಆಮ್ ಚೂರ್ ಬಗ್ಗೆ : ಋತುವಿನ ಆರಂಭಿಕ ಮಾವಿನ ಕಾಯಿಗಳನ್ನು ಇನ್ನೂ ಹಸಿರು ಮತ್ತು ಪಕ್ವವಾಗದ ಸಂದರ್ಭದಲ್ಲಿ ಕೊಯ್ಲು ಮಾಡಲಾಗುತ್ತದೆ. ಕೊಯ್ಲು ಮಾಡಿದ ನಂತರ ಹಸಿರು ಮಾವಿನ ಕಾಯಿಗಳನ್ನು ತೆಳುವಾಗಿ ಕತ್ತರಿಸಿ, ಬಿಸಿಲಿನಲ್ಲಿ ಒಣಗಿಸಲಾಗುತ್ತದೆ. ಒಣಗಿದ ಹೋಳುಗಳು, ತಿಳಿ ಕಂದು ಮತ್ತು ಮರದ ತೊಗಟೆಯ ಪಟ್ಟಿಗಳನ್ನು ಹೋಲುತ್ತವೆ. ಈ ರೀತಿಯಲ್ಲಿ ಸಂಸ್ಕರಿಸಿದ ಬಹುಪಾಲು ಚೂರುಗಳನ್ನು ಅಮ್ಚೂರ್ ಆಗಿ
ಮಾರುಕಟ್ಟೆಯಲ್ಲಿ ಮಾರಾಟ ಮಾಡಲಾಗುತ್ತದೆ. ಇಂದಿರಾನಗರ ಗ್ರಾಮದ ಬಹುತೇಕರು ಇದನ್ನೇ ಕಾಯಕವನ್ನಾಗಿಸಿಕೊಂಡು ಜೀವನ ಕಟ್ಟಿಕೊಳ್ಳುತ್ತಾರೆ.
ನಮ್ಮ ಕಟುಂಬವು 10 ವರ್ಷಗಳಿಂದ ಈ ಕೆಲಸ ಮಾಡುತ್ತಿದೆ. ನಾವು ಎಪಿಎಂಸಿ ಮಾರುಕಟ್ಟೆಯಿಂದ 1 ಕೆ.ಜಿ ಮಾವಿನ ಕಾಯಿಗಳನ್ನು 5 ರಿಂದ 10 ರೂ.ಗಳಿಗೆ ಖರೀದಿಸಿ ತಂದು ಚೆನ್ನಾಗಿ ತೊಳೆದು, ಕತ್ತರಿಸಿ 1 ವಾರದ ಮೇಲ್ಪಟ್ಟು ಒಣಗಿಸಿ ಹದ ಮಾಡಿದ ನಂತರ ನಗರ ಪ್ರದೇಶಗಳಿಂದ ಬರುವ ವ್ಯಾಪಾರಸ್ಥರಿಗೆ 1 ಕೆ.ಜಿಗೆ 25 ರಿಂದ 50ರೂ.ಗಳವರೆಗೆ ಮಾರಲಾಗುವುದು.
ನವೀನ್, ಕೂಲಿ ಕಾರ್ಮಿಕ ಇಂದಿರಾನಗರ
ಕಳೆದ 3 ರಿಂದ 4 ವರ್ಷಗಳಿಂದ ನಾವು ಈ ವ್ಯಾಪಾರ ಮಾಡುತ್ತಿದ್ದೇವೆ. ಮಾವಿನ ಮಂಡಿಯಿಂದ 5 ರಿಂದ 10 ರೂ.ಗಳಿಗೆ ಖರೀದಿಸಿ, ಸಿದ್ಧಪಡಿಸಿ 1 ಕೆ.ಜಿಗೆ 15 ರಿಂದ 20 ರೂ.ಗಳಿಗೆ ಕೋಲಾರ, ಚಿಂತಾಮಣಿ ವ್ಯಾಪಾರಸ್ಥರಿಗೆ ಮಾರಾಟ ಮಾಡುತ್ತೇವೆ.
ಮುನೆಮ್ಮ ಕೂಲಿ ಕಾರ್ಮಿಕ, ಇಂದಿರಾನಗರ