ಬೂದಿಕೋಟೆ: ಬೂದಿಕೋಟೆ ಹೋಬಳಿ ಬಲಮಂದೆ ಗ್ರಾಪಂ ವ್ಯಾಪ್ತಿಯ ಹಲವು ಗ್ರಾಮಗಳಲ್ಲಿ ಕಳೆದೊಂದು ವಾರದಿಂದ ಕಾಡಾನೆಗಳ ಉಪಟಳ ಮುಂದುವರಿದಿದ್ದು, ಲಾಂತರ ರೂ.ಮೌಲ್ಯದ ಟೊಮ್ಯಾಟೊ, ಬದನೆ, ನೀರಿನ ಪೈಪುಗಳು, ಕೃಷಿಹೊಂಡ, ಹಲವು ಬೆಳೆಗಳನ್ನು ನಾಶ ಮಾಡಿವೆ.
ಬಂಗಾರಪೇಟೆ ತಾಲೂಕಿನ ಬೂದಿಕೋಟೆ ಹೋಬಳಿಯ ಗಡಿಭಾಗದ ಅರಣ್ಯ ಪ್ರದೇಶದಲ್ಲಿ ಬೀಡು ಬಿಟ್ಟಿರುವ ಕಾಡಾನೆಗಳ ಹಿಂಡು ಗಡಿಭಾಗದ ಗ್ರಾಮಗಳಲ್ಲಿ ಪುಂಡಾಟ ಮುಂದುವರಿಸಿವೆ. ಬಲಮಂದೆ ವ್ಯಾಪ್ತಿಯ ಗಡಿಭಾಗದ ನಾಡಗುಮ್ಮನಹಳ್ಳಿಯ ರೈತ ಬಿ.ಕೃಷ್ಣಪ್ಪ ಬೆಳೆದ ಟೊಮ್ಯಾಟೊ, ಬದನೆ, ಕೃಷಿಹೊಂಡ, ನೀರಿನ ಫಿಲ್ಟರ್, ಸುಮಾರು 50 ಕ್ರೇಟ್ ಟೊಮ್ಯಾಟೊ ಮತ್ತಿತರ ಬೆಳೆಗಳನ್ನು ನಾಶ ಮಾಡಿದ್ದು, ಕನುಮನಹಳ್ಳಿಯ ರೈತ ಎಂ.ವೆಂಕಟೇಶಪ್ಪ ನವರ ಬೀನ್ಸ್ ಬೆಳೆ ಚತ್ತಗುಟ್ಟಹಳ್ಳಿಯ ಮನ್ನೋಜಿ ರಾವ್ ಅವರ ಟೊಮ್ಯಾಟೊ, ಡ್ರಿಪ್ ಪೈಪುಗಳು ಹಾಗೂ ಇತರ ರೈತರ ಬೆಳೆಗಳನ್ನು ನಾಶ ಮಾಡಿವೆ. ಇದರಿಂದ ರೈತರಿಗೆ ಲಾಂತರ ರೂಪಾಯಿ ನಷ್ಟ ಉಂಟಾಗಿದೆ.
ಸಾಲಸೋಲ ಮಾಡಿ ಬೆಳೆದ ಬೆಳೆಗಳನ್ನು ಕಾಡಾನೆಗಳ ಹಿಂಡು ಪ್ರತಿ ದಿನ ಬಂದು ನಾಶ ಮಾಡುತ್ತಿವೆ. ಅರಣ್ಯ ಇಲಾಖೆ ಅಧಿಕಾರಿಗಳಿಗೆ ಮಾಹಿತಿ ನೀಡಿದರೂ ಸಿಬ್ಬಂದಿ ಸ್ಥಳಕ್ಕೆ ಬರುತ್ತಿಲ್ಲ ಎಂದು ಅರಣ್ಯ ಇಲಾಖೆ ವಿರುದ್ಧ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಗ್ರಾಮದ ಸಮೀಪದ ಕಾಡಿನಲ್ಲಿ ಬೀಡು ಬಿಟ್ಟಿರುವ ಕಾಡಾನೆಗಳಿಂದ ಬೆಳೆಗಳು ಕೈ ಸೇರುವ ಮುಂಚೆ ನಾಶವಾಗುತ್ತಿದೆ. ಅರಣ್ಯ ಇಲಾಖೆಯ ಅಧಿಕಾರಿಗಳ ಬಳಿ ಅಳಲು ತೋಡಿಕೊಂಡರೂ ಒಬ್ಬರೂ ಆನೆಗಳನ್ನು ಓಡಿಸಲು ಬರುತ್ತಿಲ್ಲ. ಈ ಭಾಗದಲ್ಲಿ ಸುಮಾರು 5 ಕಿಮೀ ನಷ್ಟು ಸೋಲಾರ್ ಫೆನ್ಸಿಂಗ್ ಅಳವಡಿಸದೆ ಅರಣ್ಯ ಇಲಾಖೆ ನಿರ್ಲಕ್ಷ್ಯ ವಹಿಸಿರುವ ಕಾರಣ ಬೆಳೆಗಳು ನಾಶವಾಗುತ್ತಿವೆ. ಆದಷ್ಟು ಬೇಗ ಸೋಲಾರ್ ಫೆನ್ಸಿಂಗ್ ಅಳವಡಿಸಿ ಆನೆಗಳಿಂದ ರೈತರ ಬೆಳೆ ಹಾಗೂ ಪ್ರಾಣವನ್ನು ರಸಬೇಕಿದೆ.
