ಚಿಂತಾಮಣಿ: ಹಿಂದು-ಮುಸ್ಲಿಮರ ಪವಿತ್ರ ಯಾತ್ರಾಸ್ಥಳ ಹಾಗೂ ಭಾವೈಕ್ಯತೆಯ ಕೇಂದ್ರವಾಗಿರುವ ಮುರುಗಮಲ್ಲ ಹಜರತ್ ಅಮ್ಮಾಜಾನ್ ಬಾವಾಜಾನ್ ದರ್ಗಾದ ಅಭಿವೃದ್ಧಿ ಶೂನ್ಯವಾಗಿದೆ ಎಂದು ರಾಜ್ಯ ಅಲ್ಪಸಂಖ್ಯಾತ ಆಯೋಗದ ಮಾಜಿ ಅಧ್ಯಕ್ಷ ಅನ್ವರ್ ಮಾನ್ಪಡಿ ಬೇಸರ ವ್ಯಕ್ತಪಡಿಸಿದರು.
ಶುಕ್ರವಾರ ದರ್ಗಾಗೆ ಭೇಟಿ ನೀಡಿ ಸುದ್ದಿಗಾರರೊಂದಿಗೆ ಮಾತನಾಡಿ, ದರ್ಗಾಗೆ ಎಷ್ಟು ಶಕ್ತಿ ಇದೆ ಎಂಬುದು ಹುಂಡಿ ಲೆಕ್ಕ ನೋಡಿದರೆ ಗೊತ್ತಾಗುತ್ತದೆ. ಮೂಲಭೂತ ಸೌಕರ್ಯಗಳನ್ನು ಕಲ್ಪಿಸಲು ವಕ್ಫ್ ಬೋರ್ಡ್ ಹಣ ಕೊಡುವ ಅವಶ್ಯಕತೆಯಿಲ್ಲ. ಇಲ್ಲಿನ ಹಣದಿಂದಲೇ ಅಭಿವೃದ್ಧಿಪಡಿಸಬಹುದು, ಆದರೆ ಅದ್ಯಾವುದು ಆಗಿಲ್ಲ ಎಂದರು.
4ವರ್ಷಗಳ ಹಿಂದೆ ವಕ್ಫ್ ಬೋರ್ಡ್ನ ಲಕ್ಷಾಂತರ ಹಣ ಚಿಂತಾಮಣಿಯ ಸ್ಥಳೀಯ ಬ್ಯಾಂಕ್ಗೆ ವರ್ಗಾವಣೆಯಾಗಿರುವುದು ಗಮನಕ್ಕೆ ಬಂದಿದೆ, ಅವ್ಯವಹಾರದಲ್ಲಿ ಭಾಗಿಯಾಗಿರುವ ರಾಜ್ಯ ವಕ್ಫ್ ಮಂಡಳಿ ಮಾಜಿ ಸಿಇಒ ಹಾಗೂ ಅಧಿಕಾರಿಗಳ ವಿರುದ್ಧ ಕ್ರಿಮಿನಲ್ ಕೇಸ್ ದಾಖಲಿಸಬೇಕೆಂದು ಸರ್ಕಾರಕ್ಕೆ ಮನವಿ ಮಾಡಿದ್ದೇನೆ, ಲೋಕಾಯುಕ್ತಕ್ಕೂ ಸಹ ದೂರು ನೀಡಿದ್ದೇನೆ ಎಂದರು.
ಕರ್ನಾಟಕ ಜನರಕ್ಷಕ ಸೇವಾ ಸಂಘದ ಅಧ್ಯಕ್ಷ ವಾಜಿದ್ ಖಾನ್, ಉಪಾಧ್ಯಕ್ಷ ನಯಾಜ್ ಅಹಮ್ಮದ್, ಕಾರ್ಯದರ್ಶಿ ಮುಕರುಮ್ ಅಹಮ್ಮದ, ಆರಿಫ್ಖಾನ್, ಉಮರ್, ಎಂ.ಝಡ್.ಆಲಿ, ಯಾಕೂಬ್ ಪಾಷಾ ಇತರರಿದ್ದರು.