ಮನ್ನೋಜಿ ರಾವ್, ರೈತ ಚತ್ತಗುಟ್ಟಹಳ್ಳಿ
ಅರಣ್ಯಾಧಿಕಾರಿ ಧೋರಣೆ ಖಂಡಿಸಿ ಹೋರಾಟ:
ಬೂದಿಕೋಟೆ ಹೋಬಳಿಯ ನಾಡಗುಮ್ಮನಗಳ್ಳಿಯಲ್ಲಿ ಕಾಡಾನೆಗಳ ಹಾವಳಿಯಿಂದ ರೈತರ ಬೆಳೆ ನಷ್ಟವಾದ ಜಮೀನಿಗೆ ರೈತ ಸಂದ ಮುಖಂಡರೊಂದಿಗೆ ಉಪಾಧ್ಯಕ್ಷ ಕೆ. ನಾರಾಯಣಗೌಡ ಭೇಟಿ ನೀಡಿ ರೈತರಿಗೆ ಸಾಂತ್ವನ ಹೇಳಿದರು. ಕಾಡಾನೆಗಳ ಹಾವಳಿಗೆ ಶಾಶ್ವತ ಪರಿಹಾರ ನೀಡುವಲ್ಲಿ ವಿಫಲವಾಗಿರುವ ಅರಣ್ಯಾಧಿಕಾರಿಗಳ ರೈತ ವಿರೋಧಿ ಧೋರಣೆ ಖಂಡಿಸಿ ಜು. 6ರ ಬುಧವಾರ ಉಪ ಸಂರಕ್ಷಣಾಧಿಕಾರಿಗಳ ಮನೆ ಮುಂದೆ ಹೋರಾಟ ಮಾಡಲಾಗುತ್ತದೆ ಎಂದು ಹೇಳಿದರು. ಬೆಳೆ ಕಳೆದುಕೊಂಡ ರೈತ ಕೃಷ್ಣಪ್ಪ ಮಾತನಾಡಿ, ಆನೆಗಳು ಬೆಳೆ ನಾಶಮಾಡುತ್ತಿವೆ ಬಂದು ಓಡಿಸಿ ಎಂದು ಹೇಳಿದರೆ, ಆನೆ ಫೋಟೋ ತೆಗೆದು ಕಳಿಸಿ, ನೋಡಿ ಬಳಿಕ ಬರುತ್ತೇವೆಂಬ ಉಡಾಫೆ ಉತ್ತರ ಕೊಡುವ ಮುಖಾಂತರ ರೈತ ವಿರೋಧಿ ಧೋರಣೆ ಅನುಸರಿಸುತ್ತಿದ್ದಾರೆಂದು ಆಕ್ರೋಶ ವ್ಯಕ್ತಪಡಿಸಿದರು. ಕೋಲಾರ ತಾಲೂಕು ಅಧ್ಯಕ್ಷ ಈಕಂಬಳ್ಳಿ ಮಂಜುನಾಥ್, ಹಸಿರುಸೇನೆ ಜಿಲ್ಲಾಧ್ಯಕ್ಷ ಕಿರಣ್, ಚಲಪತಿ, ರೈತರಾದ ಮನ್ನೋಜಿರಾವ್, ಆನಂದರಾವ್ ಮಂಜುನಾಥರಾವ್, ಯಲ್ಲೋಜಿರಾವ್, ರವಿಕುಮಾರ್ ಮುಂತಾದವರು ಹಾಜರಿದ್ದರು.